ಶಿರಸಿ: ತಾಲೂಕಿನ ಸುಗಾವಿ ಗ್ರಾಮದಲ್ಲಿ ಕಾಡು ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡ ತನ್ನನ್ನು ರಕ್ಷಿಸಿಕೊಳ್ಳಲು ಗ್ರಾಮದೊಳಕ್ಕೆ ಬಂದ ಜಿಂಕೆ ಮರಿಯನ್ನು ರಕ್ಷಿಸಿ ಪುನಃ ಕಾಡಿಗೆ ಬಿಡಲಾಗಿದೆ.
ಕಾಡುನಾಯಿಗಳ (ಸೀಳುನಾಯಿಗಳು) ದಾಳಿಯಿಂದ ಜೀವತಪ್ಪಿಸಿಕೊಂಡು ಬಂದ ಜಿಂಕೆ ಮರಿ ಗ್ರಾಮದೊಳಕ್ಕೆ ಬಂದಿದೆ. ಜಿಂಕೆಮರಿ ಕಂಡ ನಾಯಿಗಳು ಬೆನ್ನಟ್ಟಿವೆ. ಇದನ್ನು ಕಂಡ ಗ್ರಾಮಸ್ಥರು ಜಿಂಕೆಮರಿಯನ್ನು ನಾಯಿಗಳಿಂದ ರಕ್ಷಿಸಿದ್ದಾರೆ. ಸಂಜೆ 5ರ ಸುಮಾರಿಗೆ ಜಿಂಕೆ ಮರಿ ಗ್ರಾಮದೊಳಗೆ ಬಂದಿದ್ದು, ನಾಲ್ಕು ಕಾಡುನಾಯಿಗಳು (ಸೀಳು ನಾಯಿಗಳು) ಅಟ್ಟಿಸಿಕೊಂಡು ಬಂದಿವೆ. ಅವುಗಳಿಂದ ತಪ್ಪಿಸಿಕೊಂಡು ಬಂದ ಜಿಂಕೆ ಸುಗಾವಿ ಗಣಪತಿ ದೇವಸ್ಥಾನದ ಸಮೀಪದ ಪಟೇಲರ ಮನೆ ಮುಂದಿನ ರಸ್ತೆಗೆ ಬಂದಿದೆ. ಸೀಳುನಾಯಿಗಳು ಗ್ರಾಮದೊಳಕ್ಕೆ ಬರಲು ಹೆದರಿ ಕೇರಿಯ ಹಿಂದಿನ ಬೆಟ್ಟದಲ್ಲಿಯೇ ನಿಂತಿದ್ದವು.
ಗ್ರಾಮದೊಳಕ್ಕೆ ಜಿಂಕೆಮರಿ ಬಂದ ತಕ್ಷಣ ನಾಯಿಗಳು ಅದನ್ನು ಬೆನ್ನಟ್ಟಿವೆ. ಇದನ್ನು ನೋಡಿದ ಲೋಕೇಶ ಭಟ್, ಆನಂದ ಭಟ್, ನಿರಂಜನ ಭಟ್, ಹರ್ಷ ಮತ್ತಿತತರರು ಅದನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆಗ ಇವರ ಜೊತೆಗೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಗಣಪತಿ ಚೆನ್ನಯ್ಯ, ಅನೂಪ್ ಚೆನ್ನಯ್ಯ ಹಾಗೂ ಧನಜಯ ಚೆನ್ನಯ್ಯ ಅವರು ಸಹ ಅಲ್ಲಿಗೆ ಬಂದಿದ್ದಾರೆ. ಎಲ್ಲರೂ ಸೇರಿ ಹರಸಾಹಸಪಟ್ಟು ನಾಯಿಯಿಂದ ಜಿಂಕೆ ಮರಿಯನ್ನು ರಕ್ಷಿಸಿದ್ದಾರೆ.
ನಂತರ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಅರಣ್ಯ ಇಲಾಖೆ ವಾಚನ್ ನರಸಿಂಹ ಆಗಮಿಸಿದರು. ಜಿಂಕೆ ಮರಿಗೆ ಪೆಟ್ಟಾಗಿದೆಯೇ ಎಂದು ಪರೀಕ್ಷಿಸಿ ಖಾತರಿಸಿಕೊಂಡ ನಂತರ ನಿರಂಜನ ಭಟ್, ಆನಂದ ಭಟ್, ಹರ್ಷ ಮತ್ತಿತರರು ಅರಣ್ಯ ಇಲಾಖೆ ವಾಚನ್ ನರಸಿಂಹ ಜೊತೆ ಜಿಂಕೆಮರಿಯನ್ನು ಸಮೀಪದ ವಡ್ಡಿನಕೊಪ್ಪದ ಕಾಡಿಗೆ ಬಿಟ್ಟಿದ್ದಾರೆ.