ಶಿರಸಿ: ಹಾವುಗಳಲ್ಲೇ ಅತ್ಯಂತ ವಿಷಕಾರಿ ಹಾವಂದ್ರೆ ಅದು ಕಾಳಿಂಗ ಸರ್ಪ. ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಳಿಂಗ ಕಂಡುಬರುತ್ತವೆ. ಆದರೆ ಅಪರೂಪಕ್ಕೆಂಬಂತೆ ಶಿರಸಿಯ ಮನೆಯೊಂದರಲ್ಲಿ ಕಾಳಿಂಗ ಪತ್ತೆಯಾಗಿದ್ದು, ಮನೆಯವರೆಲ್ಲ ಹೌಹಾರುವಂತೆ ಮಾಡಿತ್ತು. ಅಂದಾಜು ಅರ್ಧ ಗಂಟೆಗಳ ಪ್ರಯತ್ನದಿಂದ ಕಾಳಿಂಗನನ್ನ ಮರಳಿ ಕಾಡಿಗೆ ಕಳುಹಿಸಲು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಈ ಕಾರ್ಯಾಚರಣೆ ಮಾತ್ರ ರೋಮಾಂಚಕವಾಗಿದೆ.
ಶಿರಸಿ ತಾಲೂಕಿನಿಂದ 35 ಕಿಲೋ ಮೀಟರ್ ನಷ್ಟು ದೂರದಲ್ಲಿರುವ ಮತ್ತಿಘಟ್ಟ ದಟ್ಟಾರಣ್ಯದಿಂದ ಕೂಡಿರುವ ಪ್ರದೇಶ. ಇಲ್ಲಿನ ಮನೆಯೊಂದರಿಂದ ಶಿರಸಿಯ ಉರಗ ಪ್ರೇಮಿ ಪ್ರಶಾಂತ್ ಹುಲೇಕಲ್ ಅವರಿಗೆ ಕರೆಯೊಂದು ಬಂದಿತ್ತು. ಅದರಂತೆ ಸ್ಥಳಕ್ಕೆ ತೆರಳಿದ ಪ್ರಶಾಂತ್ ಗೆ ಅಚ್ಚರಿ ಕಾದಿತ್ತು. ಬರೋಬ್ಬರಿ 14 ಅಡಿ ಉದ್ದದ ಕಾಳಿಂಗ ಸರ್ಪ ಮತ್ತಿಘಟ್ಟದ ಮನೆಯ ಗೋಡೆಯ ನಡುವೆ ಅವಿತು ಕೂತಿತ್ತು.
ಸಾಕಷ್ಟು ಹಾವುಗಳನ್ನು ಹಿಡಿದಿರುವ ಪ್ರಶಾಂತ್ ಕಾಳಿಂಗ ಸರ್ಪವನ್ನ ನೋಡಿ ಹೆದರದೆ ಅದನ್ನು ಹಿಡಿಯುವ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆ ಎಂಥವರಿಗೂ ಮೈ ಝುಮ್ ಎನಿಸುವಂತಿದೆ. ಸ್ನೇಕ್ ಕ್ಯಾಚರ್ ಸ್ಟಿಕ್ ನ ಸಹಾಯದಿಂದ ಕಾಳಿಂಗನನ್ನ ಹಿಡಿಯಲು ಮುಂದಾದ ಪ್ರಶಾಂತ್ ಅವರ ಮೇಲೆ ಕಾಳಿಂಗ ಹೆಡೆಯೆತ್ತಿಕೊಂಡು ಎರಗಲು ಮುಂದಾಗಿರುವ ರೋಮಾಂಚಕ ದೃಶ್ಯವನ್ನ ಪ್ರಶಾಂತ್ ಅವರೊಂದಿಗಿದ್ದ ಯುವಕರೋರ್ವರು ಸೆರೆ ಹಿಡಿದಿದ್ದಾರೆ.
ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಪ್ರಶಾಂತ್, ಕಾಳಿಂಗನನ್ನ ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಕೊನೆಗೆ ಕಾಳಿಂಗನನ್ನ ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ. ಇದರಿಂದಾಗಿ ಮತ್ತಿಘಟ್ಟದ ಮನೆಯವರು ನಿಟ್ಟುಸಿರು ಬಿಡುವಂತಾಯಿತು.