ಸಿದ್ದಾಪುರ: ಕ್ರೀಡೆಗಳು ಮನುಷ್ಯರಲ್ಲಿ ಸ್ಪರ್ಧಾಮನೋಭಾವ ಮೂಡಿಸುವುದರ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೂ ಹೆಚ್ಚು ಸಹಕಾರಿಯಾಗುತ್ತವೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಿನ ಹಸುವಂತೆ ಗ್ರಾಮದಲ್ಲಿ ಆಯೋಜಿಸಲಾದ ಹೊನಲು ಬೆಳಕಿನ ಶಾಟ್ ಗ್ರೌಂಡ್ ಟೆನಿಸ್ಬಾಲ್ ಕೌಂಟಿ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಂತರ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಮೋಜು, ಮಸ್ತಿಗೆ ಯುವ ಸಮೂಹ ಪ್ರಾಮುಖ್ಯತೆ ನೀಡುತ್ತಿರುವುದರಿಂದ ಸಣ್ಣ ವಯಸ್ಸಿನಲ್ಲಿಯೇ ರೋಗಗಳು ಕಾಣಿಸಿಕೊಳ್ಳುತ್ತಿವೆ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಹದಗೆಡುತ್ತಿದೆ. ಸಕಾಲಿಕ ಮಾರ್ಗದರ್ಶನದ ಕೊರತೆಯಿಂದಾಗಿ ಯುವ ಸಮೂಹ ದಾರಿ ತಪ್ಪಿ ಸಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಒಳ್ಳೆಯ ಮಾರ್ಗದರ್ಶನ ನೀಡುವ ಮೂಲಕ ಯುವಕರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಅವರು ಮಾತನಾಡಿ ಕ್ರೀಡೆಗಳನ್ನು ಆಯೋಜಿಸುವುದರಿಂದ ಯುವ ಕ್ರೀಡಾ ಪಟುಗಳಲ್ಲಿ ದೈಹಿಕ ಹಾಗು ಮಾನಸಿಕ ಆರೋಗ್ಯ ಅತ್ಯಂತ ಉತ್ಕೃಷ್ಟವಾಗಿರುತ್ತದೆ. ಯಾರು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿರುತ್ತಾರೋ ತಮ್ಮ ಜೀವನದ ಎಲ್ಲಾ ಕಾರ್ಯಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಾರೆ. ಹಾಗು ಕ್ರೀಡೆಗಳಿಂದ ಪರಸ್ಪರ ಪ್ರೀತಿ ಪ್ರೇಮ ಹಾಗೂ ಸೌಹಾರ್ದತೆಯಿಂದ ಬಾಳಲು ಸಹಕಾರಿಯಾಗುತ್ತದೆ. ಅಲ್ಲದೇ ಕ್ರಿಕೆಟ್ ಅಂತರ್ ರಾಷ್ಟ್ರೀಯ ಆಟವಾಗಿರುವುದರಿಂದ ಉತ್ತಮ ಪ್ರತಿಭೆ ಪ್ರದರ್ಶಿಸಿದೆ ಆದರೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ನಿಮ್ಮದಾಗಿರುತ್ತದೆ. ಕೊನೆಯಲ್ಲಿ ಕ್ರೀಡೆ ಎಂದ ಮೇಲೆ ಸೋಲು ಗೆಲುವು ನಿಶ್ಚಿತ, ಹಂಪೈರ್ಗಳ ತೀರ್ಮಾನಕ್ಕೆ ಗೌರವ ನೀಡಿ ಶಾಂತಿಯನ್ನು ಕಾಪಾಡಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕೆಂದರು ಹೇಳಿದರು.
ಈ ಸಂದರ್ಭದಲ್ಲಿ ಅಣ್ಣಪ್ಪ ನಾಯ್ಕ, ಈಶ್ವರ ನಾಯ್ಕ ಮನಮನೆ, ತಿಮ್ಮಪ್ಪ ಮಡಿವಾಳ, ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.