ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೂಡಲೇ ಕೈಬಿಟ್ಟು ಜಿಲ್ಲೆಯ ಕರಾವಳಿಯ ಜನತೆಗೆ ಈಗಿನ ಸ್ವಚ್ಛ ಪರಿಸರದಲ್ಲಿ ಬದುಕಲು ಇರುವ ಹಕ್ಕನ್ನು ಉಳಿಸಿಕೊಡಿ ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ನೂತನ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯ ರೈತರ ಪ್ರಮುಖ ಸಮಸ್ಯೆಯಾಗಿರುವ 2000ರ ಪೂರ್ವದ ಅರಣ್ಯ ಭೂಮಿಯಲ್ಲಿನ ಅಕ್ರಮ ಸಾಗುವಳಿಯನ್ನು ಸಕ್ರಮ ಪಡಿಸಲು ಮತ್ತು ಅವರ ಹಿತರಕ್ಷಣೆಗಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು. ಜಿಲ್ಲೆಯ ಕರಾವಳಿತೀರಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮತ್ತು ಪರಿಸರ ಮಾಲಿನ್ಯ ಸಹಿತ ಜೀವವೈವಿಧ್ಯತೆಗಳಿಗೆ ಮಾರಕವಾಗಬಲ್ಲ ಮತ್ತು ಸ್ಥಳೀಯ ಸಾರ್ವಜನಿಕರ ತೀವ್ರ ವಿರೋಧ ಇರುವ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈ ಬೀಡಬೇಕು.
ತಾವು ಜಿಲ್ಲೆಗೆ ಆಗಮಿಸುತ್ತಿರುವ ಒಂದು ದಿವಸ ಮುಂಚೆಯೇ ನಮ್ಮ ಜಿಲ್ಲೆಯ ಜಿಲ್ಲಾಡಳಿತವು ಯಾವುದೋ ಬಲವಾದ ಒತ್ತಡ ಮತ್ತು ಪ್ರಭಾವಕ್ಕೆ ಒಳಗಾಗಿ ತಾಲ್ಲೂಕಿನ ಕಾಸರಕೋಡ ಟೊಂಕದ ಕಡಲತೀರದಲ್ಲಿ ಅಪ್ರಜಾಸತ್ತಾತ್ಮಕ, ಸರ್ವಾಧಿಕಾರಿ ನಡೆಯೊಂದಿಗೆ ಸಿಆರ್ ಝೆಡ್ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿದೆ.
ಪೊಲೀಸ್ ಬಲವನ್ನು ದುರುಪಯೋಗ ಪಡಿಸಿಕೊಂಡು ಸಾವಿರಾರು ಮೀನುಗಾರರ ಕುಟುಂಬ ವಾಸವಿರುವ ಸನಿಹದ ಕಡಲತೀರದಲ್ಲಿ ಅಪರೂಪದ ರಿಡ್ಲೆ ಜಾತಿಯ ಆಮೆಗಳು ಮೊಟ್ಟೆಇಟ್ಟಿರುವ ಪ್ರದೇಶದಲ್ಲಿ 2ಕೀ.ಮೀಟರ್ ಉದ್ದಕ್ಕೂ ಸಾವಿರಾರು ಲಾರಿಗಿಂತ ಹೆಚ್ಚಿನ ಭಾರೀ ಪ್ರಮಾಣದಲ್ಲಿ ಮಣ್ಣನ್ನು ಸುರಿದು ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಖಾಸಗಿ ವಾಣಿಜ್ಯ ಬಂದರು ಕಂಪೆನಿಯೊಂದಿಗೆ ಸಾಮೀಲಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಮಾನವಹಕ್ಕುಗಳನ್ನು ದಮನಮಾಡುವ ಕಾರ್ಯ ನಡೆದಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ.
ಗಣರಾಜ್ಯದಿನದಂದು ಈ ಪ್ರದೇಶದಲ್ಲಿನ ಮೀನುಗಾರ ಮಹಿಳೆಯರಮೇಲೆ ಮತ್ತು ಮೀನುಗಾರ ಯುವಕರ ಮೇಲೆ ದೌರ್ಜನ್ಯ ನಡೆದಿದೆ. ಮೀನುಗಾರರ ವಸತಿಗೆ ಧಕ್ಕೆ ಆಗುವರೀತಿಯಲ್ಲಿ ಬಲವಂತವಾಗಿ ಕಡಲತೀರದಲ್ಲಿ ಸಿವಾಲ್ ತೆರವುಗೊಳಿಸಲಾಗಿದೆ. ಈ ವಿಚಾರದಲ್ಲಿ ಉನ್ನತ ಮಟ್ಟದ ಸಮಗ್ರ ತನಿಖೆಗೆ ಒಳಪಡಿಸಿ ಜಿಲ್ಲೆಯ ಜನರಿಗೆ ಮೀನುಗಾರರಿಗೆ ಸಾಮಾಜಿಕ ನ್ಯಾಯ ಕೊಡಿಸಿ. ಜಿಲ್ಲಾ ಆಡಳಿತದ ಸರ್ವಾಧಿಕಾರಿ ಮನೋಭಾವಕ್ಕೆ ತಡೆಹಾಕಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಗೌರವವನ್ನು ಹೆಚ್ಚಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.