ಅಂಕೋಲಾ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರವರ ಭಾವಚಿತ್ರಕ್ಕೆ ಮತ್ತು ಸಾಂವಿಧಾನಿಕ ಹುದ್ದೆಗೆ ಅವಮಾನಿಸಿದ ನ್ಯಾಯಾಧೀಶರ ವಿರುದ್ದ ಉತ್ತರ ಕನ್ನಡದ ಕರ್ನಾಟಕ ದಲಿತ ಸಂಘರ್ಷ ಸಮಿತಿ ದೂರು ಸಲ್ಲಿಸಿದೆ.
ತಪ್ಪಿತಸ್ಥ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದೆ. ಮಂಗಳವಾರ ದಲಿತ ಸಂಘಟನೆಗಳ ಒಕ್ಕೂಟ ಅಂಕೋಲಾ ಮತ್ತು ಅಂಬೇಡ್ಕರ ಯುವಕ ಮಂಡಳ ಬಾಳೆಗುಳಿ ಹಾಗೂ ಮಹಾರ ಸಮಾಜ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಅಂಕೋಲಾ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜ.26 ರಂದು 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಯಚೂರಿನ ಜಿಲ್ಲಾ ಕೋರ್ಟ್ ಆವರಣದಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ತನ್ನ ಪ್ರಭಾವವನ್ನು ಬಳಸಿ ಅಂಬೇಡ್ಕರರ ಭಾವಚಿತ್ರವನ್ನು ತೆರವುಗೊಳಿಸಿ ಧ್ವಜಾರೋಹಣ ನಡೆಸಿದ್ದರ ಕುರಿತು ಆಕ್ರೋಶ ವ್ಯಕ್ತವಾಗುತ್ತಿದ್ದು, ಅವರು ಕಾನೂನಿಗೆ ಅಗೌರವ ತೋರಿದ್ದಲ್ಲದೆ ಇಡೀ ಭಾರತೀಯ ನಾಗರಿಕರು ತಲೆ ತಗ್ಗಿಸುವಂತಾಗಿದೆ.
ಇಂತಹ ನ್ಯಾಯಾಧೀಶರಿಂದ ಪ್ರಾಮಾಣಿಕ ನ್ಯಾಯಾಧೀಶರಿಗೂ ಅವಮಾನವಾದಂತಾಗಿದೆ. ಈ ಪ್ರಕರಣವನ್ನು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದು ಮಲ್ಲಿಕಾರ್ಜುನ ಗೌಡ ನ್ಯಾಯಾಧೀಶರನ್ನು ಕಾನೂನಿನ ಕಾಯಿದೆ ಅಡಿಯಲ್ಲಿ ಶಿಕ್ಷೆಯನ್ನು ನೀಡಿ ಅವರನ್ನು ಅಮಾನತು ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಶಿರಸ್ತೇದಾರ ಗಿರೀಶ ಜಾಂಬಾವಳಿಕರ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಶಾಂತಾರಾಮ ಏ ಹುಲಸ್ವಾರ, ವಿನೋದ ಕೆ ಹುಲಸ್ವಾರ, ವಿಜಯ ಬಿ ಹುಲಸ್ವಾರ, ಅಶೋಕ ಶೆಡಗೇರಿ, ದರ್ಶನ ಎಸ್ ಹುಲಸ್ವಾರ, ಶ್ರೀನಿವಾಸ ಶೆಡಗೇರಿ, ರಾಹುಲ, ಶುಭಂ, ರಂಜನ್, ನಿತೇಶ, ರೇಶ್ಮಾ, ಸ್ವಾತಿ, ದೀಪಾ, ನಿರ್ಮಲಾ, ನಾಗೇಶ, ಮದನ ಇನ್ನಿತರರು ಇದ್ದರು.