ಶಿರಸಿ: ನಗರದ ಪ್ರಗತಿ ನಗರದಲ್ಲಿ ಎತ್ತರದ ಪ್ರದೇಶದ ಬರುವ ಕೊಳಚೆ ನೀರು ಸಾಗಲು ಆಳ ಹಾಗು ಅಗಲವಾದ ಗಟಾರವಿಲ್ಲದೇ ತೊಂದರೆಯಾಗಿದ್ದು ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳ ಬಳಿ ಸ್ಥಳೀಯ ನಿವಾಸಿಗಳು ಅಲವತ್ತುಕೊಂಡರು.
ತಹಸೀಲ್ದಾರ ಎಂ.ಆರ್.ಕುಲಕರ್ಣಿ ಹಾಗೂ ನಗರಸಭೆ ಪೌರಾಯುಕ್ತ ಕೇಶವ ಚೌಗಲೆ ಪ್ರಗತಿ ನಗರದ 11ನೇ ಕ್ರಾಸ್ ಬಳಿ ತೆರಳಿ ಗಟಾರ ಸ್ಥಿತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಮನವಿ ನೀಡಿದರು. ನಗರದ ಎತ್ತರದ ಪ್ರದೇಶಗಳಿಂದ ಕೊಳಚೆ ನೀರು ಹರಿದು ಬಂದು ನೂರಾರು ಮನೆಗಳಿರುವ ಪ್ರಗತಿನಗರ ತಗ್ಗು ಪ್ರದೇಶದಿಂದ ಸಾಗುತ್ತದೆ. ಆದರೆ ನೀರು ಸರಾಗವಾಗಿ ಹೋಗಲು ಸರಿಯಾದ ದಾರಿಯಿಲ್ಲ. ಎರಡು ಮುಖ್ಯ ಗಟಾರಗಳ ನೀರು ಕೊನೆಯಲ್ಲಿ ಒಂದೇ ಗಟಾರದಲ್ಲಿ ಸಾಗಬೇಕಾಗಿದೆ. ಇದು ಒತ್ತಡವಾಗಿ ನೀರು ನಿಲ್ಲುತ್ತದೆ. ಕಸತ್ಯಾಜ್ಯ ತುಂಬುತ್ತದೆ. ಮಳೆಗಾಲದಲ್ಲಂತೂ 10-12ತಾಸು ನೀರು ನಿಂತು ರಸ್ತೆ ಸಂಚಾರಕ್ಕೆ, ಮನೆಗಳಿಗೆ ಸಮಸ್ಯೆಯಾಗುತ್ತದೆ. ಇದು ಮನೆಗಳ ಅಡಿಪಾಯಕ್ಕೂ ತೊಂದರೆಯಾಗುವ ಆತಂಕವಿದೆ. ಜತೆಯಲ್ಲಿ ಹಲವು ಮನೆಗಳ ಬಾವಿ ನೀರು ಕಲುಷಿತವಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ನಿವಾಸಿಗಳು ಅನುಭವಿಸುವ ಸಂಕಟವನ್ನು ಇನ್ನಾದರೂ ಪರಿಹರಿಸಿ ಎಂದು ನಿವಾಸಿಗಳು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಗಟಾರವನ್ನು ಅಗಲ, ಆಳ ಮಾಡಿ ನೀರು ಇಳಿದು ಹೋಗುವಂತೆ ಮಾಡುವುದಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆಯಿತ್ತರು.
ಸ್ಥಳೀಯ ಪ್ರಮುಖರಾದ ಎಸ್.ಜಿ.ಭಟ್ಟ, ನಾಗರಾಜ ಹೆಗಡೆ, ಎಲ್.ಎಸ್.ಹೆಗಡೆ, ಎಂ.ಎಂ.ಭಟ್ಟ, ಗಣೇಶ ಹೆಗಡೆ, ಡಾ.ಗೋವಿಂದ ಭಟ್ಟ, ಆರ್.ಜಿ.ಹೆಗಡೆ, ರಾಘವ ಜಿ.ಹೆಗಡೆ, ಮುಕ್ತಾ ಹೆಗಡೆ ಮುಂತಾದವರು ಹಾಜರಿದ್ದರು.