ಅಂಕೋಲಾ: ತಾಲೂಕಿನ ಗಡಿ ಭಾಗವಾದ ಕೋನಾಳದ ನಿವಾಸಿ ಪರಂಪರಾಗತ ನಾಟೀ ವೈದ್ಯರಾದ ಹಿರಿಯ ಚೇತನ ಕೋನಾಳ ಉದ್ದಿನಬೇಣ ದ ಮಹಾಬಲೇಶ್ವರ ಭಟ್ಟರು(94) ಗುರುವಾರ ಬೆಳಗ್ಗೆ 9:30 ಕ್ಕೆ ದೈವಾಧೀನರಾದರು.
ಇವರು 7 ಜನ ಮಕ್ಕಳು, ಮೊಮ್ಮಕ್ಕಳು, ಅಪಾರ ಬಂಧು- ಬಳಗವನ್ನು ಶ್ರೀಯುತರು ಅಗಲಿದ್ದಾರೆ. ಕಾಮಾಲೆ (ಜಾಂಡೀಸ್) ರೋಗಕ್ಕೆ ಅತ್ಯಂತ ಪರಿಣಾಮಕಾರಿ ಔಷಧಿಯನ್ನು ನೀಡುತ್ತಿದ್ದ ಮಹಾಬಲೇಶ್ವರ ಭಟ್ಟರು, ಕಾಮಾಲೆಯಿಂದಾಗಿ ಡಾಕ್ಟರುಗಳು ಕೈಚೆಲ್ಲಿದ ರೋಗಿಗಳನ್ನೂ ಸಹಾ ಗುಣಪಡಿಸಿದ ಖ್ಯಾತಿಯವರು, ಇದುವರೆಗೂ ಸಾವಿರಾರು ಜನ ಇವರ ಕೈಯಿಂದ ತಯಾರಾದ ಕಾಮಾಲೆ ಔಷಧಿ ಕುಡಿದು ಗುಣವಾದವರಿದ್ದಾರೆ. ಕಾಮಾಲೆಯಲ್ಲದೇ ಅನೇಕ ಖಾಯಿಲೆಗಳಿಗೆ ಹಳ್ಳಿ ಔಷಧಿ ನೀಡುತ್ತಿದ್ದ ಶ್ರೀಯುತರಿಗೆ ಅನೇಕ ಪ್ರಶಸ್ತಿ, ಸನ್ಮಾನ, ಗೌರವಾದರಗಳು ಲಭಿಸಿದ್ದವು. ಹಳೆಯ, ಸನಾತನ ಸಂಪ್ರದಾಯ, ಆಹಾರ- ಆರೋಗ್ಯ ಪದ್ಧತಿಯನ್ನು ಉಳಿಸಿಕೊಂಡು ಬರುವಲ್ಲಿ ಉದ್ದಿನಬೇಣ ಮಹಾಬಲೇಶ್ವರ ಭಟ್ಟರ ಪಾತ್ರ ಬಹಳ ದೊಡ್ಡದಿತ್ತು.
ಸಾಮಾಜಿಕವಾಗಿ ಕೂಡಾ ಸಾತ್ವಿಕ ನೆಲೆಘಟ್ಟಿನಲ್ಲಿ ಸ್ಪಂದಿಸುತ್ತಿದ್ದ ಮಹಾಬಲೇಶ್ವರ ಭಟ್ಟರ ನಿಧನಕ್ಕೆ ಡೋಂಗ್ರಿ ಗ್ರಾಮ ಪಂಚಾಯತ ಸದಸ್ಯ ನಾರಾಯಣ ಭಟ್ಟ ಜಾಯಿಕಾಯಿಮನೆ, ಹಾಗೂ ಹೆಗ್ಗಾರ, ಕಲ್ಲೇಶ್ವರ, ಹಳವಳ್ಳಿ, ಕೈಗಡಿ, ಕನಕನಹಳ್ಳಿ ಭಾಗದ ಅಪಾರ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ, ಕುಟುಂಬ ವರ್ಗಕ್ಕೆ ದುಖಃ ಸಹಿಸಿಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.