ಶಿರಸಿ: ಭಗವದ್ಗೀತೆಯು ಎಲ್ಲರ ಜೀವನದಲ್ಲೂ ಸಹಕಾರಿಯಾಗುವಂಥ ಧರ್ಮ ಗ್ರಂಥವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಭಗವದ್ಗೀತೆಯು ಹೆಚ್ಚಿನ ಪಾತ್ರವನ್ನು ವಹಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ಅವರು ಬೆಂಗಳೂರಿನ ಚಿಕ್ಕಬೆಟ್ಟಹಳ್ಳಿಯಲ್ಲಿ ಅಭ್ಯುದಯ ಶ್ರೋಯೋಧಾಮ ಹಮ್ಮಿಕೊಂಡಿರುವ ರಾಜ್ಯ ಸ್ಥರದ ಭಗವದ್ಗೀತಾ ಸ್ಪರ್ಧೆಯಲ್ಲಿ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಆಶೀರ್ವಚ ನನುಡಿದರು. ಶ್ರದ್ಧಾವಾನ್ ಲಭತೆ ಜ್ಞಾನಂ ತತ್ಪರಃ ಸಂಯತೇಂದ್ರಿಯಃ. ಅಂದರೆ ಶ್ರದ್ಧಾವಂತನೂ ಸಾಧನ ತತ್ಪರನೂ ಹಾಗೂ ಜಿತೇಂದ್ರಿಯನು ಜ್ಞಾನವನ್ನು ಪಡೆಯುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಈ ಮೂರು ವಿಷಯವು ಕೂಡ ಅತ್ಯಂತ ಮಹತ್ವವಾದದ್ದು. ಏಕಲವ್ಯ ಹಾಗೂ ದ್ರೋಣಾಚಾರ್ಯ ಗುರು-ಶಿಷ್ಯರ ಕಥೆಯ ಮೂಲಕ ವಿದ್ಯಾರ್ಥಿಗಳಿಗೆ ಅತ್ಯಂತ ಸುಲಭವಾಗಿ ಈ ಶ್ಲೋಕದ ಅರ್ಥವನ್ನು ತಿಳಿಸಿ ಹೇಳಿದರು.
ಏಕಲವ್ಯನು ದ್ರೋಣಾಚಾರ್ಯರ ಕುರಿತು ಅತ್ಯಂತ ಶ್ರದ್ಧೆ ಉಳ್ಳವನಾಗಿದ್ದನು. ಅವನ ಸಾಧನ ತತ್ಪರತೆ, ಇಂದ್ರಿಯ ನಿಗ್ರಹ ಅವನನ್ನು ಗುರಿಯೆಡೆಗೆ ತಲುಪಿಸಲು ಸಹಾಯ ಮಾಡಿತು. ಹಾಗೆಯೇ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಈ ಎಲ್ಲಾ ಅಂಶಗಳನ್ನು ಅಳವಡಿಸಿಕೊಂಡಲ್ಲಿ ಗುರಿಯನ್ನು ತಲುಪುವುದು ನಿಶ್ಚಿತ ಎಂದರು. ಇದೇ ಸಂದರ್ಭದಲ್ಲಿ ಭಗವದ್ಗೀತೆಯನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶಂಸಿದ ಶ್ರೀಗಳು, ನಮ್ಮ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪಠ್ಯಕ್ರಮದಲ್ಲಿ ಸೇರಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಹೆಚ್ಚಿನ ಬುದ್ಧಿವಂತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ವಾಮಮಾರ್ಗದಲ್ಲಿ ನಡೆಯುತ್ತಿರುವುದು ಈ ದೇಶಕ್ಕೆ ದೊಡ್ಡ ರೋಗವಾಗಿ ಪಸರಿಸಿದೆ. ಆ ರೋಗದ ನಾಶಕ್ಕೆ ಭಗವಂತನ ವಾಣಿಯಾದ ಭಗವದ್ಗೀತೆಯು ಒಂದೊಳ್ಳೆ ಔಷಧವಾಗುತ್ತದೆ. ಈ ಕಾರಣದಿಂದಲೂ ಪಠ್ಯದಲ್ಲಿ ಸೇರ್ಪಡೆ ಆಗಬೇಕು ಎಂದರು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಅಶೋಕ ಹಾರ್ನಳ್ಳಿ ಇವರು ಭಗವದ್ಗೀತೆಯ ಕುರಿತು ಮಾತನಾಡುತ್ತಾ ನಮಗೆ ಜೀವನದಲ್ಲಿ ಕಷ್ಟಗಳು ಎದುರಾದಾಗ ಭಗವದ್ಗೀತೆಯು ಸಮಾಧಾನವನ್ನು ಉಂಟು ಮಾಡುತ್ತದೆ. ಆ ಸಂದರ್ಭದಲ್ಲಿ ನಮಗೆ ಗೀತೆಯ ಮಹತ್ವ ಅರಿವಿಗೆ ಬರುತ್ತದೆ. ವಿಶೇಷವಾಗಿ ಪಾಶ್ಚಾತ್ಯ ರೆಲ್ಲರೂ ನಮ್ಮ ಧರ್ಮಗ್ರಂಥವಾದ ಭಗವದ್ಗೀತೆಯ ಮೊರೆ ಹೋಗುತ್ತಿದ್ದರೆ ಭಾರತೀಯರಾದ ನಾವು ಈ ವಿಷಯದಲ್ಲಿ ಸ್ವಲ್ಪ ಹಿಂದೆಯೇ ಇದ್ದೇವೆ. ಆದರೆ ಶ್ರೀಗಳವರ ಭಗವದ್ಗೀತಾ ಅಭಿಯಾನ ಸಾಮಾಜಿಕದಲ್ಲಿ ಶಾಂತಿಯನ್ನು ಸೃಷ್ಟಿಸುತ್ತಿದೆ. ಸಾಕ್ಷಾತ್ ಭಗವಂತನೇ ಹೇಳಿರುವ ಭಗವದ್ಗೀತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪಠಣ ಮಾಡಿ ಜೀವನದ ಅರ್ಥವನ್ನು ಕಂಡುಕೊಳ್ಳೋಣ ಎಂದರು.
ಸಭೆಯಲ್ಲಿ ಜಿ.ವಿ ಹೆಗಡೆ ಹುಳಗೋಳ. ಗಂಗಾಧರ ಬೋಡೆ, ನಾರಾಯಣ ಭಟ್ ಸುಳಗಾರ್, ಗಣಪತಿ ಜೋಷಿ ಮೂಲೇಮನೆ, ಸ್ಪರ್ಧೆಯ ನಿರ್ಣಾಯಕರು ಕಾರ್ಯಕರ್ತರು ಇದ್ದರು