ಶಿರಸಿ: ರಾಜಕಾರಣ, ರಾಜಕಾರಿಣಿಗಳಲ್ಲಿ ಸೇವಾ ಮನೋಭಾವ ಹುಟ್ಟಿಕೊಳ್ಳಬೇಕು. ಅಂದಾಗ ಮಾತ್ರ ಜನತೆಗೆ ಹೆಮ್ಮೆಯ ವಿಷಯ. ದೊಡ್ಡ ಸಂಸ್ಥೆಗಳು ಮತ್ತು ದೊಡ್ಡ ಪಕ್ಷಗಳಿಂದ ಸಣ್ಣ ಕುಟುಂಬದ ಬೇಡಿಕೆಯನ್ನ ಇಡೇರಿಸಲು ಸಾಧ್ಯವಿಲ್ಲ, ಅದಕ್ಕೆ ಸಣ್ಣ ಸಣ್ಣ ಟ್ರಸ್ಟ್’ಗಳ ಅವಶ್ಯಕತೆ ಇದೆ ಎಂದು ನಿವೃತ್ತ ಪ್ರಾಚಾರ್ಯ ವಿ. ಉಮಾಕಾಂತ ಭಟ್ ಕೆರೆಕೈ ಹೇಳಿದರು..
ನಗರದ ಟಿ ಆರ್ ಸಿ ಸಭಾಭವನದಲ್ಲಿ ಭಾನುವಾರ ಸಮಾಜ ಸೇವೆ ಉದ್ದೇಶದಿಂದ ಆರಂಭಿಸಲಾಗುತ್ತಿರುವ ರಾಜದೀಪ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ದಿನದಲ್ಲಿ ಎಲ್ಲ ಕ್ಷೇತ್ರದಲ್ಲಿ ರಾಜಕಾರಣ ಹೆಚ್ಚುತ್ತಿದೆ. ಹಾಗಂತ ಮುಂದೆ ಹತ್ತು ವರ್ಷದಲ್ಲಿ ಏನಾಗುತ್ತದೆ ಎಂಬುದು ನಾವು ತಿಳಿದಿಲ್ಲ. ಅದರೆ, ಮುಂದೆ ಹತ್ತು ವರ್ಷ ಇದೆ ಎನ್ನುವುದನ್ನ ಮರೆಯಬಾರದು. ಸಣ್ಣ-ಸಣ್ಣ ಟ್ರಸ್ಟ್ ಗಳೇ ಮುಂದೆ ನಿಂತು ಪುಟ್ಟ ಕುಟುಂಬಗಳ ರಕ್ಷಣೆ ಮಾಡುತ್ತಿದೆ ಎಂದರು.
ಪತ್ರಕರ್ತ ರವೀಂದ್ರ ಭಟ್ ಮಾತನಾಡಿ, ವಿಧಾನಸಭೆಯ ಎಲ್ಲ ಶಾಸಕರೂ ಸಮಾಜ ಸೇವಕರಾಗಿಯೇ ಬರುತ್ತಾರೆ. ಆದರೆ, ರಾಜಕೀಯಕ್ಕೆ ಬರುವ ಉದ್ದೇಶದಿಂದಲೇ ಸಾಮಾಜಿಕ ಕಾರ್ಯಕ್ಕೆ ಇಳಿಯುತ್ತಾರೆ. ಅದು ತಪ್ಪು ಅಂತಲ್ಲ, ಆದರೆ, ಒಳ್ಳೆ ಕಾರ್ಯ ಆದರೆ ಒಳ್ಳೆಯದು. ಸಮಾಜದ ನಿರೀಕ್ಷೆ, ಅಗತ್ಯತೆ ಚಿಕ್ಕದಿದೆ. ಆದರೆ, ನಾಯಕರು ದೊಡ್ಡ ದೊಡ್ಡ ಕಲ್ಪನೆಗಳನ್ನು ತುಂಬುತ್ತಿದ್ದಾರೆ. ಸಣ್ಣ ಸಣ್ಣ ಬೇಡಿಕೆ ಈಡೇರಿಸಿದರೆ ಸಮಾಜ ನೆಮ್ಮದಿಯಿಂದ ಇರುತ್ತದೆ. ಸಣ್ಣ ಸಣ್ಣ ಹೆಜ್ಜೆಗಳನ್ನು ಮತ್ತು ಧೃಢ ಹೆಜ್ಜೆ ಇಟ್ಟರೆ ಯಶಸ್ಸು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಟಿಆರ್ ಸಿ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಟಿಎಸ್ ಎಸ್ ವ್ಯವಸ್ಥಾಪಕ ನಿರ್ದಶಕ ರವೀಶ ಹೆಗಡೆ, ರಾಜದೀಪ ಟ್ರಸ್ಟ್ ಪ್ರಮುಖರಾದ ಡಾ. ರಾಜಾರಾಮ ಹೆಗಡೆ, ದೀಪಕ ದೊಡ್ಡೂರು, ಕಲಾವಿದ ಫಯಾಜ್ ಖಾನ್ ಇತರರಿದ್ದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿದರು.