ಯಲ್ಲಾಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯ ನಗರ ಘಟಕದ ವತಿಯಿಂದ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಪ್ರತಿನಿತ್ಯ ಅಪಘಾತ ಸಂಭವಿಸುತ್ತಿದೆ. ಗಾಯಾಳುಗಳಿಗೆ ರಕ್ತದ ಅಗತ್ಯವಿದ್ದರೆ ಹುಬ್ಬಳ್ಳಿ ಅಥವಾ ಶಿರಸಿಗೇ ಹೋಗಬೇಕು. ಸೂಕ್ತ ಸಮಯದಲ್ಲಿ ರಕ್ತ ದೊರಕದೇ ಅನೇಕರು ಮೃತಪಟ್ಟ ನಿದರ್ಶನಗಳೂ ಇವೆ.
ತಾಲೂಕಿನಲ್ಲಿಯೇ ಒಂದು ರಕ್ತನಿಧಿ ಕೇಂದ್ರವಿದ್ದರೆ ತುರ್ತು ಸಂದರ್ಭಗಳಲ್ಲಿ ಅನೇಕ ಜೀವಗಳನ್ನು ಉಳಿಸಬಹುದು. ಕಾರಣ ಶೀಘ್ರ ರಕ್ತನಿಧಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು. ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುವ ಭರವಸೆ ನೀಡಿದರು.
ಸಂಘಟನೆಯ ಪ್ರಮುಖರಾದ ಜಿ.ಎಂ.ತಾಂಡುರಾಯನ್, ಕೆ.ಎಫ್.ಕಂಬಳನ್ನವರ್, ಸಮೀರ್ ಖುರೇಷಿ, ಪರಶುರಾಮ ಹರಿಜನ, ಅಲಿ ಖುರೇಷಿ, ಕರೀಂ ಖಾನ್, ಮಂಜುನಾಥ ರಾಯ್ಕರ್, ಹನೀಫ್ ಖಾನ್, ಸೋಮು ವಡ್ಡರ್, ರಜಾಕ್ ಖಾನ್, ಮುಸ್ತಾಕ ಶೇಖ್, ಹನುಮಂತ ಬೋವಿವಡ್ಡರ್ ಇತರರಿದ್ದರು.