ಶಿರಸಿ: ಕ್ಯಾಂಪ್ಕೋ ನಿ., ಕದಂಬ ಆರ್ಗ್ಯಾನಿಕ್ ಮತ್ತು ಮಾರ್ಕೆಟಿಂಗ್ ಟ್ರಸ್ಟ್, ಕೃಷಿ ವಿಜ್ಞಾನ ಕೇಂದ್ರ, ಪಿಎಂಸಿ ಶಿರಸಿ, ಬೆಂಗಳೆ ಸೇವಾ ಸಹಕಾರಿ ಸಂಘ ಇವರ ಸಹಯೋಗದಲ್ಲಿ ತಾಲೂಕಿನ ಬೆಂಗಳೆಯಲ್ಲಿ ಜ.31 ಸೋಮವಾರ ಮತ್ತು ಫೆ.1 ಮಂಗಳವಾರ ‘ಅಡಿಕೆ ದೋಟಿ ಕೌಶಲ್ಯ ತರಬೇತಿ’ ಆಯೋಜಿಸಲಾಗಿದೆ.
ಈ ತರಬೇತಿ ಕಾರ್ಯಕ್ರಮವನ್ನು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ ಕೊಡಗಿಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಪಿಎಂಸಿ ಅಧ್ಯಕ್ಷ ಶಿವಕುಮಾರ ದೇಸಾಯಿ ಗೌಡ, ಕೆ.ವಿ.ಕೆ ಮುಖ್ಯಸ್ಥ ಡಾ.ಮಂಜು ಎಂ.ಜೆ, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ ಎಚ್ ಎಂ, ಬೆಂಗಳೆ ಸೇವಾ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಸುಧಾಕರ ಹೇಮಾದ್ರಿ ಸಂಪನ್ಮೂಲ ವ್ಯಕ್ತಿಗಳಾದ ಉಮಾನಂದ ಭಟ್ಟ ಕೊಡ್ಲಳ್ಳಿರವರು ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ಶಂಭುಲಿಂಗ ಹೆಗಡೆರವರು ವಹಿಸಲಿದ್ದಾರೆ.
ತರಬೇತಿಯಲ್ಲಿ ಫೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ವಿಧಾನ, ಮದ್ದು ಸಿಂಪಡಣೆಯ ಕುರಿತಾದ ಸಮಗ್ರ ಮಾಹಿತಿ ನೀಡಲಾಗುವದು. ಇದರೊಂದಿಗೆ ಡಿಜಿಟಲ್ ಬ್ಯಾಂಕಿಂಗ್ ಮಾಹಿತಿ, ಅಪಘಾತ ವಿಮೆ ಮಾಡುವುದು ಹೇಗೆ, ಖರ್ಚು ವೆಚ್ಚ ಲೆಕ್ಕವಿಟ್ಟು ಭವಿಷ್ಯ ಭದ್ರಪಡಿಸುವುದು ಹೇಗೆ ಎಂಬುದರ ಬಗ್ಗೆಯೂ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಲಾಗುವದು. ಕಾರ್ಯಕ್ರಮದ ಕೊನೆಯಲ್ಲಿ ಕೃಷಿಕರ ಜೊತೆಗೆ ಶಿಬಿರದ ಅವಲೋಕನ ಮತ್ತು ವೃತ್ತಿಯಾಗಿ ಮುಂದುವರಿಯುವುದು ಹೇಗೆ ಎಂಬುದರ ಬಗ್ಗೆ ಸಂವಾದವನ್ನೂ ಏರ್ಪಡಿಸಲಾಗಿದೆ. ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವವರು ಹೆಸರು ನೋಂದಾಯಿಸಲು ಅವಕಾಶವಿದ್ದು ಹೆಚ್ಚಿನ ಮಾಹಿತಿಗಾಗಿ ಕದಂಬ ಮಾರ್ಕೆಟಿಂಗ್’ನ ಸಂದೇಶ 9480622572, ಶ್ರೀವತ್ಸ 9535502274 ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.