ಶಿರಸಿ: ಇತ್ತೀಚಿನವರೆಗೆ ಅರಣ್ಯ ಭೂಮಿ ಹಕ್ಕು ಮಂಜೂರಿಯಾಗದ ವಸತಿದಾರರಿಗೆ ಸರಕಾರದ ಇತ್ತೀಚಿನ ವಿವಿಧ ಇಲಾಖೆಯ ಸ್ಪಷ್ಟ, ವಿಭಿನ್ನ ಹಾಗೂ ವ್ಯತಿರಿಕ್ತವಾದ ಆದೇಶಗಳು ಅರಣ್ಯವಾಸಿಗಳಲ್ಲಿ ಗೊಂದಲಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲು ವಸತಿ ಇಲಾಖೆಯಿಂದ ದೊರಕುವುದೆಂಬ ಧನ ಸಹಾಯ ಕಾನೂನು ತೊಡಕುಗಳಿಂದ ಮರಿಚಿಕೆಯಾಗಿ ಅತಿಕ್ರಮಣದಾರರ ಮುಖದಲ್ಲಿ ನಿರಾಶೆಯ ಛಾಯೆ ಉಂಟಾಗಿದೆ.
ವಸತಿ ಇಲಾಖೆ ಬೆಂಗಳೂರು, ಅರಣ್ಯ ಪ್ರದೇಶದಲ್ಲಿ ಮನೆ ತೆರಿಗೆ ಪಾವತಿಸುವವರಿಗೆ ಆರ್ಥಿಕ ಸಹಾಯ ನೀಡುತ್ತೇವೆ ಎಂದು ಆದೇಶಿಸಿದರೇ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ ಕಾರವಾರ ಅವರು ವಸತಿ ಯೋಜನೆಗೆ ಸ್ವಂತ ನಿವೇಶನದ ಹಕ್ಕು ಪತ್ರ ಹೊಂದಿರಬೇಕೆಂಬ ಷರತ್ತು ವಿಧಿಸಿದ್ದಾರೆ. ಅರಣ್ಯ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಯಾವುದೇ ವಸತಿ ಯೋಜನೆ ಮಂಜೂರಿ ಮಾಡಬಾರದು, ಮಾಡಿದಲ್ಲಿ ರದ್ದು ಪಡಿಸಬೇಕು, ಇಲ್ಲದಿದ್ದಲ್ಲಿ ಪಿಡಿಓಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂಬ ಎಚ್ಚರಿಕೆಯ ಪತ್ರ ನೀಡಿರುತ್ತಾರೆ. ಇನ್ನೋಂದೆಡೆ, ಅನಧೀಕೃತ ಅರಣ್ಯವಾಸಿಗಳೊಂದಿಗೆ ಯಾವ ಕಾರಣಕ್ಕೂ ವಿನಾಯಿತಿಯಾಗಲೀ, ರಾಜಿ ಮಾಡಿಕೊಳ್ಳುವುದಾಗಲೀ ಅವಕಾಶವಿಲ್ಲ. ಕಾನೂನಿನ ನೀತಿ, ನಿಯಮದ ಅಡಿಯಲ್ಲಿ ಯಾವ ಕಾರಣಕ್ಕೂ ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ ನೀಡಬಾರದೆಂದು ಸುಫ್ರೀಂ ಕೋರ್ಟ ನ್ಯೂಡೆಲ್ಲಿ ಆದೇಶ ನೀಡಿರುವುದು, ಅರಣ್ಯ ಪ್ರದೇಶದಲ್ಲಿನ ಮನೆ ಕಟ್ಟಿ ಕೊಳ್ಳುವ ಆರ್ಥಿಕ ಸೌಲಭ್ಯದ ಆದೇಶಗಳು ಗೋಂದಲಮಯವಾಗಿದೆ. ಈ ಹಿನ್ನೆಲೆಯಲ್ಲಿ ಆದೇಶಗಳ ಕಾನೂನಾತ್ಮಕ ಮೌಲ್ಯತೆ ಸರಕಾರ ಸ್ಪಷ್ಟ ಪಡಿಸುವುದು ಅವಶ್ಯವಾಗಿದೆ.
ಸಭಾಧ್ಯಕ್ಷರಿಗೆ ಕೋರಿಕೆ: ಸರಕಾರದ ಅಸ್ಪಷ್ಟ ನಿಲುವಿನ ಕುರಿತು ವಸತಿ ಸೌಲಭ್ಯ ನೀಡುವ ಹಿನ್ನೆಲೆಯಲ್ಲಿ ಉಂಟಾಗಿರುವ ಕಾನೂನಾತ್ಮಕ ತೊಡಕು ನಿವಾರಿಸುವ ದಿಶೆಯಲ್ಲಿ ಇತ್ತೀಚಿನ ಆದೇಶಗಳ ಕಾನೂನಾತ್ಮಕ ಬದ್ಧತೆಯ ಮೌಲ್ಯತೆ ಪ್ರಕಟಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಸಭಾಧ್ಯಕ್ಷ ಕಾಗೇರಿ, ವಿಶ್ವೇಶ್ವರ ಹೆಗಡೆ ಅವರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಅವರು ಕೋರಿದ್ದಾರೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ ಅವರಿಗೆ ಕಳೆದ ವರ್ಷ ಅಗಸ್ಟ ತಿಂಗಳಲ್ಲಿ ಗೊಂದಲಮಯವಾದ ವಿವಿಧ ಇಲಾಖೆಯ ಆದೇಶದ ಕುರಿತು ಅರಣ್ಯ ಇಲಾಖೆಯ ಸ್ಪಷ್ಟತೆಯನ್ನ ಪ್ರಕಟಿಸಬೇಕೆಂಬ ಹೋರಾಟಗಾರರ ವೇದಿಕೆಯ ಲಿಖಿತ ಪತ್ರಕ್ಕೂ ಇಲ್ಲಿಯವರೆಗೂ ಉತ್ತರಿಸದಿರುವುದು ಖೇದಕರ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.
ವಿವಿಧ ಇಲಾಖೆಯ ಆದೇಶದ ಮುಖ್ಯಾಂಶಗಳು: ಅನಧೀಕೃತ ಅರಣ್ಯವಾಸಿಗಳೊಂದಿಗೆ ಯಾವ ಕಾರಣಕ್ಕೂ ವಿನಾಯಿತಿಯಾಗಲೀ, ರಾಜಿಯಾಗಲೀ ಮಾಡಿಕೊಳ್ಳಬಾರದು. ಕಾನೂನು ನೀತಿ-ನಿಯಮದ ಅಡಿಯಲ್ಲಿ ಯಾವ ಕಾರಣಕ್ಕೂ ಅನಧೀಕೃತ ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ ನೀಡಬಾರದು. – ಸರ್ವೋಚ್ಛ ನ್ಯಾಯಾಲಯ ನೂಡೆಲ್ಲಿ.
ಕಾಯ್ದಿಟ್ಟ ಅರಣ್ಯ ಪ್ರದೇಶ, ರಕ್ಷಿತ್ ಅರಣ್ಯ ಪ್ರದೇಶದಲ್ಲಿ ಇಲ್ಲಿಯವರೆಗೂ ಯಾವುದಾದರೂ ಆಶ್ರಯ ಮನೆ ಮಂಜೂರಿ ಮಾಡಿದ್ದರೆ, ಅಂತಹ ಮನೆ ರದ್ದು ಪಡಿಸಲು ಕ್ರಮ ಕೈಗೊಳ್ಳುವುದು ಹಾಗೂ ಇನ್ನುಮುಂದೆ ಕಾಯ್ದಿಟ್ಟ ಅರಣ್ಯ ಪ್ರದೇಶ, ರಕ್ಷಿತ್ ಅರಣ್ಯ ಪ್ರದೇಶದಲ್ಲಿ ಆಶ್ರಯ ಮನೆ ಹಾಗೂ ಇನ್ನಿತರ ಯಾವುದೇ ಯೋಜನೆಗಳನ್ನ ಮಂಜೂರಿ ಮಾಡಬಾರದು ಹಾಗೂ ತಪ್ಪಿದ್ದಲ್ಲಿ ತಮ್ಮ ವಿರುದ್ಧ ಅರಣ್ಯ ಸಂರಕ್ಷಣಾ ಕಲಾಯಿದೆ 1980 ರ ಅಡಿಯಲ್ಲಿ ಮತ್ತು ಇನ್ನಿತರ ಅರಣ್ಯ ಕಾಯಿದೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ವಲಯ ಅರಣ್ಯಾಧಿಕಾರಿ. ಮಂಚಿಕೇರಿ ವಲಯ ಹಲವಾರು ವರ್ಷಗಳಿಂದ ಅರಣ್ಯ ಜಾಗದಲ್ಲಿ ಕಚ್ಚಾಮನೆ/ಗುಡಿಸಲು ನಿರ್ಮಿಸಿ ವಾಸ್ತವ್ಯ ಹೊಂದಿರುವ, ಈಗಾಗಲೇ ಗ್ರಾಮ ಪಂಚಾಯಿತಿಯಿಂದ ಮನೆ ನಂಬರ್ ಹೊಂದಿದ್ದು ಗ್ರಾಮ ಪಂಚಾಯಿತಿಗೆ ಮನೆ ತೆರಿಗೆ ಪಾವಸಿತ್ತಿರುವ ಮತ್ತು ಸರಕಾರದ ವಿವಿಧ ಇಲಾಖೆಗಳ ಸೌಲಭ್ಯ ಈಗಾಗಲೇ ಪಡೆದುಕೊಂಡಿರುವ ಫಲಾನುಭವಿಗಳಿಗೆ ವಸತಿ ಇಲಖೆಯಿಂದ ವಿವಿಧ ವಸತಿ ಯೋಜನೆಗಳಡಿ ಸಹಾಯಧನವನ್ನು ನೀಡಲು ಪರಿಗಣಿಸಲು ಆದೇಶಿಸಿದೆ.- ಅಧೀನ ಕಾರ್ಯದರ್ಶಿ ವಸತಿ ಇಲಾಖೆ
ಸನ್ 2021-22 ನೇ ಸಾಲಿಗೆ ಬಸವ ವಸತಿ ಮತ್ತು ಡಾ|| ಬಿ.ಆರ್.ಅಂಬೇಡ್ಕರ ನಿವಾಸ ಯೋಜನೆಯಡಿಯಲ್ಲಿ ಫಲಾನುಭವಿಯ ಸ್ವಂತ ನಿವೇಶನ ಹೊಂದಿದ್ದು, ನಿವೇಶನಕ್ಕೆ ಸಂಬಂಧಿಸಿದಂತೆ ಹಕ್ಕು ಪತ್ರ ಹೊಂದಿರಬೇಕು. – ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. ಜಿಲ್ಲಾ ಪಂಚಾಯತ, ಕಾರವಾರ