ಶಿರಸಿ: ಯಾವುದನ್ನೇ ಆದರೂ ಬೆಳೆಸುವ, ಉಳಿಸುವ, ಇದ್ದಿದ್ದನ್ನು ಹಂಚುವ ಗುಣ ಬೆಳಸಿಕೊಳ್ಳಬೇಕು. ಇದನ್ನು ಮಾಡಿದವನು ರಾಜನಾಗುತ್ತಾನೆ ಎಂದು ಹುಕ್ಕೇರಿ ಮಠದ ಮಠಾಧೀಶ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಅವರು ನಗರದ ಹೊರ ವಲಯದ ನಿಸರ್ಗ ಮನೆಯಲ್ಲಿ ನಿಸರ್ಗ ವೈದ್ಯ ಡಾ. ವೆಂಕಟ್ರಮಣ ಹೆಗಡೆ ಅವರನ್ನು ಸಮ್ಮಾನಿಸಿ ಅಭಿನಂದಿಸಿ ಆಶೀರ್ವಚನ ನೀಡಿದರು. ಅಹಂಕಾರಕ್ಕೆ ವಿರಾಮ ಕೊಟ್ಟರೆ ಆರಾಮ ಇರಲು ಸಾಧ್ಯ. ಆರಾಮ ಬದುಕು ಎಲ್ಲರದ್ದೂ ಪ್ರಾಪ್ತವಾಗಲು ಅಹಂಕಾರ ಬಿಡಬೇಕು. ಮನಸ್ಸಿನಲ್ಲಿ ಯಾವುದೇ ಪೂರ್ವಾಗ್ರಹ ಇಟ್ಟುಕೊಳ್ಳದೇ ಬದುಕು ನಡೆಸಬೇಕು. ಹೊಸತು ಬಂದಾಗ ಹಳತು ಬಿಡಬಾರದು ಎಂದರು.
ಪ್ರತಿಯೊಬ್ಬರೂ ಮನೆಯ ದೇವರನ್ನು, ಕುಲ ಗುರುವನ್ನು ನಮಸ್ಕರಿಸಿ ಕೆಲಸ ಆರಂಭಿಸಿದರೆ ಯಶಸ್ಸು ಸಾಧ್ಯ. ಸಾಧ್ಯ ಇದ್ದಷ್ಟು ನಮ್ಮ ಕಲೆಯನ್ನು ಪ್ರೀತಿಸಿ ಬೆಳೆಸಬೇಕು. ಯಂತ್ರಮಾನವ ಬಂದುಕಲೆ ಸಾಹಿತ್ಯಕ್ಕೆ ತೊಡಕಾಗಿದ್ದು, ಅದನ್ನು ಉಳಿಸಬೇಕು ಎಂದರು.
ಎಲ್ಲರೂ ಹೊಸತು ಬಂದಾಗ ಹಳೆಯದನ್ನು ಮರೆಯಬಾರದು. ಏನೇನೋ ನೋಡಿ ನಮ್ಮನ್ನು ಬಿಟ್ಟು ಹೊರಗೆ ಹೋಗಬಾರದು. ಹೊರಗೆ ಹೋದರೆ ಸಮಸ್ಯೆ ಎದುರಾಗುತ್ತವೆ ಎಂದೂ ಹೇಳಿದರು.
ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನುಡಿದು, ನಮ್ಮನ್ನು ನಾಶ ಮಾಡಲು ಹೊರಗಿನವರು ಬೇಕಿಲ್ಲ. ಕಾಮ ಕ್ರೋದಾರು ಜನ ವೈರಿಗಳೇ ನಮ್ಮೊಳಗಿನ ಜ್ಞಾನ ರತ್ನ ಅಪಹರಣ ಮಾಡಲು ಯತ್ನ ಮಾಡುತ್ತವೆ ಎಂದರು.
ವೇದಿಕೆಯಲ್ಲಿ ಗುಳೇದಗುಡ್ಡದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರಿನ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಸಾನ್ನಿಧ್ಯ ನೀಡಿದ್ದರು. ನಿಸರ್ಗ ಟ್ರಸ್ಟನ ಅಧ್ಯಕ್ಷ ನಾರಾಯಣ ಹೆಗಡೆ, ಭವಾನಿ ಹೆಗಡೆ ಇತರರು ಇದ್ದರು.
ಇದಕ್ಕೂ ಮೊದಲು ಕು. ತುಳಸಿ ಹೆಗಡೆ ಅವಳಿಂದ ವಿಶ್ವಶಾಂತಿ ಸರಣಿಯ ಯಕ್ಷನೃತ್ಯರೂಪಕ ಶ್ರೀಕೃಷ್ಣಂ ವಂದೇ ಪ್ರದರ್ಶನಗೊಂಡು ಉಭಯ ಶ್ರೀಗಳ ಮೆಚ್ಚುಗೆಗೆ ಪಾತ್ರವಾಯಿತು.
ಡಾ.ವೆಂಕಟರಮಣ ಹೆಗಡೆ ಅವರ ತಂಡ ಇಲ್ಲಿ ನಿಸರ್ಗಕ್ಕೆ ಹತ್ತಿರವಾಗಿ ಬದುಕುವದನ್ನು ಕಲಿಸುತ್ತಿದ್ದಾರೆ. ಅವರು ರಾಜರಂತೆ ತನ್ನ ಜೊತೆಗೆ ಇತರರಿಗೂ ಅವಕಾಶ ನೀಡಿ ಅವರನ್ನೂ ಬೆಳೆಸುತ್ತಾರೆ. – ಹುಕ್ಕೇರಿ ಶ್ರೀ