ಶಿರಸಿ: ಸ್ವಾತಂತ್ರ್ಯ ಎನ್ನುವುದು ದೇವಸ್ಥಾನ ಎಂದಾದರೆ, ಸಂವಿಧಾನ ಅದರಲ್ಲಿನ ಮೂರ್ತಿ ಇದ್ದಂತೆ. ಅಂಬೇಡ್ಕರ್ ಅವರ ಅವಿರತ ಪರಿಶ್ರಮದ ಫಲವಾಗಿ ಸಂವಿಧಾನ ರೂಪುಗೊಂಡಿದೆ. ಎರಡಕ್ಕೂ ಅಧಿಕ ವರ್ಷಗಳ ಕಾಲ ಸತತ ಅಧ್ಯಯನ, ಯೋಜನೆಗಳ ಫಲವಾಗಿ ಸಂವಿಧಾನ ರೂಪುಗೊಂಡಿದೆ ಎಂದು ಸಹಾಯಕ ಆಯುಕ್ತ ದೇವರಾಜ್ ಹೇಳಿದರು.
ಅವರು ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ, ಗೌರವ ವಂದನೆಯನ್ನು ಸ್ವೀಕರಿಸಿ ಮಾತನಾಡಿ, ರಾಷ್ಟ್ರವೆಂದಾಗ, ರಾಷ್ಟ್ರಧ್ವಜ, ರಾಷ್ಟ್ರಗೀತೆಗಳನ್ನೊಳಗೊಂಡು ಇರುವಂತದ್ದು ನಮ್ಮ ಭಾರತ ದೇಶವಾಗಿದೆ. ನಮ್ಮ ದೇಶದ ಪ್ರತಿಯೊಬ್ಬ ನಾಗರೀಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ. ಆ ಕಾರಣಕ್ಕೆ ಇಲ್ಲಿನ ಪ್ರಜಾಪ್ರಭುತ್ವ ಗಟ್ಟಿಯಾಗಿದೆ. ಹಲವಾರು ಹೋರಾಟ, ಏರಿಳಿತಗಳನ್ನು ಕಂಡು ಅಂತಿಮವಾಗಿ 1947 ರಲ್ಲಿ ಸ್ವಾತಂತ್ರ್ಯ ಪಡೆದುಕೊಂಡಾಗಿದೆ.
ದೇಶದ ಸಂವಿಧಾನವು ಪ್ರತಿಯೊಬ್ಬ ನಾಗರೀಕರಿಗೆ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ಇನ್ನಿತರ ಸ್ವಾತಂತ್ರ್ಯವನ್ನು ನೀಡಿದೆ. ನಾವು ಚಲಾಯಿಸುವವ ಹಕ್ಕುಗಳೂ ಸಹ ಸಂವಿಧಾನ ನೀಡಿದ್ದೇ ಆಗಿದೆ. ಯಾವುದೇ ಬೇಧ-ಭಾವ, ಜಾತಿ-ಮತ ಎಂಬ ಹಂಗಿಲ್ಲದೇ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವಲ್ಲಿ ಸಂವಿಧಾನದ ಪಾತ್ರ ಅಗ್ರಗಣ್ಯ. ಕೆಳವರ್ಗದ ಜನರ ಬಗ್ಗೆ, ಮಹಿಳಾ ಸಬಲೀಕರಣ ಮತ್ತು ದೇಶದ ಅಭಿವೃದ್ಧಿ ಕುರಿತಾಗಿ ಅಂಬೇಡ್ಕರ್ ಕಾಳಜಿ ಅಪಾರ. ಸಂವಿಧಾನವನ್ನು ಧರ್ಮವೆಂದು ಪರಿಗಣಿಸಿ, ಪರಿಪಾಲಿಸುವ ದೇಶ ಭಾರತವಾಗಿದೆ ಎಂದರು.
ಗಣರಾಜ್ಯೋತ್ಸವದ ಈ ಸಂಭ್ರಮದ ಸಮಯದಲ್ಲಿ ನಾವು ದೇಶ ಕಾಯುತ್ತಿರುವ ಸೇನೆಯನ್ನು ಹಾಗು ಆಂತರಿಕವಾಗಿ ಕಾಯುತ್ತಿರುವ ಪೋಲೀಸ್ ಇಲಾಖೆಯನ್ನು ನಾವೆಲ್ಲರೂ ಸ್ಮರಿಸಬೇಕಿದೆ ಎಂದರು.
ಶಿರಸಿ ನಗರಸಭಾ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ಡಿಎಸ್ಪಿ ರವಿ ನಾಯಕ, ನಗರಸಭೆ ಸದಸ್ಯ ನಾಗರಾಜ ನಾಯ್ಕ, ರಮಾನಂದ ಭಟ್ ಸೇರಿದಂತೆ ಇನ್ನಿತರರು ಇದ್ದರು. ಕಾರ್ಯಕ್ರಮದಲ್ಲಿ ಶಿರಸಿ ಪೋಲೀಸ್ ಇಲಾಖೆ, ಅರಣ್ಯ ಇಲಾಖೆ, ಗೃಹರಕ್ಷಕ ದಳ ಮತ್ತು ಶಾಸಕರ ಮಾದರಿ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಪೋಲೀಸ್ ಇಲಾಖೆಯ ಗೋಪಾಲ ಗೌಡ, ಶಿಕ್ಷಕ ಅಶೋಕ ಭಜಂತ್ರಿ, ಆರೋಗ್ಯ ಇಲಾಖೆಯ ಶೋಭಾ ನಾಯ್ಕ, ರಕ್ತ ಕೇಂದ್ರದ ದರ್ಶನ ಭಂಡಾರಿ, ಅರಣ್ಯ ಇಲಾಖೆಯ ಹನುಮಂತ ಯಲಗೇರಿ, ಕಂದಾಯ ಇಲಾಖೆಯ ಕಿರಣ ನಾಯ್ಕ, ಕಂದಾಯ ಇಲಾಖೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ಹಿನ್ನಲೆಯಲ್ಲಿ ಗ್ರಾಮಲೆಕ್ಕಗಿ ಕಾವ್ಯಶ್ರೀ ದೇವರು ಹೆಗಡೆ, ದಿಲೀಪ್ ಫರ್ನಾಂಡೀಸ್, ಅಂಗನವಾಡಿ ಕಾರ್ಯಕರ್ತೆ ವಿದ್ಯಾ ನಾಯ್ಕರನ್ನು ಗೌರವಿಸಿ ಸನ್ಮಾನಿಸಲಾಯಿತು.