ಕಾರವಾರ: ಇಂಧನ ಇಲಾಖೆಯ ‘ಬೆಳಕು’ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಲು ಜ.31 ಕೊನೆಯ ದಿನವಾಗಿದೆ.
ವಿದ್ಯುತ್ ಸೌಲಭ್ಯವು ಮೂಲಭೂತ ಸೌಕರ್ಯಗಳಲ್ಲೊಂದಾಗಿದ್ದು, ಸದ್ಯದ ಕೋವಿಡ್-19 ಪರಿಸ್ಥಿತಿಯಲ್ಲಿ ಮನೆಯಿಂದಲೇ ಕೆಲಸ ಮಾಡಲು ಹಾಗೂ ಆನ್ಲೈನ್ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಎಲ್ಲಾ ಕುಟುಂಬದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಅಗತ್ಯವಾಗಿದೆ. ಸದರಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದನ್ನು ಸರ್ಕಾರವು ಆದ್ಯತೆಯೆಂದು ಪರಿಗಣಿಸಿ, ಇಂಧನ ಇಲಾಖೆಯ ವತಿಯಿಂದ ಉಚಿತ ವಿದ್ಯುತ್ ಸಂಪರ್ಕ ನೀಡುವ ‘ಬೆಳಕು’ ಯೋಜನೆಯನ್ನು ಸೆ.1ರಿಂದ ಪ್ರಾರಂಭಿಸಿದೆ.
ಈಗಾಗಲೇ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 3716 ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಒದಗಿಸಲು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಿಂದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಜಿದಾರರು ಜ.31ರ ಒಳಗಾಗಿ ತಮ್ಮ ಸಮೀಪದ ಹೆಸ್ಕಾಂ ವಿಭಾಗದ ಉಪ ವಿಭಾಗ/ ಶಾಖಾ ಕಛೇರಿ ಅಥವಾ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿಯನ್ನು ನೊಂದಾಯಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಯಡಿಯಲ್ಲಿ ವಿದ್ಯುತ್ ರಹಿತ ಮನೆಗಳ ಫಲಾನುಭವಿಗಳಿಂದ ರೇಷನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ, ಗ್ರಾಮ ಪಂಚಾಯಿತಿ ಒದಗಿಸುವ ಪಟ್ಟಿ ಅಥವಾ ಇನ್ನಿತರ ದಾಖಲಾತಿಗಳನ್ನು ಪರಿಗಣಿಸಿ ಉಚಿತ ಸಂಪರ್ಕ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಈ ಯೋಜನೆಯ ಸದುಪಯೋಗವನ್ನು ಪಡೆಯಲು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿಲು ಹೆಸ್ಕಾಂ ವಿನಂತಿಸಿದೆ.