ಅಂಕೋಲಾ : ನಾರಾಯಣ ಗುರುಗಳು ಕೇರಳದಲ್ಲಿನ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಟವನ್ನು ಮಾಡಿ ಹಿಂದೂ ಧರ್ಮವನ್ನು ಉಳಿಸಿಕೊಳ್ಳಲು ಮೂಲ ಕಾರಣೀಕರ್ತರಾಗಿದ್ದಾರೆ. ಹಾಗೇ ಹಿಂದೂ ಧರ್ಮದೊಳಗಿನ ತಾರತಮ್ಯಗಳನ್ನು ಹೋಗಲಾಡಿಸಲು ತಮ್ಮ ಜೀವನವೇ ಮುಡಿಪಾಗಿಟ್ಟ ಇಂತಹ ಗುರುಗಳನ್ನು ರಾಷ್ಟ್ರೀಯ ದಿನಾಚರಣೆಯಂದು ನೆನಪಿಸಿಕೊಳ್ಳಬೇಕಾದ ಅಗತ್ಯತೆಯಿದೆ ಎಂದು ತಾ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿ ಎದುರಿನ ವೃತ್ತದಲ್ಲಿ ನಾರಾಯಣ ಗುರು ವೇದಿಕೆ ವತಿಯಿಂದ ಹಮ್ಮಿಕೊಂಡ ಗಣರಾಜ್ಯೋತ್ಸವದ ನಿಮಿತ್ತ ಗುರು ಗೌರವ ಎನ್ನುವ ಕಾರ್ಯಕ್ರಮದಲ್ಲಿ ಗುರುಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
ವರದಿಗಾರ ವಿಠ್ಠಲದಾಸ ಕಾಮತ ಮಾತನಾಡಿ, ನಾರಾಯಣ ಗುರುಗಳಂತಹ ಮೇರು ವ್ಯಕ್ತಿತ್ವದ ಸಂತರ ವ್ಯಕ್ತಿತ್ವಗಳನ್ನು ರೂಡಿಸಿಕೊಳ್ಳಬೇಕಾದ ಅಗತ್ಯವಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಬೇಕು. ಮತ್ತೊಬ್ಬರನ್ನು ತುಳಿಯುವ ಸಂಸ್ಕøತಿ ನಮ್ಮದಾಗಬಾರದು. ನಾರಾಯಣ ಗುರುಗಳ ಕಾರ್ಯ ಎಂದಿಗೂ ಚಿರಸ್ಥಾಯಿಯಾಗಿರಲಿದೆ ಎಂದರು.
ವಕೀಲ ಉಮೇಶ ಎನ್. ನಾಯ್ಕ ಮಾತನಾಡಿ, ನಾರಾಯಣ ಗುರುಗಳ ತತ್ವಗಳನ್ನು ಹಾಗೂ ಅವರ ಹೋರಾಟಗಳನ್ನು ನಾರಾಯಣ ಗುರು ವೇದಿಕೆ ವತಿಯಿಂದ ಆಯಾ ಸಂದರ್ಭದಲ್ಲಿ ತಿಳಿಯುವಂತಾಗಿದೆ. ಪ್ರತಿ ವರ್ಷವೂ ಕೂಡ ಗಣರಾಜ್ಯೋತ್ಸವದಂದು ನಾರಾಯಣ ಗುರುಗಳ ಕಾರ್ಯಕ್ರಮಗಳನ್ನು ವೇದಿಕೆಯವರು ಹಮ್ಮಿಕೊಳ್ಳಲಿ ಎಂದರು.
ರೈತ ಮುಖಂಡ ಶಾಂತಾರಾಮ ನಾಯಕ ಮಾತನಾಡಿ, ಕೇರಳ ಸುಶಿಕ್ಷಿತವಾಗಿರಲು ಹಾಗೂ ಹಿಂದೂ ಧರ್ಮದ ಉಳಿವಿನಲ್ಲಿ ನಾರಾಯಣ ಗುರುಗಳ ಪಾತ್ರ ಅಪಾರವಾದದ್ದು. ಇಂತಹ ಮಹನೀಯರನ್ನು ನೆನಪಿಸಿಕೊಳ್ಳುವ ಅಗತ್ಯದ ಜತೆಗೆ ಅದನ್ನು ಯುವ ಜನೆಗೆ ಪರಿಚಯಿಸುವ ಕಾರ್ಯವೂ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷ ಎಂ.ಪಿ. ನಾಯ್ಕ, ಪ್ರಮುಖರಾದ ಸಂದೀಪ ಬಂಟ, ನಾಗಪ್ಪ ನಾಯ್ಕ, ಮಂಜುನಾಥ ದತ್ತಾ ನಾಯ್ಕ, ಶೇಷು ನಾಯ್ಕ, ಗೋವಿಂದ್ರಾಯ ನಾಯ್ಕ, ಏಕನಾಥ ನಾಯ್ಕ, ಸಂತೋಷ ನಾಯ್ಕ, ರಾಜೇಶ ಎಂ. ನಾಯ್ಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ನಾರಾಯಣ ಗುರು ವೇದಿಕೆಯ ಅಧ್ಯಕ್ಷ ನಾಗರಾಜ ಮಂಜಗುಣಿ ಸ್ವಾಗತಿಸಿದರು. ಕಾರ್ಯದರ್ಶಿ ಮಂಜುನಾಥ ಕೆ. ನಾಯ್ಕ ವಂದಿಸಿದರು.