ಶಿರಸಿ: ರೇಬಿಸ್ ಕಾಯಿಲೆಗೆ ಯಾವುದೇ ಔಷಧವಿಲ್ಲ. ಮುನ್ನೆಚ್ಚರಿಕೆ ಅಗತ್ಯ ಎಂದು ಡಾಕ್ಟರ್ ಗಣೇಶ್ ಹೆಗಡೆ ಹೇಳಿದರು. ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಶಿರಸಿ ಲಯನ್ಸ್ ಕ್ಲಬ್, ಲಿಯೋಕ್ಲಬ್, ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಪಶುಸಂಗೋಪನಾ ಇಲಾಖೆ ಶಿರಸಿ ಇವರ ವತಿಯಿಂದ ಅಜಾದಿ ಕಾ ಅಮೃತಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರಾಣಿಜನ್ಯ ಮಾನವ ರೋಗಗಳು ಎನ್ನುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿ ಡಾಕ್ಟರ್ ಎನ್. ಎಚ್. ಸವಣೂರು ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಗಣೇಶ್ ಹೆಗಡೆ ಇವರು ಪ್ರಾಣಿಜನ್ಯ ಮಾನವ ರೋಗಗಳ ಬಗ್ಗೆ ಮಾಹಿತಿ ನೀಡುತ್ತಾ, ರೇಬಿಸ್ ರೋಗದ ಪ್ರಸಾರ, ರೋಗದ ಲಕ್ಷಣಗಳು, ಮನುಷ್ಯರಲ್ಲಿ ರೇಬಿಸ್ ಲಕ್ಷಣಗಳು, ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಶಾಲೆಯ ವಿಜ್ಞಾನ ಸಂಘದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಸಂಘಟಿಸಿದರು. 9ನೆ ತರಗತಿ ವಿದ್ಯಾರ್ಥಿಗಳಾದ ಇಶಾ ಪಟವರ್ಧನ್ ಮತ್ತು ಕ್ಷಿತಿ ಕಾರ್ಯಕ್ರಮ ನಿರೂಪಸಿದರು. ಶ್ರದ್ಧಾ ವಿಠಲ್ಕರ್ ಸ್ವಾಗತ ಕೋರಿದರೆ, 8ನೇ ತರಗತಿಯ ಅನನ್ಯಾ ಅಶ್ವಥ್ ಹೆಗಡೆ ವಂದಿಸಿದಳು. ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಕಾರ್ಯಾಗಾರದ ಪ್ರಯೋಜನ ಪಡೆದರು.