ಯಲ್ಲಾಪುರ: ತಾಲೂಕಿನಲ್ಲಿ ಈ ಬಾರಿ ಹುಲಿಗಳ ಓಡಾಟ ಜೋರಾಗಿದ್ದು ಜನರನ್ನು ಭಯಭೀತರನ್ನಾಗಿಸಿದೆ. ಎರಡು ತಿಂಗಳುಗಳ ಹಿಂದಷ್ಟೇ ಬಿಸಗೋಡ ಭಾಗದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಹುಲಿಗಳು ಇದೀಗ ಕೆಲ ದಿನಗಳಿಂದ ಮಾಗೋಡ ಭಾಗಕ್ಕೆ ಲಗ್ಗೆ ಇಟ್ಟಿವೆ.
ಮಾಗೋಡ, ಕಿರಕುಂಭತ್ತಿ, ಮೊಟ್ಟೆಗದ್ದೆ, ಕುಂಭತ್ತಿ, ಹುಲಗಾನ ಇತರ ಭಾಗಗಳಲ್ಲಿ ಹುಲಿ ಓಡಾಡುತ್ತಿದೆ. ಹಗಲು ಹೊತ್ತಿನಲ್ಲೂ ಹುಲಿ ಓಡಾಡುವುದನ್ನು ಸ್ಥಳೀಯರು ಕಂಡಿದ್ದು ಕಂಗಾಲಾಗುವಂತೆ ಮಾಡಿದೆ. ಗ್ರಾಮಸ್ಥರು, ಮಹಿಳೆಯರು, ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಓಡಾಡಲು ಭಯಪಡುವಂತಾಗಿದೆ.
ಸದ್ಯ ಅಡಕೆ, ಭತ್ತದ ಕೊಯ್ಲು ಕಾರ್ಯ ಪ್ರಗತಿಯಲ್ಲಿದ್ದು, ರೈತರು ಆ ಕಾರ್ಯದ ಸಲುವಾಗಿ ಹಗಲು, ರಾತ್ರಿ ಓಡಾಡುವುದು ಅನಿವಾರ್ಯವಾಗಿದೆ. ಆದರೆ ಹಾಗೆ ಓಡಾಡುವುದಕ್ಕೂ ಹೆದರಿಕೆ ಕಾಡುತ್ತಿದೆ. ಈಗಾಗಲೇ ಮೇಯಲು ಬಿಟ್ಟ ದನಕರುಗಳು, ಕೊಟ್ಟಿಗೆಯಲ್ಲಿದ್ದ ದನಗಳನ್ನು ಹುಲಿ ಕೊಂದು ತಿಂದ 2-3 ಘಟನೆಗಳು ನಡೆದಿವೆ.
ಕೇವಲ ಮಾಗೋಡ ಮಾತ್ರವಲ್ಲದೇ ಸಮೀಪದ ಹುಲಗಾನ, ಸೂಳಗಾರ, ಭಟ್ರಕೇರಿ ಭಾಗದಲ್ಲಿಯೂ ತಿಂಗಳಿನಿಂದೀಚೆಗೆ ಹಲವು ಬಾರಿ ಹುಲಿ ಕಾಣಿಸಿಕೊಂಡ ಬಗೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಲ್ಲಿಯೂ ಹುಲಿಯ ದಾಳಿಗೆ ಸಾಕುಪ್ರಾಣಿಗಳು ಬಲಿಯಾಗಿವೆ. ಎರಡು ತಿಂಗಳುಗಳ ಹಿಂದೆ ಬಿಸಗೋಡ ಭಾಗದಲ್ಲಿ ಹುಲಿ ಹಾಗೂ ಚಿರತೆಗಳ ದಾಳಿಗೆ 15 ಕ್ಕೂ ಹೆಚ್ಚು ಸಾಕುಪ್ರಾಣಿಗಳು ಪ್ರಾಣ ಕಳೆದುಕೊಂಡಿದ್ದವು. ಅರಣ್ಯ ಇಲಾಖೆ ಪಂಜರವನ್ನಿಟ್ಟು ಹುಲಿಗಳನ್ನು ಹಿಡಿಯುವ ಪ್ರಯತ್ನವನ್ನೂ ಮಾಡಿತ್ತು. ಸಾಕುಪ್ರಾಣಿಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಕಾರ್ಯಕ್ಕೂ ಮುಂದಾಗುವ ಭರವಸೆ ನೀಡಿದೆ.
ಆದರೆ ಮಾಗೋಡ ಭಾಗದಲ್ಲಿ ಅವಘಡಗಳು ನಡೆಯುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹುಲಿಯ ಓಡಾಟ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.