ಯಲ್ಲಾಪುರ: ಮುಂದಿನ ಭವಿಷ್ಯಕ್ಕೆ ಅನುಕೂಲವಾಗುವಂತೆ ಅರಣ್ಯದ ಅಭಿವೃದ್ಧಿ ಪಡಿಸಿ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಹೇಳಿದರು.
ಅವರು ತಾಲೂಕಿನ ಮಾವಿನಮನೆ ವ್ಯಾಪ್ತಿಯ ಗ್ರಾಮ ಅರಣ್ಯ ಸಮೀತಿ ಕಾನೂರು ವಾಗಳ್ಳಿ ಇದರ ಪಾಲಿಸಿದರೆ ಪಾಲು ಯೋಜನೆಯಲ್ಲಿ ದೊರೆತ ಮೊತ್ತದಲ್ಲಿ ಲಕ್ಷ್ಮೀ ನರಸಿಂಹ ದೇವಸ್ಥಾನ ವಾಗಳ್ಳಿ ಹಾಗೂ ರಾಮಲಿಂಗೇಶ್ವರ ದೇವಸ್ಥಾನ ಕಾನೂರುಗಳಿಗೆ ಅಡುಗೆ ಪಾತ್ರೆಗಳನ್ನು ವಿತರಿಸಿ ಮಾತನಾಡಿದರು.
ಭೂಕುಸಿತ, ಕಾಡುಪ್ರಾಣಿಗಳಿಂದಾದ ಹಾನಿ ಗಳಿಗೆ ಇಲಾಖೆ ನೀಡುವ ಸಾಂತ್ವನ ಮೊತ್ತದ ಕುರಿತು ತಿಳಿಸಿದ ಅವರು ರೈತರು ತಮಗೆ ಉಂಟಾದ ಸಮಸ್ಯೆ ಗಳನ್ನು ಗ್ರಾಮ ಅರಣ್ಯ ಸಮೀತಿ ಮೂಲಕ ಇಲಾಖೆಯನ್ನ ಸಂಪರ್ಕಿಸುವಂತೆ ಸೂಚಿಸಿ ಇಲಾಖೆಯ ಸಹಯೋಗದಲ್ಲಿ ಪ್ರವಾಸಿ ತಾಣವಾದ ಕಾನೂರು ಫಾಲ್ಸ್ ಅಭಿವೃದ್ಧಿಯ ಅವಶ್ಯಕತೆ ತಿಳಿಸಿದರು.
ಇಡಗುಂದಿ ವಲಯ ಅರಣ್ಯಾಧಿಕಾರಿ ಪೆಡ್ನೇಕರ ರವರು ಅರಣ್ಯ ರಕ್ಷಣೆ,ಬೆಂಕಿ ರಕ್ಷಣೆ ವಿಧಾನ ಕುರಿತು ವಿವರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಸನ್ನ ಗಾಂವ್ಕಾರ ವಾಗಳ್ಳಿ ಗ್ರಾಮ ಅರಣ್ಯ ಸಮೀತಿಯ ಹಾಗೂ ಗ್ರಾಮದ ಸಮಗ್ರಚಿತ್ರಣವನ್ನು ನೀಡಿ ಕಳೆದ ೧೦ ವರ್ಷಗಳಲ್ಲಿ ಗ್ರಾಮದಲ್ಲಿ ಒಂದೇ ಒಂದು ಅರಣ್ಯ ಅಪರಾಧ ಹಾಗೂ ಬೆಂಕಿಯ ಪ್ರಕರಣ ಗಳು ನಡೆದಿಲ್ಲ ಹಾಗೂ ಜೀವಸಂಕುಲಗಳ ಬಗ್ಗೆ ಜನರಲ್ಲಿ ಅರಿವು ಮೂಡಿರುವದು ಕಂಡು ಬಂದಿದೆ ಎಂದರು.
ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಅರಣ್ಯಸಮೀತಿ ಅಧ್ಯಕ್ಷ ಗಣಪತಿ ರಾ ಗಾಂವ್ಕಾರ,ಗ್ರಾಮ ಪಂಚಾಯತ್ ಸದಸ್ಯ ಮಾಚಣ್ಣ ಹಲಗುಮ ವಾಗಳ್ಳಿ ದೇವಸ್ಥಾನದ ಚಂದ್ರಶೇಖರ ಗಾಂವ್ಕಾರ. ಕಾನೂರು ದೇವಸ್ಥಾನದ ಅಧ್ಯಕ್ಷ ರಾಮಚಂದ್ರ ಗಾಂವ್ಕಾರ ಉಪಸ್ಥಿತರಿದ್ದರು.ಶಿವರಾಮ ಗಾಂವ್ಕಾರ ವಂದಿಸಿದರು.