ಶಿರಸಿ: ಸರ್ಕಾರವು ಸಹಕಾರ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸುತ್ತಿದ್ದು, ಇದರಿಂದ ಸಹಕಾರ ವ್ಯವಸ್ಥೆಯ ಸ್ವಾಯತ್ತತೆಗೆ ಧಕ್ಕೆ ಬರುತ್ತಿದೆ ಎಂದು ಟಿಆರ್ಸಿ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.
ಟಿಆರ್ಸಿ ಸಭಾಭವನದಲ್ಲಿ ನಡೆದ ಜಿಲ್ಲಾ ಕೃಷಿ, ಕೃಷಿಕ, ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್’ನ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ದೇಶಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಸಹಕಾರ ಕ್ಷೇತ್ರ ವಿಸ್ತಾರಗೊಳ್ಳುತ್ತಿದೆ. ಸಾಕಷ್ಟು ಸಮಸ್ಯೆಗಳನ್ನೂ ಕೂಡಾ ಎದುರಿಸುತ್ತಿವೆ. ಆದರೆ ಕ್ಷೇತ್ರದ ಸ್ವಯತ್ತದೆ ಕಾಪಾಡಿಕೊಂಡು ಹೋಗುವುದು ಸವಾಲಾಗಿ ಪರಿಣಮಿಸಿದೆ ಎಂದರು.
ಒಕ್ಕೂಟವು ನಮ್ಮ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ ಹಾಗೂ ಅದರ ಸದಸ್ಯರ ಅನುಕೂಲಕ್ಕಾಗಿ ರಚಿತವಾಗಿದೆ. ಸಂಘಟನಾತ್ಮಕ ಬೇಡಿಕೆ ಹಾಗೂ ಹೋರಾಟಕ್ಕೆ ಹೆಚ್ಚು ಮಹತ್ವ ಇರುವುದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಇಂತಹ ಒಕ್ಕೂಟಗಳ ರಚನೆಯಿಂದ ಸುಲಭ ಸಾಧ್ಯವಾಗಲಿದೆ ಎಂದರು.
ಟ್ರಸ್ಟ್’ನ ಕಾರ್ಯದರ್ಶಿ ಎನ್.ಬಿ. ಹೆಗಡೆ ಮತ್ತೀಹಳ್ಳಿ ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕರಾದ ಡಿ.ಆರ್.ಭಟ್, ಕರಸುಳ್ಳಿ, ಎಸ್.ಎನ್. ಭಟ್, ಬಿಸಲಕೊಪ್ಪ, ಎನ್.ಎಸ್. ಹೆಗಡೆ, ಕೋಟಿಕೊಪ್ಪ, ಜಿ.ವಿ. ಜೋಶಿ, ಕಾಗೇರಿ, ಎಮ್.ಎಲ್. ಭಟ್, ಉಂಚಳ್ಳಿ, ಪಿ.ಕೆ. ಹೆಗಡೆ, ಕಾನಗೋಡ ಹಾಗೂ ವಿ.ಪಿ. ಹೆಗಡೆ, ಕತಗಾಲ ಉಪಸ್ಥಿತರಿದ್ದರು.
ಸಭೆಯ ನಿರ್ಣಯ: 10-07-2018ಕ್ಕೆ ಬಾಕಿ ಇರುವ ಕೃಷಿ ಪತ್ತಿನ ಸಹಕಾರ ಸಂಘಗಳ ಬೆಳೆಸಾಲದ ಪೈಕಿ ರೂ 1 ಲಕ್ಷದ ವರೆಗೆ ರಾಜ್ಯ ಸರ್ಕಾರವು ಮನ್ನಾ ಮಾಡಿ, ಸರಿಸುಮಾರು ಮೂರೂವರೆ ವರ್ಷಗಳೇ ಕಳೆದಿದೆ. ಆದರೆ ಇದುವರೆಗೆ ಕೆಲವು ಅರ್ಹ ಫಲಾನುಭವಿಗಳಿಗೆ ಮನ್ನಾ ಹಣ ದೊರಕಿರುವುದಿಲ್ಲ. ಈ ವರೆಗೆ ಜಿಲ್ಲೆಯಿಂದ 1180 ಕೃಷಿಕರ ಹೆಸರು ಗ್ರೀನ್ ಲೀಸ್ಟ್ ಗೆ ಬಂದಿದ್ದು ಈ ಪೈಕಿ ಅಜಮಾಸು ರೂ.7 ಕೋಟಿ 47 ಲಕ್ಷ ಹಣ ಬಿಡುಗಡೆಗೊಂಡಿಲ್ಲ. ಸುಮಾರು 760 ಅರ್ಹ ಫಲಾನುಭವಿಗಳಿಗೆ ಬಿಡುಗಡೆಗೆ ಬಾಕಿ ಇರುವ ಅಜಮಾಸು 5 ಕೋಟಿ ರೂ. ಬಿಡುಗಡೆಗೊಳಿಸಲು ಸರಕಾರವನ್ನು ಆಗ್ರಹಿಸಲಾಯಿತು.
ಅಲ್ಲದೇ ರಾಜ್ಯದಾದ್ಯಂತ ಸಹಕಾರಿ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಬಗೆಯ ಸಹಕಾರ ಸಂಘಗಳು ನಗರ ಮತ್ತು ಗ್ರಾಮೀಣ ಪ್ರದೇಶದಾದ್ಯಂತ ಆರ್ಥಿಕ ನೆರವು ಹಾಗೂ ವಿವಿಧ ಸೇವೆಗಳನ್ನು ತನ್ನ ಸದಸ್ಯರುಗಳಿಗೆ ನೀಡುತ್ತಾ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಸಹಕಾರ ಸಂಘಗಳಿಗೆ ಆದಾಯ ತೆರಿಗೆಯನ್ನು ವಿಧಿಸುತ್ತಿರುವುದರಿಂದ ಸಹಕಾರ ಸಂಘಗಳ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಕಾರಣ ಈ ತೆರಿಗೆಯಿಂದ ವಿನಾಯಿತಿ ನೀಡಲು ಸರ್ಕಾರವನ್ನು ಆಗ್ರಹಿಸಲಾಯಿತು.