ಮುಂಡಗೋಡ : ಚಾಲಕರು ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರಯಾಣಿಕರನ್ನು ಕರೆದೊಯ್ಯುತ್ತಾರೆ ಎಲ್ಲರ ಪ್ರೀತಿಯನ್ನು ಗಳಿಸುವವರು ಚಾಲಕ ವೃತ್ತಿ ಬಗ್ಗೆ ಕೀಳರಿಮೆ ಬೇಡ ಎಂದು ಜಿಲ್ಲಾ ಅನಿಲ ವಿತರಕರ ಸಂಘದ ಅಧ್ಯಕ್ಷ ಬಸವರಾಜ ಒಶಿಮಠ ಹೇಳಿದರು.
ಪಟ್ಟಣದ ದೈವಜ್ಞ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಚಾಲಕರ ಒಕ್ಕೂಟದ ಜಿಲ್ಲಾ ಹಾಗೂ ತಾಲೂಕು ಘಟಕಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಚಾಲಕರ ಪಾತ್ರ ದೊಡ್ಡದು. ಚಾಲಕರು ತಮ್ಮ ಕೆಲಸವನ್ನು ಒಂದು ದಿನ ನಿಲ್ಲಿಸಿದರೆ ಎಲ್ಲವೂ ನಿಂತು ಹೋಗುತ್ತದೆ. ಸಂಸಾರ ಬಿಟ್ಟು ದೂರದ ಊರುಗಳಿಗೆ ವಾರಗಟ್ಟಲೆ, ತಿಂಗಳುಗಟ್ಟಲೆ ಹೋಗಿರುತ್ತಾರೆ. ಯುವಕರು ಸಂಘಟನೆಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮೊದಲ ಪದ್ಮವೀರ ಪ್ರಶಸ್ತಿಯನ್ನು ಚಾಲಕ ಅಬ್ದುಲ್ ಹಮೀದ್ಗೆ ನೀಡಲಾಗಿತ್ತು ಎಂದರು.
ಮುನ್ನಾ ಮುಕ್ತಿಯಾರ ಮಾತನಾಡಿ ಚಾಲಕರಿಗೆ ಆಗುತ್ತಿರುವ ಅನ್ಯಾಯ ನೋಡಿ ತುಂಬಾ ಕಷ್ಟಪಟ್ಟು ಜಿ.ನಾರಾಯಣಸ್ವಾಮಿ ನೇತೃತ್ವದಲ್ಲಿ ರಾಜ್ಯ ಸಂಘಟನೆ ಹುಟ್ಟು ಹಾಕಲಾಯಿತು. ಚಾಲಕರಿಗೆ ಸವಲತ್ತುಗಳು ಸರಿಯಾಗಿ ತಲುಪುತ್ತಿಲ್ಲ. ಗೌರವ ಸಿಗುತ್ತಿಲ್ಲ. ಚಾಲಕರ ಮಕ್ಕಳಿಗೆ ಶಿಕ್ಷಣದ ಯಾವುದೇ ಸೌಲಭ್ಯಗಳು ಇಲ್ಲ. ೩೧ ಜಿಲ್ಲೆಗಳಲ್ಲಿ ನಮ್ಮ ಸಂಘಟನೆ ಹೆಮ್ಮರವಾಗಿ ಬೆಳೆದು ನಿಂತಿದೆ. ಪ್ರತಿಯೊಬ್ಬ ಚಾಲಕನಿಗೆ ೪ಲಕ್ಷ ರೂ. ಆರೋಗ್ಯ ವಿಮೆ ನೀಡಲಾಗುವುದು ಎಂದರು.
ಪಿಎಸ್ಐ ನಿಂಗಪ್ಪ ಜಕ್ಕಣ್ಣವರ ಮಾತನಾಡಿ ಎಲ್ಲ ವಾಹನಗಳ ಚಾಲಕರು ವಾಹನಗಳ ಬಗ್ಗೆ ಕಾಳಜಿ ವಹಿಸಬೇಕು. ವಾಹನಗಳ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು, ಸಮವಸ್ತ್ರ ಧರಿಸಬೇಕು, ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಏನಾದರೂ ತೊಂದರೆಯಾದಲ್ಲಿ 112 ಕ್ಕೆ ಕರೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ಹಿರಿಯ ಚಾಲಕರನ್ನು ಸನ್ಮಾನಿಸಲಾಯಿತು. ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ಈ ವೇಳೆ ತಾಲೂಕು ಅಧ್ಯಕ್ಷ ದೀಪಕ ಕುರುಬರ, ಅವಿನಾಶ ಪಾದಗಟ್ಟಿ, ಸಮೀರ್ಸಾಬ್ ಕೊಳ್ಳಿ, ಸತೀಶ ಆಚಾರಿ, ಸೈನಿ ಡಿಸೋಜಾ, ಸತೀಶ ಕೀರ್ತಪ್ಪನವರ, ಲಿಂಗರಾಜ ಖನ್ನೂರ, ಅಶೋಕ ಅಂಬಿಗೇರ, ಉದಯ ಗೊಂದಳೆ, ಶ್ರೀಧರ ಛಬ್ಭಿ, ಮಂಜುನಾಥ ಪಟ್ಯಾಡಿಯಲ್, ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು, ಚಾಲಕರು ಇದ್ದರು. ದಿನೇಶ ವೆರ್ಣೇಕರ ಕಾರ್ಯಕ್ರಮ ನಿರೂಪಿಸಿದರು.