ಕಾರವಾರ: ಬೃಹತ್ ಯೋಜನೆಗಳಲ್ಲೊಂದಾದ ಸೀಬರ್ಡ್ ನೌಕಾನೆಲೆಯಲ್ಲಿ ವಿವಿಧ ಕಂಪೆನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿಯುವ ಕಾರ್ಮಿಕರಿಗೆ ಸೂಕ್ತ ರೀತಿಯ ವೇತನ, ಪಿ.ಎಫ್ ನೀಡದೇ ಅನ್ಯಾಯ ಎಸಗಲಾಗುತ್ತಿದೆ ಎಂದು ಮಾಜಿ ಶಾಸಕ ಸತೀಶ ಸೈಲ್ ಆರೋಪಿಸಿದ್ದಾರೆ.
ಶುಕ್ರವಾರ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಅವರು, ತಾಲೂಕಿನ ಸೀಬರ್ಡ್, ಕೈಗಾ ಹಾಗೂ ಕೆ.ಪಿ.ಸಿ.ಐ.ಎಲ್ನಲ್ಲಿ ಸ್ಥಳೀಯರಿಗೆ ನೌಕರಿ ನೀಡುವ ವಿಷಯದಲ್ಲಿ ಆದ್ಯತೆ ನೀಡುತ್ತಿಲ್ಲ. ಅಲ್ಲದೇ, ಸೀಬರ್ಡ್ನಲ್ಲಿ ವಿವಿಧ ವಿಭಾಗದ ಕಾಮಗಾರಿ ನಡೆಸುತ್ತಿರುವ ಹಲವು ಕಂಪೆನಿಗಳು ಗುತ್ತಿಗೆ ಕಾರ್ಮಿಕರಿಗೆ ಸೂಕ್ತ ರೀತಿಯಲ್ಲಿ ವೇತನ ಪಾವತಿ ಮಾಡುತ್ತಿಲ್ಲ. ಪಿ.ಎಫ್ ಕೂಡ ನೀಡದೇ ಅನ್ಯಾಯ ಎಸಗಲಾಗುತ್ತಿದೆ. ಇದರಿಂದ ಗುತ್ತಿಗೆ ಕಾರ್ಮಿಕರು ನಷ್ಟದ ಜೊತೆಗೆ ಕಾನೂನಾತ್ಮಕವಾಗಿ ಲಭಿಸಬೇಕಾದ ಸವಲತ್ತುಗಳೂ ಸಹ ಲಭಿಸುತ್ತಿಲ್ಲ ಎಂದ ಅವರು, ಸ್ಥಳೀಯರಿಗೆ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ನೂತನವಾಗಿ ಸೀಬರ್ಡ್ ಕಾಂಟ್ರ್ಯಾಕ್ಟ್ ಡೈವರ್ಸ್ ಮತ್ತು ವರ್ಕರ್ಸ್ ಯೂನಿಯನ್ ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಸೀಬರ್ಡ್ನಲ್ಲಿ ನವಯುಗ, ಎಲ್ಆ್ಯಂಡ್ಟಿ ಬಾಲಾಜಿ, ಐಟಿಡಿಸಿ, ನಾಗಾರ್ಜುನ, ಶಾಪುರ್ಜಿ, ಸ್ಕ್ವಾರ್ ಸೆಕ್ಯೂರಿಟಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಂಪೆನಿಗಳು ಸ್ಥಳೀಯರಿಗೆ ನೌಕರಿ ನೀಡುತ್ತಿಲ್ಲ. ಸ್ಥಳೀಯರಿಗೆ ಪ್ರಥಮ ಆದ್ಯತೆಯಲ್ಲಿ ನೌಕರಿ ನೀಡಬೇಕು. ಇಲ್ಲಿನ ವಿವಿಧ ಕಂಪೆನಿಗಳಲ್ಲಿ ಚಾಲಕ, ವಿವಿಧ ವಿಭಾಗದಲ್ಲಿ ಕೆಲಸ ಮಾಡುವವರು, ಕಲಾಸಿಗಳು ಸ್ಥಳೀಯವಾಗಿಯೇ ಇದ್ದಾರೆ. ಆದರೆ ಇಲ್ಲಿನವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದೇ ಇರುವುದು ವಿಪರ್ಯಾಸವಾಗಿದೆ ಎಂದು ಹೇಳಿದರು.
ಈ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಹೆಚ್ಚಿನ ನೌಕರರು ಬಿಹಾರ್, ಝಾರ್ಖಂಡ್ ಹಾಗೂ ಇನ್ನಿತರ ರಾಜ್ಯದಿಂದ ಬಂದವರೇ ಆಗಿದ್ದಾರೆ. ಸ್ಥಳೀಯರಿಗೆ ನೌಕರಿ ನೀಡಿದರೂ ಸಹ ಗುತ್ತಿಗೆದಾರ ಕಂಪನೆಯವರು ಇಲ್ಲಿನವರ ಮೇಲೆ ದೌರ್ಜನ್ಯ ಮಾಡುತ್ತಿದೆ. ತೀರಾ ಕಳಪೆ ಮಟ್ಟದಲ್ಲಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪವಿದೆ. ಸ್ಥಳೀಯರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಎಲ್ಲ ಸೌಲಭ್ಯಗಳಿಂದ ವಂಚನೆ ಮಾಡುತ್ತಿದ್ದಾರೆ. ಅಲ್ಲದೇ, ಗುತ್ತಿಗೆದಾರರು ಕಾರ್ಮಿಕರ ಎಂಟಿಎA ತಮ್ಮ ಬಳಿ ಇಟ್ಟುಕೊಂಡು ನೀಡುವ ಅಲ್ಪ ಮಟ್ಟದ ವೇತನದಿಂದಲೂ ಹಣ ಪಡೆಯುತ್ತಿದ್ದಾರೆ. ಇದು ಈ ಹಿಂದೆ ಕೈಗಾದಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿಯುವ ನೌಕರರ ಜೊತೆಗೆ ಆಗಿದೆ. ಇದು ಸೀಬರ್ಡ್ ಗುತ್ತಿಗೆ ಕಾರ್ಮಿಕ ಜೊತೆಗೂ ಆಗುವ ಸಾಧ್ಯತೆ ಇದ್ದು, ಈ ಬಗ್ಗೆ ಸಂಬAಧಪಟ್ಟವರು ಗಮನ ಹರಿಸಬೇಕಾಗಿದೆ ಎಂದರು.
ಇಲ್ಲಿನ ಕಂಪೆನಿಗಳಾದ ನವಯುಗ, ಎಲ್ಆ್ಯಂಡ್ಟಿ ಬಾಲಾಜಿ, ಐಟಿಡಿಸಿ, ನಾಗಾರ್ಜುನ, ಶಾಪುರ್ಜಿ, ಸ್ಕ್ವಾರ್ ಸೆಕ್ಯೂರಿಟಿಯವರು ಕಾರ್ಮಿಕರಿಗೆ ಕಾನೂನಿನ ಪ್ರಕಾರ ನೀಡಬೇಕಾದ ಪಿಎಫ್ ಒದಗಿಸುತ್ತಿಲ್ಲ. ನೌಕರರಿಗೆ ಕನಿಷ್ಠ ವೇತನವನ್ನೂ ನೀಡದೆ, ಬ್ಯಾಂಕ್ ಖಾತೆಗಳನ್ನು ತೆರೆದು ಎಟಿಎಂಗಳನ್ನು ಗುತ್ತಿಗೆ ಕಂಪನಿಗಳೇ ಇಟ್ಟುಕೊಳ್ಳುತ್ತಿದ್ದು, ಸೀಬರ್ಡ್ನ ಸ್ಕ್ವೇರ್ ೭ ಮತ್ತು ವಿಎಸ್ಎಫ್ ಸೆಕ್ಯುರಿಟೀಸ್ ಕಂಪನಿಗಳು ಸುಮಾರು ೧೫೦ ನೌಕರರ ವರ್ಷದ ಪಿಎಫ್ ಸಹ ಪಾವತಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತನ್ನ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಈ ಸೀಬರ್ಡ್ ಕಾಂಟ್ರಾಕ್ಟ್ ಡ್ರೈವರ್ಸ್ ಮತ್ತು ವರ್ಕರ್ಸ್ ಯೂನಿಯನ್ಗೆ ಉಪಾಧ್ಯಕ್ಷರಾಗಿ ಗಿರೀಶ್ ಆಗೇರ್, ಪ್ರಸನ್ನ ಹುಲಸ್ವಾರ್, ವಿಶಾಲ್ ಕಲ್ಗುಟ್ಕರ್, ಪ್ರಧಾನ ಕಾರ್ಯದರ್ಶಿಯಾಗಿ ಹಸನ್ ಶೇಖ್, ಕಾರ್ಯದರ್ಶಿ ಅಮೃತ್ ರೇವಣಕರ್, ಖಜಾಂಚಿಯಾಗಿ ಗಜಾನನ ನಾಯ್ಕ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕೆ. ಶಂಭು ಶೆಟ್ಟಿ ಸೇರಿದಂತೆ ಸೀಬರ್ಡ್ ಕಾಂಟ್ರಾಕ್ಟ್ ಡ್ರೈವರ್ಸ್ ಮತ್ತು ವರ್ಕರ್ಸ್ ಯೂನಿಯನ್ನ ಪದಾಧಿಕಾರಿಗಳು ಇದ್ದರು.
ಕಡಿಮೆ ವೆಚ್ಚದಲ್ಲಿ ಬಸ್ ವ್ಯವಸ್ಥೆ:
ಕಾರವಾರ ಭಾಗದ ಸಾವಿರಾರು ಯುವಕರು ಗೋವಾದ ವೇರ್ಣಾದ ವಿವಿಧ ಕಂಪೆನಿಗಳಿಗೆ ತೆರಳುವವರಿದ್ದು, ಸದ್ಯ ರೈಲ್ವೆ ವ್ಯವಸ್ಥೆ ಇಲ್ಲವಾಗಿತ್ತು. ಈ ಬಗ್ಗೆ ಗೋವಾ ಸರಕಾರ ಜೊತೆ ಮಾತನಾಡಿ, ೧೬೦೦ ರೂ. ಪ್ರತಿ ತಿಂಗಳ ವೆಚ್ಚದ ರಿಯಾಯತಿ ದರದಲ್ಲಿ ಗೋವಾ ಗಡಿಯಿಂದ ವೇರ್ಣಾದ ವಿವಿಧ ಕಂಪೆನಿಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಅನೇಕ ಉದ್ಯೋಗಿಗಳಿಗೆ ಅನುಕೂಲವಾಗಿದೆ.
ಸಾವಿರಕ್ಕೂ ಅಧಿಕ ಟ್ಯಾಕ್ಸ್ ತುಂಬದ ವಾಹನಗಳು:
ಸೀಬರ್ಡ್ನಲ್ಲಿ ಕಾರ್ಯನಿರ್ವಹಿಸುತ್ತ್ತಿರುವ ವಿವಿಧ ಕಂಪೆನಿಗಳ ಅಡಿಯಲ್ಲಿ ಸಾವಿರಕ್ಕೂ ಅಧಿಕ ವಿವಿಧ ವಾಹನಗಳು ಇವೆ. ಇದು ಬೇರೆ ರಾಜ್ಯದ ನೋಂದಣಿ ಹೊಂದಿದೆ. ಈ ವಾಹನಗಳು ರಾಜ್ಯಕ್ಕೆ ಬಂದಾಗ ಸ್ಥಳೀಯ ಆರ್.ಟಿ.ಓಗೆ ಟ್ಯಾಕ್ಸ್ ತುಂಬಬೇಕು. ಆದರೆ ಅದನ್ನು ತುಂಬದೇ ಇರುವುದರಿಂದ ಸರಕಾರದ ರಾಜಧನವೂ ಇಲ್ಲದಂತಾಗಿದೆ. ಈ ಬಗ್ಗೆ ಇಲ್ಲಿನ ಆರ್.ಟಿ.ಓ ಅಧಿಕಾರಿಗೆ ದೂರಿದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಸೀಬರ್ಡ್ ಒಳಗೆ ನಮಗೆ ಬಿಡುವುದಿಲ್ಲ ಎಂದು ಆರ್.ಟಿ.ಓ ತಪ್ಪಿಸಿಕೊಳ್ಳುತ್ತಿದ್ದಾರೆ ಮಾಜಿ ಶಾಸಕ ಸೈಲ್ ಆರೋಪಿಸಿದ್ದಾರೆ.