ಕಾರವಾರ : ಮಹಾತ್ಮಾ ಗಾಂಧಿಜಿಯವರನ್ನೊಳಗೊಂಡಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದಲೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು , ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತೆತ್ತು ಹುತ್ಮಾತ್ಮರಾದವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ರವಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಾಂಧಿಜಿಯವರ 74ನೇ ಪುಣ್ಯ ಸ್ಮರಣೆ ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತೆತ್ತು ಹುತ್ಮಾತ್ಮರಾದವರ ಸ್ಮರಣಾರ್ಥವಾಗಿ ಮಹಾತ್ಮ ಗಾಂಧಿಜಿಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ , ಎರಡು ನಿಮೀಷ ಮೌನಾಚರಣೆಯನ್ನಾಚರಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿಜಿಯವರು 1948 ರ ಜ. 30 ರಂದು ಗುಂಡಿಗೆ ಬಲಿಯಾದ ದಿನವನ್ನೇ ಹುತ್ಮಾತ್ಮರ ದಿನಾಚಾರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಇದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರ ತ್ಯಾಗವನ್ನು ನೆನೆಯುವ ದಿನವಾಗಿದೆ. ನಾವು ಜಾತಿ, ಮತ ಪ್ರಾಂತ್ಯಗಳ ಆಧಾರದಲ್ಲಿ ಪೈಪೋಟಿ ನಡೆಸಿ ಒಬ್ಬರಿಗೊಬ್ಬರು ದ್ವೇಷ ಸಾರಿದಲ್ಲಿ ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಗೌರವಿಸಲು ಸಾಧ್ಯವಾಗುವದಿಲ್ಲ. ಮಹಾತ್ಮರ ತ್ಯಾಗದ ಮೇಲೆ ನಮಗೆ ಸ್ವಾತಂತ್ರ್ಯ ಬಂದಿದ್ದು, ಇದರ ಮಹತ್ವ ಅರಿಯಬೇಕೆಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ ಮಾತನಾಡಿ ದೇಶಕ್ಕಾಗಿ ಬಲಿದಾನ ನೀಡಿದಂತಹವರನ್ನು ಮತ್ತು ಹೋರಾಟದಲ್ಲಿ ಅವರ ಪಾತ್ರವನ್ನು ನೆನೆಯುವುದೇ ಹುತ್ಮಾತ್ಮರ ದಿನಾಚಾರಣೆಯ ಉದ್ದೇಶವಾಗಿದೆ ಎಂದರು.
ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೊಡ ಮಾತನಾಡಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿ ಹೋರಾಟಗಾರರಾಗಿದ್ದ ಮಹಾತ್ಮಾ ಗಾಂಧಿಜಿಯವರ ಜೀವನವೇ ಒಂದು ಸಂದೇಶವಾಗಿದೆ. ಸರಳ ಸಜ್ಜನಿಕೆಯ ಶಾಂತಿದೂತರಾಗಿದ್ದ ಅವರು ಪ್ರೀತಿಯಿಂದಲೇ ಹೊರಾಟವನ್ನು ಗೆಲ್ಲಬಹುದಾಗಿದೆ ಎಂದು ತೋರಿಸಿ ಕೊಟ್ಟವರು. ಸ್ವಾತಂತ್ರ್ಯ ಹೋರಾಟಗಾರರ ಜೀವನ ಸಂದೇಶ, ಮಹತ್ವ ತಿಳಿದುಕೊಂಡಲ್ಲಿ ನಮ್ಮ ಜೀವನವೂ ಸಾರ್ಥಕವಾಗುತ್ತದೆ ಎಂದರು.
ತರಬೇತಿ ನಿರತ ಐ ಎ ಎಸ್ ಅಧಿಕಾರಿ ಅವಿನಾಶ ಶಿಂದೆ ಅವರು ಮಾತನಾಡಿ ಇಂದು ಹುತ್ಮಾತ್ಮರ ದಿನಾಚಾರಣೆಯನ್ನು ಯಾಕೆ ಆಚರಿಸಲಾಗುತ್ತಿದೆ ಎಂಬುದನ್ನು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಂಡು , ಶಾಂತಿ ಸೌಹಾರ್ದದತ್ತ ಸಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ವಿವಿಧ ವಿಭಾಗಗಳ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.