ಶಿರಸಿ: ಸಮಗ್ರ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಂದಿನ ಒಂದು ತಿಂಗಳದ ಒಳಗಾಗಿ ರಾಜ್ಯ ಮಟ್ಟದ ವಿವಿಧ ಸಚಿವರ ಮತ್ತು ಹೋರಾಟಗಾರರ ಉಪಸ್ಥಿಯಲ್ಲಿ ಉನ್ನತ ಮಟ್ಟದ ಸಭೆ ಬೆಂಗಳೂರಿನಲ್ಲಿ ಜರುಗಿಸಲು ಸರಕಾರ ಬದ್ಧವಾಗಿದೆ. ಸರಕಾರವು ಅರಣ್ಯವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವ ದಿಶೆಯಲ್ಲಿ ಎಲ್ಲರ ಸಹಕಾರವನ್ನು ಬಯಸುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಬೆಳಗಾವಿ ತಾಲೂಕಿನ ಕೊಂಡಸ್ಕೊಪ್ಪ ಪ್ರತಿಭಟನಾ ಸ್ಥಳದಲ್ಲಿ ಉತ್ತರ ಕ್ನನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಇಂದು ಜರುಗಿದ ಬೃಹತ್ `ಬೆಳಗಾವಿ ಚಲೋ’ ಕಾರ್ಯಕ್ರಮದಲ್ಲಿ ಸರಕಾರದ ಪರವಾಗಿ ಮನವಿ ಸ್ವೀಕರಿಸಿ ಮೇಲಿನಂತೆ ಸರಕಾರದ ನಿರ್ದೇಶನ ಪ್ರಕಟಿಸಿದರು.
ನಿರಂತರ ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸುವಲ್ಲಿ ಸರಕಾರ ಪ್ರಯತ್ನಿಸಿದಾಗಲೂ ಯಶಸ್ವಿ ಸಿಗದೇ ಇರುವುದು ವಿಷಾದಕರ. ಈ ದಿಶೆಯಲ್ಲಿ ಕೇಂದ್ರ ಸರಕಾರದ ಮೇಲೂ ಒತ್ತಡ ತರಲಾಗುವುದು ಎಂದು ಹೇಳಿದರು.
ಮೆರವಣಿಗೆ: ಬೆಳಗಾವಿ ತಾಲೂಕಿನ, ಕೆಕೆ ಕೊಪ್ಪ ಕ್ರಾಸ್ನಿಂದ ಕೊಂಡಸ್ಕೊಪ್ಪ ಪ್ರತಿಭಟನಾ ಸ್ಥಳದವರೆಗೂ ಜಿಲ್ಲಾದ್ಯಂತ ಆಗಮಿಸಿದ ಪ್ರತಿಭಟನಾಕಾರರು ಬೃಹತ್ ಪ್ರತಿಭಟನೆ, ಮೆರವಣಿಗೆ, ರ್ಯಾಲಿ ಜರುಗಿಸಿದರು.
ಹತ್ತು ಹಕ್ಕೋತ್ತಾಯ: ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿನ ವೈಫಲ್ಯ ಸರಿಪಡಿಸುವುದು, ಅರಣ್ಯ ಅಧಿಕಾರಿಗಳ ದೌರ್ಜನ್ಯ ನಿಯಂತ್ರಿಸುವುದು, ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲಾ ಅರಣ್ಯ ಪ್ರದೇಶ ಸೇರ್ಪಡೆಗೆ ವಿರೋಧ, ಅರಣ್ಯವಾಸಿಗಳ ಸೌಲಭ್ಯದಿಂದ ವಂಚಿತರಾಗದ ರೀತಿ ಕಾರ್ಯನಿರ್ವಹಿಸುವುದು, 1978 ರ ಪೂರ್ವ ಅತಿಕ್ರಮಣದಾರರ ಹಕ್ಕು ಪತ್ರ ಶೀಘ್ರ ವಿಲೇವಾರಿ ಮಾಡುವುದು, ಅರಣ್ಯ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಇತ್ತೀಚಿನ 5 ವರ್ಷದಲ್ಲಿ 1 ಲಕ್ಷ ಮರ ಕಡಿತ ಅವೈಜ್ಞಾನಿಕ ನೀತಿ ಮತ್ತು ಅರಣ್ಯ ಕ್ಷೇತ್ರದಲ್ಲಿ ಕಾಮಗಾರಿ ತನಿಖೆಗೆ ಅಗ್ರಹ, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದವರನ್ನು ಮಂಜೂರಾತಿ ಪ್ರಕ್ರೀಯೆ ಮುಗಿಯುವರೆಗೂ ಒಕ್ಕಲೆಬ್ಬಿಸಿರುವ ಪ್ರಕ್ರೀಯೆ ಸ್ಥಗಿತಗೊಳಿಸುವುದು, ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಅರಣ್ಯವಾಸಿ ಹೋರಾಟಗಾರರೊಂದಿಗೆ ಉನ್ನತ ಮಟ್ಟದ ಸಭೆ ಜರುಗಿಸುವುದು, ಸುಫ್ರೀಂ ಕೋರ್ಟನಲ್ಲಿ ರಾಜ್ಯ ಸರಕಾರ ಅರಣ್ಯವಾಸಿಗಳ ಪರ ಪ್ರಮಾಣ ಪತ್ರ ಸಲ್ಲಿಸುವುದು, ಅರಣ್ಯವಾಸಿಗಳ ಮೇಲೆ ದಾಖಲಿಸಿದ ಕ್ರೀಮಿನಲ್ ಪ್ರಕರಣ ಹಿಂದಕ್ಕೆ ಪಡೆಯುವುದು.
ಆರ್ ವಿ ದೇಶಪಾಂಡೆ ಭೇಟಿ: ಮಾಜಿ ಸಚಿವರು ಆರ್ ವಿ ದೇಶಪಾಂಡೆ ಪ್ರತಿಭಟನಾ ಸ್ಥಳಕ್ಕೆ ಭೇಟ್ಟಿ ನೀಡಿ ಅರಣ್ಯವಾಸಿಗಳ ಸಮಸ್ಯೆಗೆ ಸ್ಫಂದನೆಗೆ ಅರಣ್ಯ ಸಚಿವರೊಂದಿಗೆ ಮಾತನಾಡಿ, ಸಮಸ್ಯೆಗಳಿಗೆ ಪೂರಕವಾಗಿ ಸ್ಫಂದಿಸಲು ಸಹಕರಿಸುತ್ತೇನೆ ಎಂದು ಹೇಳಿದರು.
ಪ್ರತಿಭಟನೆಯ ನೇತ್ರತ್ವವನ್ನು ಅಂಕೋಲಾ ತಾಲೂಕ ಅಧ್ಯಕ್ಷರು ಜಿ.ಎಮ್ ಶೆಟ್ಟಿ, ಕುಮಟ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ, ಯಲ್ಲಾಪುರ ತಾಲೂಕ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ, ಮುಂಡಗೋಡ ತಾಲೂಕ ಅಧ್ಯಕ್ಷ ಶಿವಾನಂದ ಜೋಗಿ, ಜೋಯಿಡಾ ತಾಲೂಕ ಅಧ್ಯಕ್ಷ ಸುಭಾಸ್ ಗಾವಡಾ, ರಾಜೇಶ ನೇತ್ರೆಕರ್, ರಾಜು ನರೇಬೈಲ್, ರಿಜವಾನ್, ಅಲಿಸಾಬ ಭಟ್ಕಳ, ಸಂತೋಷ ಗಾವಡಾ, ರಾಘವೇಂದ್ರ ನಾಯ್ಕ ಗುಳ್ಳಾಪುರ, ವಿಜಯ ಸಿದ್ಧಿ ಮುಂತಾದವರು ವಹಿಸಿದ್ದರು.