ಕುಮಟಾ: ಸಂಭ್ರಮಿಸಬೇಕಾದ ಸಂದರ್ಭದಲ್ಲಿ ಇಂದು ಸರಳತೆ ಮನೆಮಾಡಿದೆ. ವಿದ್ಯಾರ್ಥಿಗಳ ನಲಿವಿನ ನಡುವೆ ಕಂಗೊಳಿಸಬೇಕಾದ ಕಾರ್ಯಕ್ರಮವಿಂದು ವಿದ್ಯಾರ್ಥಿಗಳಿಲ್ಲದೇ ಆಚರಿಸಲ್ಪಡುತ್ತಿರುವುದು ಬೇಸರದ ಸಂಗತಿ. ಕೊರೋನಾ ಕಾರಣದಿಂದ ಇಡೀ ಜಗತ್ತಿನ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಮೂರೂರಿನ ವಿದ್ಯಾನಿಕೇತನ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಆರ್ ಜಿ ಭಟ್ಟ ನುಡಿದರು.
ಅವರು ಪ್ರಗತಿ ವಿದ್ಯಾಲಯದಲ್ಲಿ ಏರ್ಪಡಿಸಿರುವ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಮಹಾನ್ ನಾಯಕರ ತ್ಯಾಗದ ಫಲವಾಗಿ ದೊರೆತ ಸಂವಿಧಾನದಿಂದ, ಉತ್ತಮ ಆಡಳಿತದಿಂದ ಇಡೀ ಪ್ರಪಂಚವೇ ನಮ್ಮತ್ತ ನೋಡುವಂತಾಗಿದೆ. ಬಾಹ್ಯ ಒತ್ತಡದ ನಡುವೆಯೂ ನಾವಿಂದು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಿದ್ದೇವೆ. ದೇಶದ ಗಡಿ ಭಾಗದಲ್ಲಿ ಕೆಲವು ಪ್ರಚೋದಿತ ಕೃತ್ಯಗಳು ನಮ್ಮ ನೆರೆ ರಾಷ್ಟ್ರಗಳಿಂದ ನಡೆಯುತ್ತಿದ್ದು, ನಮ್ಮ ಅಭಿವೃದ್ಧಿಯನ್ನು ಕುಂಠಿತ ಗೊಳಿಸಲು ಹೊರಟಿರುವುದು ಸವಾಲಿನ ಸಂಗತಿಯಾಗಿದೆ. ಕಳೆದ ಎರಡು ವರ್ಷಗಳಿಂದ ನಮ್ಮನ್ನು ಬಿಟ್ಟು ಬಿಡದೆ ಕಾಡುತ್ತಿರುವ ಕೊರೋನಾದಿಂದ ಅಭಿವೃದ್ಧಿ ಕುಂಠಿತವಾಗಿದೆ.
ಆದರೆ ಕೇಂದ್ರ ಸರಕಾರದ ಅಭಿವೃದ್ಧಿ ಚಿಂತನೆಗಳು, ಮಹತ್ವಾಕಾಂಕ್ಷಿ ಯೋಜನೆಗಳು ನಮ್ಮ ರಾಷ್ಟ್ರವನ್ನು ಸುಸ್ಥಿತಿಯತ್ತ ಕೊಂಡೊಯ್ಯುತ್ತಿದೆ. ಅದಕ್ಕೆ ನಾವೆಲ್ಲ ಸಹಕರಿಸಬೇಕಾಗಿದೆ, ನಮ್ಮೆಲ್ಲರ ಸಾಧನೆಯೇ ದೇಶದ ಅಭಿವೃದ್ಧಿ. ಆ ದಿಸೆಯಲ್ಲಿ ನಾವೆಲ್ಲ ಚಿಂತಿಸಿ ದೇಶದ ಋಣ ತೀರಿಸಲು ಪ್ರಯತ್ನಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಸಂಸ್ಥೆಯ ಶಿಕ್ಷಣ ವಿಭಾಗದ ಸಂಚಾಲಕ ಟಿ ಆರ್ ಜೋಶಿ, ಕಾರ್ಯದರ್ಶಿಗಳಾದ ಟಿ ಎಸ್ ಭಟ್ಟ, ಸದಸ್ಯರಾದ ಎಸ್ ವಿ ಹೆಗಡೆ, ಶಾಲೆಯ ಆಡಳಿತಾಧಿಕಾರಿಗಳಾದ ಜಿ ಎಂ ಭಟ್ಟ ಉಪಸ್ಥಿತರಿದ್ದರು. ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ, ಸಿಬ್ಬಂದಿಗಳು ಧ್ವಜಾರೋಹಣದಲ್ಲಿ ಪಾಲ್ಗೊಂಡರು. ಕೊರೊನಾ ನಿಯಮಪಾಲನೆಯೊಂದಿಗೆ ಸಾಮಾಜಿಕ ಅಂತರದೊಂದಿಗೆ ವಿದ್ಯಾರ್ಥಿಗಳ ಗೈರುಹಾಜರಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.