ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟದಿಂದಲೇ ಯಶಸ್ವಿಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಕಾರ್ಯಕ್ರಮ ರೂಪಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಅಭಿವೃದ್ಧಿ ಯೋಜನೆಗಳಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪಂಚಾಯತ್ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುತ್ತಿವೆ. ಹಾಗಾಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ.
ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಮಿತಿಯನ್ನು 2019ರಲ್ಲಿ ರಚಿಸಲಾಗಿದೆ. ಆದರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿ ಗ್ರಾಮ ಪಂಚಾಯತ್ ಕೆಡಿಪಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ಸ್ಥಳೀಯ ಯುವಕ, ಯುವತಿ, ಸಂಘ,ಸಂಸ್ಥೆಗಳು, ಅಧ್ಯಕ್ಷರು, ಕಾರ್ಯದರ್ಶಿಗಳನ್ನ ನಿಯೋಜಿಸಲು ತೀರ್ಮಾನಿಸಲಾಗಿದ್ದು, ಅವರು ಆಹ್ವಾನಿತ ಸದಸ್ಯರಾಗಿರುತ್ತಾರೆ ಎಂದು ಆದೇಶ ಹೊರಡಿಸಲಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರತಿವರ್ಷ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇಲಾಖೆಯ ಕಾರ್ಯಕ್ರಮಗಳು ಗ್ರಾಮೀಣ ಮಟ್ಟದಿಂದಲೇ ಎಲ್ಲರಿಗೂ ತಲುಪಬೇಕೆಂಬ ಗುರಿ ಹೊಂದಲಾಗಿದೆ. ಆದರೆ, ಸಿಬ್ಬಂದಿ ಕೊರತೆಯಿಂದ ಪಂಚಾಯತ್ ಮಟ್ಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲು ಹಿನ್ನಡೆಯಾಗುತ್ತಿದೆ. ಹಾಗಾಗಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಸ್ಥಳೀಯರು, ಸಂಘ ಸಂಸ್ಥೆಗಳು, ಅಧ್ಯಕ್ಷರು, ಕಾರ್ಯದರ್ಶಿಗಳನ್ನ ನಿಯೋಜಿಸಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣ ಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲಾ ಹಳ್ಳಿಗಳಲ್ಲಿ, ದೇಸೀ, ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು ಗ್ರಾಮೀಣ ಕ್ರೀಡೋತ್ಸವವನ್ನು ಆಯೋಜಿಸಲಾಗುತ್ತಿದೆ. ಅಲ್ಲದೇ ‘ನಮ್ಮೂರ ಶಾಲೆಗೆ ನಮ್ಮ ಯುವಜನರು’ ಕಾರ್ಯಕ್ರಮವನ್ನು ಶಾಲೆಗಾಗಿ ಗಣನೀಯ ಕೊಡುಗೆ ನೀಡುವ ಯುವ ಸಂಘಗಳನ್ನು ತಾಲೂಕಿಗೆ ಒಂದರಂತೆ ಗುರುತಿಸಿ ಪುರಸ್ಕಾರ ನೀಡಲಾಗುತ್ತಿದೆ. ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯನ್ನು NSS ಸ್ವಯಂ ಸೇವಕರ ಮೂಲಕ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಸಹಾಯ ನೀಡಲಾಗುತ್ತದೆ.
ಆರ್ಡಿಪಿಆರ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 15 ಅಂಶಗಳ ಕಾರ್ಯಕ್ರಮ
ವಾರ್ಡ್ ಸಭೆ ಹಾಗೂ ಗ್ರಾಮ ಸಭೆ ಮೂಲಕ 5 ವರ್ಷ ದೂರದೃಷ್ಠಿ ಯೋಜನೆ ತಯಾರಿಸಿ, ಅದರಿಂದ ವಾರ್ಷಿಕ ಯೋಜನೆಗಳನ್ನು ರೂಪಿಸಲು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರಮ ಕೈಗೊಳ್ಳುವ ಸಲುವಾಗಿ 15 ಅಂಶಗಳನ್ನು ರಚಿಸಲಾಗಿದೆ.
1. ಗ್ರಾ.ಪಂ ವ್ಯಾಪ್ತಿಯಲ್ಲಿ MGNREGA ಮೂಲಕ 1-5 ಎಕರೆಯಲ್ಲಿ ಆಟದ ಮೈದಾನ ನಿರ್ಮಾಣ, ದೈಹಿಕ ಶಿಕ್ಷಕರ ಮೂಲಕ ನಿರ್ವಹಣೆ.
2. ಜಿ. ಪಂ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತು ಕ್ರೀಡಾ ಗಂಟು ಖರೀದಿಗೆ ಶೇ2% ರಷ್ಟು ಅನುದಾನ ಮೀಸಲಿರಿಸುವುದು.
3. ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಪುನಶ್ಚೇತನಗೊಳಿಸಲು ಸಾಂಸ್ಕೃತಿಕ ಕೇಂದ್ರಗಳ ಸ್ಥಾಪನೆ ಹಾಗೂ ಗ್ರಾಮೀಣ ಕಲಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆಗೆ ಯುವ ಸಂಘಗಳ ಮೂಲಕ ಉತ್ತೇಜನ ನೀಡುವುದು.
4. ಕರಕುಶಲ ಕಲೆ ಉತ್ಪನ್ನಗಳ UNDP portal www.Kaushalkar.comನಲ್ಲಿ ದಾಖಲಿಸುವುದು.
5. ಯುವ ಸಂಘಸಂಸ್ಥೆಗಳ ಮೂಲಕ ಮಾರುಕಟ್ಟೆಯ (APMC,Hopcoms) ಮೂಲಕ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸುವುದು.
6. ಯುವಜನ ಮೇಳ, ಕ್ರೀಡಾ ಮೇಳಗಳ ಆಯೋಜನೆ, ಧಾರ್ಮಿಕ ಸಾಮರಸ್ಯ ಮೂಡಿಸುವುದು.
7. ಉತ್ತಮ ಸಾಧಕರುಗಳಿಗೆ ಕ್ರೀಡಾ ಹಾಗೂ ಯುವ ಪ್ರಶಸ್ತಿ ಬಹುಮಾನ ವಿತರಣೆ.
8. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಯುವಕ/ಯುವತಿ, ಸಂಘ ಸಂಸ್ಥೆಗಳ ನೋಂದಣಿ ಮತ್ತು ಪ್ರೋತ್ಸಾಹ ನೀಡುವುದು.
9. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಿಶೇಷ ಕ್ರೀಡಾನ್ವೇಷಣೆ ಮತ್ತು ತರಬೇತಿ ನೀಡುವುದು.
10,. ಸಾಹಸವಾಯ ಕ್ರೀಡೆಗಳ ಅಡಿಯಲ್ಲಿ ಜಲಸಾಹಸ, ವಾಯು ಸಾಹಸ ಮತ್ತು ಭೂಸಾಹಸ ಕ್ರೀಡೆಗಳ
ತರಬೇತಿಯನ್ನು ಯುವಜನರಿಗೆ ಆಯೋಚಿಸುವುದು.
11.ಗ್ರಾಮೀಣ ಕ್ರೀಡಾಪಟುಗಳಿಗೆ ಕ್ರೀಡಾ ಪೌಷ್ಟಿಕಾಹಾರ ನೀಡುವುದು ಮತ್ತು ಕ್ರೀಡಾ ವಿಜ್ಞಾನದ ಮೂಲಕ ವೈಜ್ಞಾನಿಕ ತರಬೇತಿಯನ್ನು ನೀಡುವುದು.
12.ಯುವ ಜನರಿಗೆ ಮಾನಸಿಕ ಆರೋಗ್ಯವನ್ನು ಸದೃಢಗೊಳಿಸಲು, ಆಪ್ತ ಸಮಾಲೋಚನೆಯನ್ನು ಗ್ರಾಮ ಮಟ್ಟದಿಂದಲೇ ಆಯೋಜಿಸುವುದು.
13. ಕ್ರೀಡಾ ಕ್ಷೇತ್ರದಲ್ಲಿ, ಆಸಕ್ತಿ ತೋರುವ ಯುವ ಪ್ರತಿಭೆಗಳನ್ನು ಅನ್ವೇಷಣೆ ಮಾಡಿ ಸೂಕ್ತ ತರಬೇತಿ ನೀಡುವುದು.
14. NSS ಮೂಲಕ ಗ್ರಾಮ ಮಟ್ಟದಲ್ಲಿ, ಯುವ ಗ್ರಾಮಸಭೆ, ವಿಶೇಷ ವೈದ್ಯಕೀಯ ಶಿಬಿರಗಳು, ಶ್ರಮದಾನ ಶಿಬಿರಗಳನ್ನು ಆಯೋಜಿಸುವುದು.
15. ಪರಿಸರ ಮತ್ತು ಸಂರಕ್ಷಣೆ ಕಾರ್ಯಕ್ರಮಗಳ ಬಗ್ಗೆ ತೊಡಗಿಸಿಕೊಳ್ಳುವುದು.