ಯಲ್ಲಾಪುರ: ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿಕೇರಿ ಸಮೀಪದ ದೇಶಪಾಂಡೆ ನಗರದಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ಮಾಡುವ ಕೆಲವು ಮನೆಗಳು, ಗೂಡಂಗಡಿಗಳಿಗೆ ನೂರಾರು ಮಹಿಳೆಯರು ನುಗ್ಗಿ ಅಕ್ರಮವಾಗಿ ಮಾರಾಟಕ್ಕೆ ತರಲಾಗಿದ್ದ ನೂರಾರು ಮದ್ಯದ ಪೊಟ್ಟಣಗಳನ್ನು (ಪೌಚ್) ಪತ್ತೆ ಹಚ್ಚಿದರು.
ಸಂಬoಧಿಸಿದ ಇಲಾಖೆಗಳಿಗೆ ದೂರು ನೀಡಿದರೂ ಕೂಡ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸ್ಥಳೀಯ ಮಹಿಳೆಯರ ನೋವಾಗಿದೆ. ಮಂಜುನಾಥ ಪ್ರಗತಿ ಬಂಧು ಸಂಘದ ಸದಸ್ಯರಾಗಿರುವ ಮಹಿಳೆಯರು, ಕೆಲವು ದಿನಗಳ ಹಿಂದೆ ಅನಧಿಕೃತ ಮದ್ಯ ಮಾರಾಟ ತಡೆಯುವಂತೆ ಯಲ್ಲಾಪುರ ಪೊಲೀಸ್ ಠಾಣೆಗೆ ಲಿಖಿತವಾಗಿ ಮನವಿ ನೀಡಿದ್ದರು. ಆದರೆ, ಯಾವುದೇ ಕ್ರಮ ಜರುಗದ ಕಾರಣ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಕದ ಗ್ರಾಮದ ವ್ಯಕ್ತಿಯೊಬ್ಬರು ಅತಿಯಾದ ಮದ್ಯ ಸೇವನೆಯಿಂದಾಗಿ ಅಸ್ವಸ್ಥನಾಗಿದ್ದು, ಹುಬ್ಬಳ್ಳಿಯ ‘ಕಿಮ್ಸ್’ನಲ್ಲಿ ಸಾವು-ಬದುಕಿನ ಮಧ್ಯ ಹೋರಾಟ ನಡೆಸಿದ್ದಾನೆ. ಭತ್ತದ ಗದ್ದೆ ಕೊಯ್ಲು ಭತ್ತವನ್ನು ಒಕ್ಕಲು ಮಾಡುವ ಈ ಸಂದರ್ಭದಲ್ಲಿ ಗ್ರಾಮದ ಹೆಚ್ಚಿನ ಪುರುಷರು ಅನಧಿಕೃತ ಮದ್ಯ ಮಾರಾಟದ ಅಡ್ಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೆ ಮತ್ತು ಅಲ್ಲಲ್ಲಿ ಬಿದ್ದುಕೊಳ್ಳುತ್ತಿರುವ ಕಾರಣದಿಂದ ಮಹಿಳೆಯರೇ ರೈತಾಪಿ ಕೆಲಸ ಮಾಡಬೇಕಾಗಿದೆ.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಇಂತಹ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದು ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಶಿರಸಿ ಡಿ. ವೈ. ಎಸ್ಪಿ ಹಾಗೂ ಶಿರಸಿ ಉಪ ವಿಭಾಗಾಧಿಕಾರಿಗಳು ಯಲ್ಲಾಪುರದಲ್ಲಿಯೇ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಬೇಕು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.