ನವದೆಹಲಿ: ವಿಸ್ತೃತ ಮಾರ್ಗಸೂಚಿಯ ಅನ್ವಯ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಸ್ತಬ್ದಚಿತ್ರವನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ಪಷ್ಟನೆ ನೀಡಿದ್ದಾರೆ.
ಸ್ತಬ್ದಚಿತ್ರ ಆಯ್ಕೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ತಮ್ಮ ರಾಜ್ಯಗಳ ಸ್ತಬ್ದಚಿತ್ರ ತಿರಸ್ಕರಿಸಲ್ಪಟ್ಟಿರುವುದಕ್ಕೆ ಅಸಮಾಧಾನ ಹೊರ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಪತ್ರ ಬರೆದಿರುವ ರಾಜನಾಥ್ ಸಿಂಗ್, ಮಾರ್ಗಸೂಚಿಯನ್ವಯ ಸ್ತಬ್ದಚಿತ್ರವನ್ನು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿರುವ ರಾಜನಾಥ್ ಸಿಂಗ್, ನರೇಂದ್ರ ಮೋದಿ ನೇತೃತ್ವದ ಸರಕಾರ ನೇತಾಜಿ ಅವರಿಗೆ ಅತ್ಯುನ್ನತ ಗೌರವ ನೀಡುತ್ತದೆ. ಅಲ್ಲದೆ ಅವರ ಜನ್ಮದಿನಾಚರಣೆಯನ್ನು ಜನವರಿ 23ರಂದು ಪರಾಕ್ರಮ್ ದಿವಸ ಆಗಿ ಆಚರಿಸುತ್ತದೆ. ಅಲ್ಲದೇ ಗಣರಾಜ್ಯೋತ್ಸವವನ್ನು ಅವರ ಜನ್ಮದಿನಾಚರಣೆ ಯಿಂದ ಆರಂಭಿಸಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಏಕೆ ಸ್ಟಾಲಿನ್ ಅವರಿಗೆ ಪತ್ರ ಬರೆದಿರುವ ರಾಜನಾಥ್ ಸಿಂಗ್, ಸ್ತಬ್ದ ಚಿತ್ರಗಳ ಆಯ್ಕೆ ಮಾರ್ಗಸೂಚಿಯಂತೆ ನಡೆದಿದೆ. ಮೊದಲ 3 ಸುತ್ತಿನ ಸಭೆಯಲ್ಲಿ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರ ಆಯ್ಕೆಯಾಗಿದ್ದವು. ಆದರೆ ಸ್ತಬ್ದಚಿತ್ರಗಳ ಅಂತಿಮ ಪಟ್ಟಿಯಲ್ಲಿ 12 ಸ್ತಬ್ಧ ಚಿತ್ರಗಳು ಮಾತ್ರ ಆಯ್ಕೆಯಾಗಿದ್ದು, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಸ್ತಬ್ದ ಚಿತ್ರ ಆಯ್ಕೆ ಆಗಿಲ್ಲ ಎಂದಿದ್ದಾರೆ.