ಶಿರಸಿ: ಕಲಾ ಸಿಂಧು ಪ್ರಶಸ್ತಿಗೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಆಯ್ಕೆಯಾಗಿದ್ದಾರೆ ಎಂದು ಕಾನಸೂರಿನ ಸೇವಾ ರತ್ನ ಮಾಹಿತಿ ಕೇಂದ್ರದ ಸಂಚಾಲಕರು ತಿಳಿಸಿದ್ದಾರೆ.
ಸೇವಾರತ್ನ ಮಾಹಿತಿ ಕೇಂದ್ರ ಕಾನಸೂರ ಸಿದ್ದಾಪುರ ಇವರು ಪ್ರತಿ ವರ್ಷ ಕಲಾವಿದರಿಗೆ ಕಲಾಸಿಂಧು ಪ್ರಶಸ್ತಿ ನೀಡುತ್ತ ಬಂದಿದ್ದು ಅದರಂತೆ 2021-22ರ ಕಲಾಸಿಂಧು ಪ್ರಶಸ್ತಿಗೆ ಯಕ್ಷಗಾನ ಕಲಾವಿದೆ ನಿರ್ಮಲಾ ಮಂಜನಾಥ ಹೆಗಡೆ ಗೋಳಿಕೊಪ್ಪ ಇವರು ಭಾಜನರಾಗಿದ್ದಾರೆ.
ಗೃಹಿಣಿ ಯಾದ ನಿರ್ಮಲಾ ಹೆಗಡೆ ಯವರು ತಮ್ಮ2ನೆ ವಯಸ್ಸಿನಲ್ಲಿ ಯಕ್ಷಗಾನ ರಂಗವನ್ನು ಪ್ರವೇಶಿಸಿದರು. ನಂತರದಲ್ಲಿ ಯಕ್ಷಗೆಜ್ಜೆ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರವನ್ನು ಪ್ರಾರಂಭಿಸಿ ಯಕ್ಷಗಾನ ಗುರುವಾಗಿ ಯಕ್ಷಗಾನ ರಚನಾಕಾರರು ಆಗಿ ತಮ್ಮದೇ ಆದ ಮಹಿಳಾ ಯಕ್ಷಗಾನ ತಂಡದೊಂದಿಗೆ ರಾಜ್ಯ ಹೊರ ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ. 2019ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆಯಾಗಿ ಉತ್ತಮ ಕಾರ್ಯ ನಿರ್ವಹಿಸಿದರು. ಸಾಧನೆಗೆ ವಯಸ್ಸು ಅಡ್ಡಿಯಿಲ್ಲ ಸಾಧಿಸಬೇಕು ಎನ್ನುವ ಛಲವಂದಿದ್ದರೆ ಮಹಿಳೆಯರು ಏನನ್ನೂ ಸಾಧಿಸಬಹುದು ಎನ್ನುವದಕ್ಕೆ ಇವರು ಆದರ್ಶ.
ಇದೆಲ್ಲವನ್ನು ಮನಗಂಡು ಕಲಾಸಿಂಧು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಸಂಸ್ಥೆಯ 22ನೆ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜನೇವರಿ 15ರಂದು ನಡೆಯಲಿದ್ದು ಅಂದೇ ನೀಡಲಾಗುವುದು ಎಂದು ಸೇವಾ ರತ್ನ ಮಾಹಿತಿ ಕೇಂದ್ರದ ಸಂಚಾಲಕ ರತ್ನಾಕರ ಭಟ್ ಕಾನಸೂರು ತಿಳಿಸಿದ್ದಾರೆ.