ಯಲ್ಲಾಪುರ: ಪಟ್ಟಣದ ಬೆಲ್ ರಸ್ತೆ ಬದಿಯಲ್ಲಿರುವ ಅನಧಿಕೃತ ತರಕಾರಿ ಅಂಗಡಿಗಳನ್ನು ಪ.ಪಂ ಸಿಬ್ಬಂದಿ ಬುಧವಾರ ತೆರವುಗೊಳಿಸಲು ಮುಂದಾಗಿದ್ದು, ಈ ವೇಳೆ ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ವಾಗ್ವಾದ ನಡೆಸಿದರು.
ಪ.ಪಂ ಆರೋಗ್ಯಾಧಿಕಾರಿ ಗುರು ನೇತೃತ್ವದಲ್ಲಿ ಅಂಗಡಿ ತೆರವಿಗೆ ಪ.ಪಂ ಸಿಬ್ಬಂದಿ ಬಂದ ವೇಳೆ ತರಕಾರಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಅಂಬೇಡ್ಕರ್ ಸರ್ಕಲ್ ನಿಂದ ಗಾಂಧಿ ಚೌಕದವರೆಗೆ ಫುಟ್ ಪಾತ್ ಮೇಲೆಯೇ ತರಕಾರಿ, ಹಣ್ಣು, ಹೂವು ವ್ಯಾಪಾರ ನಡೆಯುತ್ತದೆ. ಅದರಿಂದ ಫುಟ್ ಪಾತ್ ಮೇಲೆ ಓಡಾಡುವವರು ರಸ್ತೆಯ ಮೇಲೆ ಓಡಾಡುವಂತಾಗಿದೆ. ಅದನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪ್ರಶ್ನಿಸುತ್ತಿಲ್ಲ. ಕೇವಲ ನಮ್ಮ ಅಂಗಡಿಗಳನ್ನು ಮಾತ್ರ ಏಕೆ ತೆರವು ಮಾಡುತ್ತಿದ್ದೀರಿ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ತರಕಾರಿ, ಹಣ್ಣು ಮಾರಾಟ ಅಧಿಕೃತವಾಗಿ ಮಾರುಕಟ್ಟೆಯಲ್ಲೇ ನಡೆಯುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು, ಸಿಬ್ಬಂದಿ ಮನವೊಲಿಸುವ ಪ್ರಯತ್ನ ಮಾಡಿದರು. ಆದರೂ ವ್ಯಾಪಾರಸ್ಥರ ಆಕ್ರೋಶ ಮಾತ್ರ ಕಡಿಮೆ ಆಗಿಲ್ಲ. ಹಾಗಾಗಿ ಅಧಿಕಾರಿಗಳು ಬರಿಗೈಯಲ್ಲಿ ಮರಳುವಂತಾಯಿತು.
ಪ್ರತಿ ಸಭೆಯಲ್ಲಿ ಚರ್ಚೆ, ಯಾವ ಕ್ರಮವೂ ಇಲ್ಲ: ಕಳೆದ 4-5 ವರ್ಷಗಳಿಂದ ಪಟ್ಟಣ ಪಂಚಾಯಿತಿಯ ಪ್ರತಿ ಸಭೆಯಲ್ಲೂ ಫುಟ್ ಪಾತ್ ಮೇಲಿನ ಅಂಗಡಿಗಳು, ರಸ್ತೆ ಪಕ್ಕದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವ ಕುರಿತಂತೆ ಚರ್ಚೆಯಾಗುತ್ತಿದೆ. ಆದರೆ ಅದು ಕೇವಲ ಚರ್ಚೆಗೆ, ನಿರ್ಣಯಕ್ಕೆ ಮಾತ್ರ ಸೀಮಿತವಾಗುತ್ತಿದೆಯೆ ಹೊರತು ಕಾರ್ಯರೂಪಕ್ಕೆ ಬರದೇ ಇರುವುದು ವಿಪರ್ಯಾಸ. ಕೆಲವೊಮ್ಮೆ ಅನಧಿಕೃತ ಅಂಗಡಿಗಳನ್ನು ಕೆಲವೊಮ್ಮೆ ತೆರವುಗೊಳಿಸಿದರೂ ಅದು ಕೇವಲ 2-3 ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಕೆಲವು ಪ್ರದೇಶದ ಅಂಗಡಿಗಳನ್ನು ಮಾತ್ರ ತೆರವುಗೊಳಿಸಲಾಗುತ್ತದೆ. ಕಠಿಣ ಕ್ರಮ ಎಂಬುದು ಕೇವಲ ಬಾಯಿಮಾತಿಗೆ ಮಾತ್ರ ಎಂಬಂತಾಗಿದೆ.