ಯಲ್ಲಾಪುರ: ಜೀವನಾನುಭವ ನೀಡುವ ಆನಂದ ವಿಶೇಷವಾದದ್ದು. ಅವಕಾಶವನ್ನು ಬಳಸಿಕೊಂಡು ಜ್ಞಾನದ ಹಸಿವನ್ನು ಹಿರಿಯ ಸಾಧಕರಿಂದ ಅಧ್ಯಯನದ ನೆಪದಲ್ಲಿ ಪಡೆದರೆ ಅದು ಶಾಶ್ವತವಾಗಿ ಆಧಾರವಾಗಬಲ್ಲದು. ಎಂದು ಪರಿಸರ ತಜ್ಞ ,ಬರಹಗಾರ ಶಿವಾನಂದ ಕಳವೆ ಅಭಿಪ್ರಾಯಪಟ್ಟರು.
ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯತ ಗ್ರಂಥಾಲಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಿಂಗಳ ಅತಿಥಿಯ ಮಾತುಕತೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು ನಾವು ನಮ್ಮ ನಡುವಿನ ಪರಿಸರದ ಹೊರತಾಗಿ ಬದುಕಲು ಸಾಧ್ಯವೇ ಇಲ್ಲಾ. ಜೀವಜಾಲದ ಜೀವನ ಪಾಠ ದೊಡ್ಡದು. ಮನುಷ್ಯನ ಜೀವಂತಿಕೆಗೆ ಕಾರಣವಾದ ಕಾಡಿನ ಜೀವವೈವಿಧ್ಯ ದ ಸದಸ್ಯರನ್ನು ನಾವು ರಕ್ಷಿಸಬೇಕಾಗಿದೆ. ಏಕ ಜಾತಿಯ ಸಸ್ಯ ನಮ್ಮ ಪರಿಸರಕ್ಕೆ ಮಾರಕ. ದೇವರ ಕಾನು ಈ ಭಾಗದ ಭೂಮಿಯ ಭಾಗ್ಯ. ಋತುಮಾನಕ್ಕೆ ತಕ್ಕಹಾಗೆ ಭೂಮಿಯಲ್ಲಿ ಆಗುವ ಬದಲಾವಣೆಯ ಗುಣಕ್ಕೆ ನಾವು ಹೆಜ್ಜೆ ಹಾಕಬೇಕಿದೆ.ನಿಸರ್ಗದಲ್ಲಿನ ಸಹಬಾಳ್ವೆ ಯ ವಿಸ್ಮಯ ನಮಗೆ ಪಾಠವಾಗಬೇಕು.
ಪರಿಸರದ ಪ್ರಪಂಚದ ಸಂಶೋಧನಾತ್ಮಕ ಅಧ್ಯಯನವೆಂದರೆ ನಮ್ಮ ಅಸ್ಥಿತ್ವದ ಅಧ್ಯಯನವೇ ಆಗಿದೆ.ಕಾಡಿನ ಕತೆಗಳು ಪರಿಸರದ ಪ್ರೀತಿಯನ್ನು ಹೆಚ್ಚಿಸುತ್ತದೆ.ಆರ್ಥಿಕತೆಯ ಬೆನ್ನು ಬಿದ್ದು ನಮ್ಮ ನೆಲದ ಅಂತರಂಗವನ್ನು ಅರಿಯುವಲ್ಲಿ ಸೋತಿದ್ದೇವೆ. ಇದರಿಂದ ಮುಂದಿನ ಪಿಳಿಗೆಗೆ ಅಪಾಯಕಾರಿ ಪರಿಣಾಮಗಳು ಸಂಭವಿಸಲಿದೆ. ಕಾಡಿನ ಕೌತುಕ ಓದುವ, ಅನುಭವಿಸುವ ಕೌಶಲ್ಯ ನಮ್ಮದಾಗಬೇಕಿದೆ.ನಮ್ಮ ಹಿರಿಯರು ಹೇಳಿದ ನೆಲಮೂಲದ ವಿಜ್ಞಾನದ ಎಲ್ಲಾ ಮುಖಗಳನ್ನೂ ಕೇಳಿ ,ಜೀವನದ ಗುಟ್ಟುಗಳನ್ನು ಕಟ್ಟಿಕೊಳ್ಳುವ ಬದುಕಿನಲ್ಲಿ ಸಾರ್ಥಕವಿದೆ . ನಾವು ವಿಕಾಸವಾಗಬೇಕಾದರೆ ದೇಸೀ ಅರಣ್ಯ ಜ್ಞಾನವು ನಮ್ಮದಾಗಬೇಕು. ಚಿಕಿತ್ಸಕ ಕಣ್ಣುಗಳಿಂದ ಪರಿಸರ ವಿಜ್ಞಾನ ನೋಡಬೇಕಿದೆ.ಕಾಡು ಸಕಾರಾತ್ಮಕ ಸಂಗತಿಗಳನ್ನು ತಿಳಿಸುವ ಮಾರ್ಗದರ್ಶಿ ಎಂದರು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಸರ್ವೋದಯ ಪ್ರೌಢಶಾಲೆಯು ಮುಖ್ಯಾಧ್ಯಾಪಕ ಎಮ್ ಕೆ ಭಟ್ಟವಹಿಸಿದ್ದರು. ಅತಿಥಿಗಳಾಗಿ ವಿವೇಕಾನಂದ ಸೇವಾ ಬಳಗದ ಉಪಾಧ್ಯಕ್ಷರಾದ ಜಿ.ಎನ್.ಕೋಮಾರ ಉಪಸ್ಥಿತರಿದ್ದರು. ಸುಜಿತ್ ಭಟ್ಟ, ರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗ್ರಂಥಪಾಲಕ ದತ್ತಾತ್ರೇಯ ಭಟ್ಟ ಕಣ್ಣಿಪಾಲ ಸ್ವಾಗತಿಸಿದರು. ಶಿಕ್ಷಕ ರವೀಂದ್ರ ಗಾಂವ್ಕಾರ ನಿರೂಪಿಸಿದರು. ಶಿಕ್ಷಕ ಎಸ್. ಟಿ. ಬೇವಿನಕಟ್ಟಿ ವಂದಿಸಿದರು.