ಶಿರಸಿ: ಉತ್ತರ ಕರ್ನಾಟಕದ ಸಮಸ್ಯೆಗಳನ್ನ ಚರ್ಚೆ ಮತ್ತು ಸ್ಫಂದನೆ ಹಿನ್ನೆಲೆಯಲ್ಲಿ ಬೆಳಗಾಂವದಲ್ಲಿ ಜರುಗಿದ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಚರ್ಚೆಗೆ ಸರಕಾರ ಪ್ರಾಮುಖ್ಯತೆ ನೀಡದೆ ಇರುವುದು ವಿಷಾದಕರ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಫ್ರೀಂ ಕೋರ್ಟನ ಇತ್ತೀಚಿನ ದಿನಗಳಲ್ಲಿ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಅನಧೀಕೃತ ಅರಣ್ಯವಾಸಿಗಳಿಗೆ ತಕ್ಷಣ ಒಕ್ಕಲೆಬ್ಬಿಸಬೇಕು, ಸರಕಾರದ ಯಾವುದೇ ಸೌಲಭ್ಯ, ಸವಲತ್ತುಗಳನ್ನ ನಿರ್ಭಂದಿಸಬೇಕು, ಅರಣ್ಯಹಕ್ಕು ಕಾಯಿದೆ ಜಾರಿಗೆ ಬಂದು ಒಂದುವರೆ ದಶಕ ಕಳೆದರೂ ರಾಜ್ಯದಲ್ಲಿ ಅರ್ಜಿಗಳು ವಿಲೇವಾರಿ ಹಿನ್ನೆಡೆಯಾಗಿದ್ದು, ಮಂಜೂರಿಗೆ ಕಾನೂನಾತ್ಮಕ ತೊಡಕು, ಇಚ್ಛಾಶಕ್ತಿಯ ಕೊರತೆ ಮತ್ತು ಅರಣ್ಯ ಅಧಿಕಾರಿಗಳಿಂದ ನಿರಂತರ ಅರಣ್ಯವಾಸಿಗಳ ಮೇಲೆ ದೌರ್ಜನ್ಯ ನಿಯಂತ್ರಿಸುವ ದಿಶೆಯಲ್ಲಿ ಪ್ರಾಮುಖ್ಯತೆಯ ಆಧಾರದ ಮೇಲೆ ಸದ್ರಿ ಅಧಿವೇಶನದಲ್ಲಿ ಚರ್ಚಿಸುವ ಅವಶ್ಯವಿದ್ದಾಗಲೂ ಸಹಿತ ಚರ್ಚಿಸದೇ ಇರುವುದು ಖೇದಕರ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಸರಕಾರವು ಗಂಭೀರವಾಗಿ ಚರ್ಚಿಸಿ, ಮುಂದಿನ ದಿನಗಳಲ್ಲಿ ಅನಧೀಕೃತ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ದಿಶೆಯಲ್ಲಿ ಪರಿಸರವಾದಿಗಳು ಸುಫ್ರೀಂ ಕೋರ್ಟನಲ್ಲಿ ದಾಖಲಿಸಿದ ರಿಟ್ಪಿಟಿಷನ್ ಅಂತಿಮ ವಿಚಾರಣೆ ಇರುವಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಅರಣ್ಯವಾಸಿಗಳ ಪರವಾಗಿ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಶೇ.5.4 ಮಾನ್ಯತೆ ಹಕ್ಕು ಪತ್ರ:
ಕರ್ನಾಟಕದಲ್ಲಿ ಹತ್ತು ಲಕ್ಷಕ್ಕೂ ಮಿಕ್ಕಿ ಅರಣ್ಯ ಕುಟುಂಬಗಳಿದ್ದಾಗಲೂ ಪ್ರಚಾರದ ಕೊರತೆಯಿಂದ ಕೇವಲ 2,92,537 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 1,84,358 ಅರ್ಜಿಗಳು ತೀರಸ್ಕಾರವಾಗಿ ಬಂದಿರುವಂತಹ ಅರ್ಜಿಗಳಲ್ಲಿ ಶೇ.63.02 ಅರ್ಜಿಗಳು ತೀರಸ್ಕಾರವಾದರೇ, ರಾಜ್ಯದಲ್ಲಿ ಇಂದಿನವರೆಗೆ ಕೇವಲ 15,798 ಅರ್ಜಿಗಳಿಗೆ ಮಾತ್ರ ಹಕ್ಕು ಮಾನ್ಯತೆ ದೊರಕಿದ್ದು, ಕೇವಲ ಶೇ. 5.40 ರಷ್ಟು ಅರ್ಜಿಗಳಿಗೆ ಮಾನ್ಯತೆ ದೊರಕಿದ್ದು ಇರುತ್ತದೆ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.