ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಶಾಲ್ಮಲಾ ನದೀ ತಟದಲ್ಲಿರುವ ಐತಿಹಾಸಿಕ ಸೋಂದಾ ಕೋಟೆಯಲ್ಲಿ ಪೂರ್ವಾಭಿಮುಖಿ ಮಾರುತಿಗೆ ವಿಜೃಂಭಣೆಯಿಂದ ದೀಪೋತ್ಸವವನ್ನು ನೆರವೇರಿಸಲಾಯಿತು.
ಸೋದೆ ಅರಸರ ಕಾಲದಲ್ಲಿ ರಾಜಧಾನಿ ಸ್ಥಳವಾಗಿ ಅತ್ಯಂತ ವೈಭವದಿಂದಾ ಮೆರೆದ ಸ್ಥಳದಲ್ಲಿ ರಾಜರು ರಾಜ್ಯದ ರಕ್ಷಣೆಗಾಗಿ ಕೋಟೆಯ ಹೆಬ್ಬಾಗಿಲಿನಲ್ಲಿ ಬೃಹತ್ ವೀರಾಂಜನೆಯ ಮೂರ್ತಿ ಪ್ರತಿಷ್ಠಾಪಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದು, ಸಂಸ್ಥಾನದಿಂದಾ ಪ್ರವಾಸ ಹೋಗುವಾಗ ವಿಶೇಷ ಪೂಜೆಯನ್ನು ಆಸ್ಥಾನಿಕರೊಡಗೂಡಿ ಸಲ್ಲಿಸಿಯೇ ಹೊರಹೋಗುವ ಪರಿಪಾಠ ಇತ್ತು.
ರಾಜ ಆಡಳಿತ ಕೊನೆಗೊಂಡ ನಂತರ ಪೂಜೆ ಪುನಸ್ಕಾರಗಳಿಲ್ಲದೇ ಪಾಳು ಬಿದ್ದ ಈ ವಿರಾಂಜನೇಯ ಗುಡಿಯನ್ನು 1987 ರಲ್ಲಿ (ಬ್ರಹ್ಮಕ್ಯ) ಶ್ರೀ ಶ್ರೀಮದ್ ಸರ್ವಜ್ಞೇಂದ್ರ ಸರಸ್ವತಿ ಮಹಾ ಸ್ವಾಮಿಗಳ ಆದೇಶದಂತೆ ನಾರಾಯಣ ಹೆಗಡೆ ಉಳ್ಳೀಕೊಪ್ಪ, ಇವರು ಆಗಿನ ಕಾಲದಲ್ಲಿ ಊರವರ ಸಂಘಟನೆ ಮಾಡಿ, ಗುಡಿಯನ್ನು ಪುನರ್ ನಿರ್ಮಾಣದೊಂದಿಗೆ ವೇ ಮೂ ಬಾಲಚಂದ್ರ ಶಾಸ್ತ್ರಿಗಳು ಸ್ವರ್ಣವಲ್ಲಿ ಇವರ ಆಚಾರ್ಯತ್ವದಲ್ಲಿ ಶ್ರೀ ಮಾರುತಿ ದೇವರ ಪುನರ ಪ್ರತಿಷ್ಠೆ ಮಾಡಿಸಿದರು.
ಅಂದಿನಿಂದ ಶ್ರೀ ದೇವರಿಗೆ ಪೂಜೆ ಹಾಗೂ ವಾರ್ಷಿಕ ದೀಪೋತ್ಸವವನ್ನು ನಿಯಮಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇತ್ತೀಚಿಗೆ ನಡೆಸಲಾದ ದೀಪೋತ್ಸವ ಕಾರ್ಯಕ್ರಮದಲ್ಲಿ ಶ್ರೀಪಾದ ಭಟ್ಟ ಕೋಟೆ ಸರ್ಕಲ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು. ಧಾರ್ಮಿಕ ಕಾರ್ಯಕ್ರಮದ ಯಜಮಾನತ್ವವನ್ನು ಸೋಂದಾ ಕೋಟೆ ರಕ್ಷಣೆ ಮತ್ತು ಅಭಿವೃದ್ಧಿ ಉಪಸಮಿತಿ ಮುಖ್ಯಸ್ಥ ರಾಮಚಂದ್ರ ಹೆಗಡೆ ಉಳ್ಳೀಕೊಪ್ಪ ವಹಿಸಿದ್ದು, ಭಾಸ್ಕರ ಹೆಗಡೆ ಉಳ್ಳೀಕೊಪ್ಪ ಸಹಕರಿಸಿದರು.
ಸೋಂದಾ ಜಾಗೃತ ವೇದಿಕೆಯ ಎಲ್ಲ ಸದಸ್ಯರು, ಗಣಪತಿ ಉಳ್ಳೀಕೊಪ್ಪ ಸ್ಥಳೀಯ ಗಣಪತಿ ಪಟಗಾರ ಮತ್ತು ಸಂಗಡಿಗರು ಕೇಶವ ನಾಯ್ಕ ಹಾಗೂ ಹುಳಗೋಳ ಮತ್ತು ಸೋಂದಾ ಗ್ರಾಮಗಳ ಬಂಧು-ಭಗಿನೀಯರು ದೀಪೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.