ಅಂಕೋಲಾ : ಮತ ಹಾಕುವದು ಪ್ರಜೆಗಳ ಪರಮೋಚ್ಛ ಅಧಿಕಾರ. ಆಮಿಷಕ್ಕೆ ಒಳಗಾಗಿ ಮತವನ್ನು ಮಾರಿಕೊಂಡರೆ ಅದು ನಮ್ಮನ್ನು ನಾವೇ ಮಾರಿಕೊಂಡಂತೆ ನಮ್ಮ ಎಂದು ಹಿರಿಯ ಸಿವಿಲ್ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಾಧೀಶ ದಿನೇಶ.ಬಿ.ಜಿ. ಹೇಳಿದರು.
ಅವರು ಪಟ್ಟಣದ ಕೆ.ಎಲ್.ಇ ಕಾಲೇಜಿನಲ್ಲಿ ತಾಲೂಕು ಅಡಳಿತ, ತಾಲೂಕ ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿ ಮತದಾರರು ಯಾವುದೇ ಆಮಿಷಕ್ಕೆ, ಪ್ರಲೋಭನೆಗೆ ಒಳಗಾಗದೆ ಮತದಾನದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳತಕ್ಕದ್ದು. ಮತದಾನದ ಕುರಿತು ಚುನಾವಣಾ ಆಯೋಗ ಕಠೋರ ನಿಯಮಗಳನ್ನು ರೂಪಿಸಿದೆ, ಯುವ ಜನತೆ ಹೆಚ್ಚಾಗಿ ಮತದಾನದಲ್ಲಿ ಭಾಗವಹಿಸಿ ದಕ್ಷ ಆಡಳಿತ ವ್ಯವಸ್ಥೆ ನಿರ್ಮಾಣವಾಗುವಂತಾಗಬೇಕು ಎಂದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪಿ.ವೈ.ಸಾವಂತ ಮತದಾನದ ಮಹತ್ವದ ಕುರಿತು ಮಾತನಾಡಿದರು.
ಸಿವಿಲ್ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಎಸ್.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಾ ದಂಡಾಧಿಕಾರಿ ಉದಯ ಕುಂಬಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಚುನಾವಣಾ ಆಯೋಗದ ಆಯುಕ್ತ ಟಿ.ಎನ್.ಶೇಷನ್ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದರು ಎಂದರು ಹಾಗೂ ಹಿಂದೆ ವರ್ಷಕ್ಕೆ ಒಂದು ಸಲ ಜನೇವರಿ ತಿಂಗಳಲ್ಲಿ ಮಾತ್ರ ಚುನಾವಣಾ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವದು, ತಿದ್ದುಪಡಿ ಮಾಡುವದು, ಹೆಸರು ವರ್ಗಾವಣೆ ಮುಂತಾದ ಕಾರ್ಯಗಳನ್ನು ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮತದಾರರ ಪಟ್ಟಿಯನ್ನು ನಿರಂತರ ತಿದ್ದುಪಡಿ ಮಾಡಲಾಗುತ್ತಿದೆ. ಮತದಾರರ ಗುರುತಿನ ಚೀಟಿಗೆ ಆಧಾರ ಕಾರ್ಡ್ ಜೋಡಣೆ ಮಾಡುವ ಕಾರ್ಯವೂ ಆಗಲಿದೆ. 18 ವರ್ಷದ ಮತದಾರರು ಗುರುತಿನ ಚೀಟಿ ಕಡ್ಡಾಯವಾಗಿ ಪಡೆಯಲೇಬೇಕಾಗುತ್ತದೆ ಎಂದರು.
ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಸುರೇಶ ಬಾನಾವಳಿಕರ ಇದ್ದರು. ಶಿಕ್ಷಕ ಜಿ.ಆರ್.ತಾಂಡೇಲ ನಿರೂಪಿಸಿದರು. ಕೆ.ಎಲ್.ಇ ಕಾಲೇಜಿನ ಪ್ರಾಚಾರ್ಯ ವಿನಾಯಕ.ಜಿ.ಹೆಗಡೆ ವಂದಿಸಿದರು. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆ.ಎಲ್.ಇ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಕಂದಾಯ ಇಲಾಖೆ ಸಿಬ್ಬಂದಿ, ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಇದ್ದರು.
ಈ ಸಂದರ್ಭದಲ್ಲಿ ಅತಿ ಹೆಚ್ಚು ಮತದಾರರ ನೋಂದಣಿ ಮಾಡಿಸಿದ ಹಡವ ಶಾಲೆಯ ಶಿಕ್ಷಕ ಉಮೇಶ ಎಚ್ ಗೌಡ ಹಾಗೂ ಹೆಗ್ರೆ ಶಾಲೆಯ ಶಿಕ್ಷಕಿ, ಮಮತಾ ನಾಯ್ಕ ಈರ್ವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಯಿತು.