ಮುಂಡಗೋಡ: ರಾಜ್ಯ ಮತ್ತು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಸರಿನಲ್ಲಿ ಬೇರೆ ಬೇರೆ ಜನಾಂಗದವರು ನಕಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡು ನಿಜವಾದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಂಚನೆ ಮಾಡುತ್ತಿದ್ದಾರೆ. ಸರಕಾರವು ಮಧ್ಯ ಪ್ರವೇಶಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ನಕಲಿ ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಕಲಿಸಬೇಕೆಂದು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಾಂದಪುರಿ ಸ್ವಾಮೀಜಿ ಒತ್ತಾಯಿಸಿದರು.
ಅವರು ದೈವಜ್ಞ ಕಲ್ಯಾಣ ಮಂಟಪದ ಸಭಾಭವನದಲ್ಲಿ ಸಂಜೆ ನಡೆದ, ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪರಿಶಿಷ್ಟ ಪಂಗಡಕ್ಕೆ ಕೇಂದ್ರ ಸರಕಾರ ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಶೇ 7.5 ಮಾದರಿಯಲ್ಲಿ ಮೀಸಲಾತಿ ನೀಡುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಸಮಾಜದ ಮಕ್ಕಳಿಗೆ ಈಗಿರುವ ಶೇ.3 ರಿಂದ ಶೇ 7.5ಕ್ಕೆ ಮಿಸಲಾತಿ ಹೆಚ್ಚಿಸಬೇಕೆಂಬುದು ಸಮುದಾಯದ ಒತ್ತಾಯವಾಗಿದೆ ಎಂದರು.
ಎರಡನೇ ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ವರದಿ ಬಂದ ನಂತರ ಈಗಿರುವ ಶೇ.3 ರಿಂದ 7.5ಕ್ಕೆ ಮೀಸಲಾತಿ ಹೆಚ್ಚಿಸಿ ನ್ಯಾಯ ಒದಗಿಸಿ ಕೊಡುತ್ತೇನೆ ಎಂದು ಹೇಳಿದ್ದರು. ಮತ್ತೇ, ಮೂರನೇ ಜಾತ್ರೆಗೆ ಬಂದು ನನ್ನ ಮೇಲೆ ವಿಶ್ವಾಸ, ನಂಬಿಕೆ ಇಡುವಂತೆ ಹೇಳಿ ಈ ದಿವಸ ಸಮುದಾಯದ ಮಕ್ಕಳ ಜೀವನದಲ್ಲಿ ಆಟವಾಡಿ ಹೋಗಿದ್ದಾರೆ. ಬರುವ ನಾಲ್ಕನೇ ಐತಿಹಾಸಿಕ ಜಾತ್ರಾಮಹೋತ್ಸದಲ್ಲಿ ಸಮಸ್ತ ಬೇಡರ ವಾಲ್ಮೀಕಿ ನಾಯಕ ಸಮುದಾಯ ಒಂದು ಐತಿಹಾಸಿಕ ತೀರ್ಮಾನಕ್ಕೆ ಸಾಕ್ಷಿ ತೋರಿಸಲಾಗುವುದು ಎಂದು ಶ್ರೀಗಳು ಹೇಳಿದರು.
ತಾಲೂಕು ಅಧ್ಯಕ್ಷ ರಾಘವೇಂದ್ರ ಮಳಗೀಕರ್, ಲಾವಪ್ಪ ಕುರುಬೆಟ್ಟ, ಬಾಲೇಶ ಸಿದ್ದಯ್ಯನವರ, ಬಾಲಪ್ಪ ತಳವಾರ, ಹನಮಂತ ಸಂಕ್ಲಿಪುರ, ನಿಂಗಪ್ಪ ತಳವಾರ, ಸಂತೋಷ ತಳವಾರ, ಹನಮಂತ ವಾಲ್ಮೀಕಿ, ರಮೇಶ ತಳವಾರ, ಯಲ್ಲಪ್ಪ ತಳವಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬಾಕ್ಸ್..
ಫೆ. 8, 9ರಂದು ಜಾತ್ರಾಮಹೋತ್ಸವ
ನಾಲ್ಕನೇ ವರ್ಷದ ವಾಲ್ಮೀಕಿ ಜಾತ್ರೆ ಫೆ. 8 ಮತ್ತು 9 ರಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುತ್ತದೆ. ಇದಕ್ಕಾಗಿ ರಾಜ್ಯದ ಎಲ್ಲ ತಾಲೂಕು ಭೇಟಿ ನೀಡಿ ಪೂರ್ವಭಾವಿ ಸಭೆ ನಡೆಸಿ, ಆಮಂತ್ರಣ ನೀಡಲಾಗುತ್ತಿದೆ ಎಂದು ಶ್ರೀಗಳು ಹೇಳಿದರು.
ಜಾತ್ರೆ, ಸಂಭ್ರಮ ಸಡಗರ ಜೊತೆಗೆ ನಮ್ಮ ಸಂಕಷ್ಟ, ಸಮಸ್ಯೆಗಳ ಪರಿಹಾರಕ್ಕೆ ಜಾತ್ರಾ ಮಹೋತ್ಸವದಲ್ಲಿ ಸರಕಾರಕ್ಕೆ ಒತ್ತಾಯ ಮಾಡುವ ಮೂಲಕ ಸಮುದಾಯದ ಸಂವಿಧಾನ ಹಕ್ಕನ್ನು ಪಡೆಯುತ್ತೇವೆ ಎಂದರು.