
ಶಿರಸಿ: ಇಡೀ ಜಗತ್ತಿನ ಭವಿಷ್ಯವಾದ ಮಕ್ಕಳ ಬದುಕು ಸುಂದರವಾಗಿ ರೂಪುಗೊಳ್ಳಬೇಕಾದರೆ ಉತ್ತಮ ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳನ್ನು ಶಿಕ್ಷಣದ ಮೂಲಕ ಅವರಿಗೆ ನೀಡಬೇಕಿದೆ ಎಂದು ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು.
ಅವರು ಲಯನ್ಸ್ ಶಿಕ್ಷಣ ಸಂಸ್ಥೆ ಹಾಗೂ ರೋಟರಿಕ್ಲಬ್ ಸಹಯೋಗದಲ್ಲಿ ನಡೆಯುತ್ತಿರುವ ‘ಲೋಚನ’ ಹೆಸರಿನ ವಿನೂತನ ಆನ್ಲೈನ್ ಕಲಿಕಾ ಸಂಚಿಕೆಗಳ ಸಂಪನ್ಮೂಲ ವ್ಯಕ್ತಿಯಾಗಿ ‘ ಎ ಪಾಥ್ ಟು ವೆಲ್ನೆಸ್’ ವಿಷಯದ ಕುರಿತಾಗಿ ಮಾತನಾಡುತ್ತಿದ್ದರು.
ನಕಾರಾತ್ಮಕ ಚಿಂತನೆಯಿಂದ ಜನರು ನರಳಾಡುತ್ತಿದ್ದಾರೆ, ಸಕಾರಾತ್ಮಕ ಚಿಂತನೆಯಿಂದ ಬದುಕನ್ನು ಸುಂದರ ಸುಖಕರವನ್ನಾಗಿ ಮಾಡಿಕೊಳ್ಳಬೇಕು. ಶರೀರದ ಎರಡು ಕಣ್ಣುಗಳು ಚಿಕ್ಕದಾದರೂ ಬದುಕಿನಲ್ಲಿ ಅದರ ಮಹತ್ವ ದೊಡ್ಡದು. ಆದ್ದರಿಂದ ಸಕಾರಾತ್ಮಕ ವಿಶಾಲ ದೃಷ್ಠಿಕೋನ ಬೆಳೆಸಿಕೊಂಡು ಜಗತ್ತಿನಲ್ಲಿ ಮುಂದುವರೆಯಬೇಕು. ಜಗತ್ತನ್ನು ನೋಡುವ ದೃಷ್ಟಿ ಬದಲಾಗಬೇಕು. ಶಿಕ್ಷಣದಲ್ಲಿ ಕೇವಲ ಪುಸ್ತಕದ ಬದನೆಕಾಯಿಗಳಾಗಿ ಮಕ್ಕಳನ್ನು ತಯಾರಿ ಮಾಡುತ್ತಿರುವ ಇಂದಿನ ದಿನದಲ್ಲಿ ಮಕ್ಕಳಲ್ಲಿ ಸಕಾರಾತ್ಮಕ ದೃಷ್ಠಿಕೋನ ಬೆಳೆಸುವಲ್ಲಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಹಾಗೂ ಲಯನ್ಸ ಶಿಕ್ಷಣ ಸಂಸ್ಥೆಗಳ ಈ ಪ್ರಯತ್ನ ಶ್ಲಾಘನೀಯ ಎಂದರು.
ಮಕ್ಕಳಲ್ಲಿ ಸಕಾರಾತ್ಮಕ ದೃಷ್ಠಿಕೋನ ಬೆಳೆಯ ಬೇಕಾದರೆ ಆರೋಗ್ಯಪೂರ್ಣ ಆಹಾರ, ಧ್ಯಾನ, ಪ್ರಾಣಾಯಾಮಗಳು ಬೇಕು. ಮೊದಲಿಗೆ ಗುರುಕುಲ ಪದ್ಧತಿಯಲ್ಲಿ ಗುರುವಿನ ಸ್ಥಾನ ಶ್ರೇಷ್ಠವಾಗಿತ್ತು. ಆದರೆ ಇಂದು ಅವು ಅರ್ಥಕಳೆದುಕೊಳ್ಳುತ್ತಾ ಇದೆ. ಅದರ ಮಹತ್ವ ತಿಳಿಸುವ ನೈತಿಕ ಶಿಕ್ಷಣವೂ ಬೇಕಿದೆ. ಮಕ್ಕಳಿಗೆ ಒಳ್ಳೆಯ ಆಹಾರ, ಶಿಕ್ಷಣ, ಆರೈಕೆ, ಯೋಗ, ಪ್ರಾಣಾಯಾಮ ಇವುಗಳ ಜೊತೆ ನೈತಿಕ ಮೌಲ್ಯಗಳನ್ನು ನೀಡುವ ನೀತಿ ಶಿಕ್ಷಣವೂ ಬೇಕಿದೆ. ಉತ್ತಮ ಸಂಸ್ಕಾರ ಅವಶ್ಯವಾಗಿದೆ. ಮಕ್ಕಳಿಗೆ ಭದ್ರತೆ, ವಾತ್ಸಲ್ಯ, ಮಾರ್ಗದರ್ಶನ, ಶಿಕ್ಷಣ ಹಾಗೂ ಸಂಸ್ಕಾರ ನೀಡುವುದು ಪಾಲಕರ, ಶಿಕ್ಷಕರ ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮವನ್ನು ರೋಟರಿ ಕ್ಲಬ್ ನ ಅಧ್ಯಕ್ಷ ರೋಟೇರಿಯನ್ ಪಾಂಡುರಂಗ ಪೈ ಉದ್ಘಾಟಿಸಿದರು.
ಅತಿಥಿಗಳಾಗಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಯನ್ ಪ್ರೋ. ಎನ್. ವಿ. ಜಿ. ಭಟ್, ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಜೆ.ಎಫ್. ಲಯನ್ ಉದಯ ಸ್ವಾದಿ, ಕಾರ್ಯದರ್ಶಿ ಲಯನ್ ಪ್ರೋ. ರವಿ ನಾಯಕ ಆಗಮಿಸಿದ್ದರು.
ಲಯನ್ಸ ಶಾಲೆಯ ಮುಖ್ಯಾಧ್ಯಾಪಕ ಶ್ರೀ ಶಶಾಂಕ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿಯರಾದ ಮುಕ್ತಾ ನಾಯ್ಕ, ರೇಷ್ಮಾ ಮಿರಾಂದಾ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಲಯನ್ ಪ್ರಭಾಕರ ಹೆಗಡೆ, ಸಹಕಾರ್ಯದರ್ಶಿ ಲಯನ್ ವಿನಯ ಹೆಗಡೆ ಬಸವನಕಟ್ಟೆ ಉಪಸ್ಥಿತರಿದ್ದರು.
ಲಯನ್ಸ ಶಾಲೆಯ ಯೂಟ್ಯೂಬ್ ವಾಹಿನಿ ಹಾಗೂ ಜೂಮ್ ಆಪ್ ಮೂಲಕ ಪ್ರಸಾರವಾದ ಈ ಕಾರ್ಯಕ್ರಮವನ್ನು ನಾಲ್ಕು ಸಾವಿರಕ್ಕೂ ಮಿಕ್ಕಿ ಮಕ್ಕಳು, ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣಾಸಕ್ತರು ವೀಕ್ಷಿಸಿದರು.