ಹೊನ್ನಾವರ : ಭಾರತೀಯ ಸಂಸ್ಕೃತಿ, ಹಿಂದೂ ಧರ್ಮದ ವೈಶಾಲ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ಇಂದಿಗೂ ಯುವಜನರಿಗೆ ಯಾರು ಮಾದರಿ ಎಂದರೆ ಹೊಳೆಯುವ ಹೆಸರು ಅವರದ್ದೇ. ಅವರನ್ನು ಮಾದರಿಯಾಗಿಟ್ಟುಕೊಂಡು ಮುನ್ನುಗ್ಗುವ ಯುವಕರಿಂದಲೇ ದೇಶದ ಪ್ರಗತಿ ಸಾಧ್ಯ ಎಂದು ನಿವೃತ್ತ ಶಿಕ್ಷಕರಾದ ಎಸ್. ಜೆ. ಕೈರನ್ ಹೇಳಿದರು.
ಅವರು ಭಾರತ ಸರ್ಕಾರದ ಕ್ಷೇತ್ರ ಜನ ಸಂಘ ಕಾರ್ಯಾಲಯ ಶಿವಮೊಗ್ಗ, ಪ್ರಾದೇಶಿಕ ಜನಸಂಘ ಕಾರ್ಯಾಲಯ ಬೆಂಗಳೂರು, ವಾರ್ತಾ ಮತ್ತು ಪ್ರಚಾರ ಸಚಿವಾಲಯ ಹಾಗೂ ಎಂ. ಪಿ. ಇ. ಸೊಸೈಟಿಯ ಎಸ್. ಡಿ. ಎಂ ಪದವಿ ಮಹಾವಿದ್ಯಾಲಯದ ವಿದ್ಯಾಥಿ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಯುವಜನೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಯೌವ್ವನದಲ್ಲಿ ಸವಾಲುಗಳನ್ನು ಸ್ವೀಕರಿಸಬೇಕು. ಗೆದ್ದರೆ ಮಾರ್ಗದರ್ಶಕರಾಗುತ್ತೇವೆ. ಸೋತರೆ ಅನುಭವ ಸಿಗುತ್ತದೆ. ಜ್ಞಾನಕ್ಕಾಗಿ ಯಾರನ್ನಾದರೂ ಬೇಡಬಹುದು. ಅನ್ನಕ್ಕಾಗಿ ಮಾತ್ರ ಯಾರನ್ನು ಬೇಡಬಾರದು. ಇಂದಿನ ಯುವಕರು ಆದಷ್ಟು ಹಣ, ಮೀಡಿಯಾ, ಮೊಬೈಲ್ ಮತ್ತು ಮೋಟಾರ್ ಬೈಕ್ಗಳಿಂದ ದೂರವಿರುವುದನ್ನು ಕಲಿಯಬೇಕು. ವಿವಿಧ ಒತ್ತಡಗಳಿಂದ ಯುವಕರು ಆತ್ಮಹತ್ಯೆಯಂತಹ ಹೇಯಕೃತ್ಯಗಳಿಗೆ ಇಳಿಯಬಾರದು ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ಉಪನ್ಯಾಸಕ ಡಾ. ಅಭಿಮಾನ್ ಶೆಟ್ಟಿ ಓಮಿಕ್ರಾನ್ ಕೋವಿಡ್ ೧೯ ಸೂಕ್ತ ನಡವಳಿಕೆಗಳು ಹಾಗೂ ಲಸಿಕಾಕರಣದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮವನ್ನು ಎಂ. ಪಿ. ಇ. ಸಂಸ್ಥೆಯ ಕಾರ್ಯದರ್ಶಿ ಎಸ್. ಎಮ್. ಭಟ್ಟ ಉದ್ಘಾಟಿಸಿದರು. ಪ್ರಾಚರ್ಯರಾದ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಯುವ ಸಪ್ತಾಹದ ಆಚರಣೆಯ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಪ್ರಧಾನ ಕಾರ್ಯದರ್ಶಿ ಕುಮಾರ ನಮನ್ ಹೊನ್ನಾವರ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರದಲ್ಲಿ ‘ಶಂಭುಲಿಂಗೇಶ್ವರ ಯಕ್ಷನಾಟ್ಯಮೇಳ ಸೊರಬ, ಶಿವಮೊಗ್ಗ’ ಇವರಿಂದ ಕೋವಿಡ್ 19 ಜಾಗೃತಿ ಕುರಿತು ಸ್ವಾಸ್ತ್ಯೋಪಾಖ್ಯಾನ ಯಕ್ಷಗಾನ ಪ್ರಸಂಗ ನಡೆಯಿತು. ಗೋಡೆ ಪ್ರಶಾಂತ ಹೆಗಡೆಯವರ ಸಾರಥ್ಯದಲ್ಲಿ ನಡೆದ ಯಕ್ಷಗಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.