ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿನಿಂದಲೂ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸ್ಕೇಟಿಂಗ್ ಕ್ರೀಡಾಪಟುಗಳು ಪ್ರತಿನಿಧಿಸುವಂತಾಗಬೇಕು ಎಂದು ಶಿರಸಿಯ ಅದ್ವೈತ ಸ್ಕೇಟರ್ಸ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿರಣಕುಮಾರ ಹೇಳಿದರು.
ರವಿವಾರದಿಂದ ಕುಮಟಾದ ಇತಿಹಾಸದಲ್ಲಿಯೇ ಪ್ರಪ್ರಥಮ ಎನ್ನುವಂತೆ ಆಸಕ್ತ ವಿದ್ಯಾರ್ಥಿಗಳಿಗೆ ಶಿರಸಿಯ ಅದ್ವೈತ ಸ್ಕೇಟರ್ಸ & ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಸ್ಕೇಟಿಂಗ್ ಕ್ರೀಡೆಯ ತರಬೇತಿ ಆರಂಭವಾಗಿದೆ.
ಕುಮಟಾದ ಗಿಬ್ ಹೈಸ್ಕೂಲಿನ ಡಾ ರಾಜೇಂದ್ರ ಪ್ರಸಾದ್ ಸಭಾಭವನದಲ್ಲಿ ಸ್ಕೇಟಿಂಗ್ ಕ್ರೀಡಾ ತರಬೇತಿಗೆ ಚಾಲನೆಯನ್ನು ನೀಡಿ ಮಾತನಾಡಿದ ಅವರು ಶಿರಸಿಯಲ್ಲಿ ಸ್ಕೇಟಿಂಗ್ ಆರಂಭವಾಗಿ ಮೂರು ವರ್ಷಗಳು ಆಗಿದ್ದು ಒಂದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ಕೇಟಿಂಗ್ ಕ್ರೀಡೆಯ ತರಬೇತಿಯನ್ನು ಪಡೆದಿದ್ದಾರೆ. ನೂರಾರು ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಇಂದು ಯಲ್ಲಾಪುರ, ಮುಂಡಗೋಡ ಕಾರವಾರ ಹೀಗೆ ಎಲ್ಲ ನಗರಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಸ್ಕೇಟಿಂಗ್ ಕ್ರೀಡೆಯ ತರಬೇತಿ ಪಡೆದು ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದಾರೆ.
ಆದ್ದರಿಂದ ನಮ್ಮ ಕುಮಟಾದ ವಿದ್ಯಾರ್ಥಿಗಳೂ ಮುಂದಿನ ದಿನಗಳಲ್ಲಿ ಈ ವಿಶೇಷವಾದ ಸ್ಕೇಟಿಂಗ್ ಕ್ರೀಡೆಯ ತರಬೇತಿಯನ್ನು ಪಡೆದು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ ಎಂದು ಸ್ಕೇಟಿಂಗ್ ತರಬೇತಿಗೆ ಚಾಲನೆಯನ್ನು ನೀಡಿ ಉಪಸ್ಥಿರರನ್ನುದ್ದೇಶಿಸಿ ಮಾತನಾಡಿದರು.
ಶಿರಸಿಯಿಂದ ಆಗಮಿಸಿದ ರಾಜ್ಯ ಮಟ್ಟದ ಸ್ಪೀಡ್ ಸ್ಕೇಟಿಂಗ್ ಕ್ರೀಡಾಪಟುಗಳಾದ ನವೀನ್ ಮಡಿವಾಳರ್, ತರುಣ ಕೋಡ್ಕಣಿ, ಶ್ರೀವತ್ಸ ನೇತ್ರಕರ, ಲಿಂಬೂ ಸ್ಕೇಟಿಂಗ್ ಮೂಲಕ ಕಾರಿನ ಅಡಿಯಲ್ಲಿ ನುಸುಳುವ ಮಾಸ್ಟರ್ ಅದ್ವೈತ ಹಾಗೂ ಕರ್ನಾಟಕ ತಂಡದ ಪರವಾಗಿ ಉತ್ತರ ಕನ್ನಡ ಜಿಲ್ಲೆಯಿಂದ ಡಿಸೆಂಬರ್ ಹತ್ತರಿಂದ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಶಂಕರ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಪಾಲಕ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಕೇಟಿಂಗ್ ಕವಾಯತುಗಳನ್ನು ಪ್ರದರ್ಶಿಸಿದರು.
ಇನ್ನು ಮುಂದೆ ವಾರದ ಏಳು ದಿನವೂ ಸ್ಕೇಟಿಂಗ್ ಕ್ರೀಡೆಯ ತರಬೇತಿಯು ಕುಮಟಾದಲ್ಲಿ ನಡೆಯಲಿದ್ದು ಇದರ ಪ್ರಯೋಜನವನ್ನು ಸ್ಥಳೀಯ ಕ್ರೀಡಾಸಕ್ತರು ಪಡೆಯಬೇಕೆಂದು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಸದಾನಂದ ಕಾಮತ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಪ್ರಥಮ ದಿನವೇ ನಲವತ್ತಕ್ಕಿಂತ ಹೆಚ್ಚಿನ ಆಸಕ್ತ ಕ್ರೀಡಾಪಟುಗಳು ಸ್ಕೇಟಿಂಗ್ ತರಬೇತಿಯ ಪ್ರವೇಶವನ್ನು ಪಡೆದರು.
ಅದ್ವೈತ ಸ್ಕೇಟಿಂಗ್ ಕ್ಲಬಿನ ತರಬೇತುದಾರರಾದ ಶ್ಯಾಮಸುಂದರ ಹಾಗೂ ಕುಮಟಾ ಸ್ಕೇಟಿಂಗ್ ಕ್ರೀಡೆಯ ಸಂಘಟಕ ಮತ್ತು ತರಬೇತುದಾರ ಹರೀಶ್ ರಾವತ್ಕರ ನೂತನ ಕ್ರೀಡಾಪಟುಗಳಿಗೆ ಸ್ಕೇಟಿಂಗ್ ಕ್ರೀಡೆಯ ತರಬೇತಿಯನ್ನು ನೀಡಿದರು.
ಮುಂದಿನ ದಿನಗಳಲ್ಲಿ ನಮ್ಮ ಕುಮಟಾದ ಸ್ಕೇಟಿಂಗ್ ಕ್ರೀಡಾಪಟುಗಳೂ ರಾಜ್ಯರಾಷ್ಟ್ರ ಮಟ್ಟದಲ್ಲಿ ಮಿಂಚಲಿ ಎಂಬುವುದು ಕುಮಟಾ ಪಾಲಕರ ಹಾಗೂ ನಮ್ಮೆಲ್ಲರ ಆಶಯವಾಗಿದೆ.