ಭಟ್ಕಳ: ಜನವರಿ 15 ರಿಂದ 22 ರ ತನಕ ಮುರುಡೇಶ್ವರ ಜಾತ್ರೆ ಹಾಗೂ ಜನವರಿ 23 ರಿಂದ 25 ರ ತನಕ ನಡೆಯಲಿರುವ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ಜಾತ್ರಾ ಮಹೋತ್ಸವವು ಸರಕಾರದ ಕಟ್ಟುನಿಟ್ಟಿನ ಕೋವಿಡ್ ಮಾರ್ಗಸೂಚಿ ಆದೇಶದಂತೆ ಜರುಗಿಸಲಾಗುವುದು ಎಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ತಿಳಿಸಿದರು.
ಅವರು ಕೋವಿಡ್-19 ವಿಷಯದ ಕುರಿತು ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ, ರಾಜ್ಯದಲ್ಲಿ ಕೋವಿಡ್-19 ರೂಪಾಂತರಿ ಓಮಿಕ್ರೋನ್ ವೈರಾಣು ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ಜನವರಿ 4 ರಂದು ಹೊರಡಿಸಿದ ಕೋವಿಡ್ ಆದೇಶಗಳಲ್ಲಿ ಪೂರ್ವಭಾವಿಯಾಗಿ ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿದ್ದು, ಪ್ರತಿ ದಿನ ರಾತ್ರಿ 10 ರಿಂದ ಮರುದಿನ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂವನ್ನೂ ಹಾಗೂ ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂವನ್ನು ಜಾರಿಗೊಳಿಸಲಾಗಿ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆ ಹೊರತು ಪಡಿಸಿ ಇತರೆ ಅನಗತ್ಯ ಸಾರ್ವಜನಿಕರ ಸಂಚಾರವನ್ನು ನಿಬಂಧಿಸಲಾಗಿದೆ.
ಹಬ್ಬಗಳ ಪ್ರಯುಕ್ತ ದೇವಾಲಯದ ಶಾಸ್ತ್ರ ಸಂಪ್ರದಾಯದಂತೆ ದೇವಾಲಯಗಳ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜಾ ಕೈಂಕರ್ಯಗಳನ್ನು ನಡೆಸಲು ಅನುಮತಿಸಿದೆ. ವೈಕುಂಠ ಏಕಾದಶಿ ದಿನದಂದು ಈಗಾಗಲೇ ನಿಗಧಿಪಡಿಸಿರುವಂತೆ ಪೂರ್ಣ ಪ್ರಮಾಣದ ಕೋವಿಡ್ 19 ಲಸಿಕೆ ಪಡೆದ 50 ಜನರಿಗೆ ಮಾತ್ರ ಒಂದು ಬಾರಿ ದರ್ಶನಕ್ಕೆ ಅವಕಾಶ ಕಲ್ಪಿಸತಕ್ಕದ್ದು. ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶ ಇರುವುದಿಲ್ಲ. ಹಬ್ಬಗಳ ಆಚರಣೆಯ ಸಲುವಾಗಿ ಯಾವುದೇ ರೀತಿಯ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮಗಳು ಇತ್ಯಾದಿಗಳನ್ನು ಆಯೋಜಿಸುವಂತಿಲ್ಲ.
ಜನವರಿ 15 ರಿಂದ ಜನವರಿ 22 ರ ತನಕ ನಡೆಯಲಿರುವ ಮಾತ್ಹೋಬ್ಹಾರ ಶ್ರೀ ಮುರ್ಡೇಶ್ವರ ದೇವಸ್ಥಾನ ಜಾತ್ರೆ (ರಥೋತ್ಸವ) ಕುರಿತಂತೆ ಜನವರಿ 10 ರಂದು ನಡೆದ ಸಭೆಯಲ್ಲಿ ಮಾತ್ಹೋಬ್ಹಾರ ಶ್ರೀ ಮುರ್ಡೇಶ್ವರ ದೇವಸ್ಥಾನ ಜಾತ್ರೆ (ರಥೋತ್ಸವ) ಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯನುಸಾರ ಧಾರ್ಮಿಕ ವಿಧಿ ವಿಧಾನಗಳಿಗೆ ಸೀಮಿತವಾಗಿ ಆಚರಿಸಲು ಹಾಗೂ ಜಾತ್ರೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದಕ್ಕೆ ನಿಬಂಧವಿರುತ್ತದೆ.
ಜಾತ್ರೆ ಪ್ರಯುಕ್ತ ಯಾವುದೇ ಹೊಸ ಅಂಗಡಿ, ಮಳಿಗೆಗಳನ್ನು ತೆರೆಯಲು ಅವಕಾಶವಿರದ ಕಾರಣ ಪ್ರಸ್ತುತ ಇರುವ ಅಂಗಡಿ ಮುಂಗಟಟು ಹಾಗೂ ಮಳಿಗೆಗಳ ಮಾಲಕರು ಹಾಗೂ ಸದರೀ ಅಂಗಡಿ ಮಳಿಗೆಗಳಿಗೆ ಪ್ರವೇಶಿಸುವ ಸಾರ್ವಜನಿಕರು ಮಾಸ್ಕ ಧರಿಸುವುದು,
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಕೋವಿಡ್ ಸಮುಚಿತ ವರ್ತನೆ ಪಾಲಿಸುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿ, ಮಾವಳ್ಳಿರವರಿಂದ ಕ್ರಮ ವಹಿಸಲಾಗುತ್ತಿದೆ.
ಪ್ರಸ್ತುತ ಕೋವಿಡ್ ಮಾರ್ಗಸೂಚಿಯಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಡೆಗಟ್ಟುವ ಪ್ರಯುಕ್ತ ರಥೋತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಡೆಗಟ್ಟುವ ಪ್ರಯುಕ್ತ ರಥೋತ್ಸವ ದಿನದಂದು ಸಾರ್ವಜನಿಕರು, ಭಕ್ತಾಧಿಗಳು ಹೆಚ್ಚನ ಪ್ರಮಾಣದಲ್ಲಿ ಸೇರದಂತೆ, ದೇವಸ್ಥಾನದ ಅರ್ಚಕ, ಸಿಬ್ಬಂದಿ ಹಾಗೂ ರಥೋತ್ಸವ ಕಾರ್ಯಕ್ರಮದ ಸಿಬ್ಬಂದಿಗಳಿಗೆ ತಹಶೀಲ್ದಾರ ಕಚೇರಿಯಿಂದ ಪಾಸ್ ನೀಡಲು ಕ್ರಮವಹಿಸಲಾಗುವುದು. ಪಾಸ್ ಹೊಂದಿರುವವರ ಹೊರತಾಗಿ ಬೇರೆ ಯಾರಿಗೂ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.
ಅದರಂತೆ ರಥೋತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಡೆಗಟ್ಟುವ ಪ್ರಯುಕ್ತ ರಥೋತ್ಸವ ದಿನದಂದು ಸಾರ್ವಜನಿಕರು, ಭಕ್ತಾಧಿಗಳು ಹೆಚ್ಚಿನ ಪ್ರಮಾಣದಲ್ಲಿ ಸೇರದಂತೆ, ದೇವಸ್ಥಾನದ ಒಳಗಿನ ಪ್ರವೇಶಾತಿಗೆ ಕೋವಿಡ್ 2 ಡೋಸ್ ಲಸಿಕೆ ಪಡೆದಿರುವ (ಒಂದು ಸಮಯದಲ್ಲಿ 100 ಜನರಿಗೆ ಮಾತ್ರ) ಹಾಗೂ ರಥೋತ್ಸವ ಸಮಯದಲ್ಲಿ (200) ಜನರಿಗೆ ಪಾಸ್ ಹೊಂದಿರುವವರ ಹೊರತಾಗಿ ಬೇರೆ ಯಾರಿಗೂ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ ಹಾಗೂ ಸದರೀ ರಥೋತ್ಸವದಲ್ಲಿ ಯಾವುದೇ ಕೋವಿಡ್ ನಿಯಮಗಳ ಉಲ್ಲಂಘನೆಯಾಗದಂತೆ, ಕೋವಿಡ್ ಸಮುಚ್ಚಿತ ವರ್ತನೆಯನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಜನವರಿ 23 ರಿಂದ 25 ರ ತನಕ ನಡೆಯಲಿರುವ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ಜಾತ್ರಾ ಮಹೋತ್ಸವವನ್ನು ಸರಳವಾಗಿ ಧಾರ್ಮಿಕ ವಿಧಿ-ವಿಧಾನಗಳನ್ನು ಮಾತ್ರ ಆಚರಿಸಲಾಗುತ್ತಿದೆ. ಸರಕಾರದ ಮಾರ್ಗಸೂಚಿಯಂತೆ ಜನವರಿ 25 ರಂದು ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದು, ಜಾತ್ರಾ ಸೇವೆಗಳಾದ ಹಣ್ಣುಕಾಯಿ ಸೇವೆ, ತೀರ್ಥ-ಪ್ರಸಾದ, ಪ್ರಸಾದ ಹಂಚಿಕೆ, ತುಲಾಭಾರ ಸೇವೆ, ಅನ್ನದಾನದ ಸೇವೆ, ಬೊಂಬೆ ಸೇವೆ ಇತ್ಯಾದಿಗಳನ್ನು ಈ ವರ್ಷ ಕೋವಿಡ್ ನಿಮಿತ್ತ ನಿಬಂಧಿಸಲಾಗಿರುತ್ತದೆ.
ಸರಕಾರದ ಜನವರಿ 5 ರ ಸುತ್ತೋಲೆಯಂತೆ ಜನವರಿ 4 ರಂತೆ ಒಳಾಂಗಣ ಪ್ರದೇಶದಲ್ಲಿ 100 ಜನ ಮಾತ್ರ ಮತ್ತು ಹೊರಾಂಗಣದಲ್ಲಿ ಪ್ರದೇಶದಲ್ಲಿ 200 ಜನರು ಮಾತ್ರ ಕೋವಿಡ್ ಸಮುಚ್ಚಿತ ವರ್ತನೆ ಅನುಸರಿಸಿ, ಕೇವಲ ದೇವರ ದರ್ಶನಕ್ಕೆ 2 ಡೋಸ್ ಲಸಿಕೆಯನ್ನು ಪಡೆದ ಪ್ರತಿ ಬಾರಿಗೆ 50 ಜನರ ಮಿತಿಗೆ ಒಳಪಟ್ಟು ಅವಕಾಶ ನೀಡಿದಂತೆ ಸರಳವಾಗಿ ಯಾವುದೇ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಕೋವಿಡ್ ಸಮುಚ್ಚಿತ ವರ್ತನೆಯನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಎರಡು ಜಾತ್ರಾ ಸಮಯದಲ್ಲಿ ಸಾರ್ವಜನಿಕರು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಎಸ್. ರವಿಚಂದ್ರ ಉಪಸ್ಥಿತರಿದ್ದರು.