ಶಿರಸಿ: ಕರ್ನಾಟಕ ವಿಧಾನಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಯಲ್ಲಿ ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು, ಹಾಗೂ ಚುನಾವಣಾ ಅಭ್ಯರ್ಥಿ ಭೀಮಣ್ಣ ನಾಯ್ಕರ ಗೆಲವು ನಿಶ್ಚಿತವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರು ಹಾಗೂ ಪದವೀಧರರ ಘಟಕದ ರಾಜ್ಯಾಧ್ಯಕ್ಷ ಡಾ. ಆರ್.ಎಂ ಕುಬೇರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಡಗೋಡ, ಯಲ್ಲಾಪುರ, ಶಿರಸಿ, ಸಿದ್ದಾಪುರ ಹಾಗೂ ದಾಂಡೇಲಿ, ಹಳಿಯಾಳ ಮುಂತಾದ ತಾಲೂಕುಗಳಲ್ಲಿ ಪ್ರವಾಸ ಮಾಡಿ ಮತದಾರರೊಂದಿಗೆ ಮಾತನಾಡಿ ಮತಯಾಚಿಸಿದ ಡಾ.ಕುಬೇರಪ್ಪನವರು ಮತದಾರರ ಒಲವು ಹಾಗೂ ಅವರ ಉತ್ಸಾಹ ಕಾಂಗ್ರೆಸ್ ಪರವಾಗಿದ್ದು, ಕೆಲವು ಮತದಾರರು ಪಕ್ಷಾತೀತಿವಾಗಿ ಭೀಮಣ್ಣ ನಾಯ್ಕರಿಗೆ ಬೆಂಬಲಿಸುವ ಸೂಚನೆ ಕಂಡುಬಂದಿದ್ದರಿಂದ ಈ ಬಾರಿ ಭೀಮಣ್ಣ ನಾಯ್ಕರ ಗೆಲುವು ನಿಶ್ಚಿತವಾಗಿದೆ ಎಂದು ಡಾ.ಕುಬೇರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಲು ವಿಫಲವಾಗಿರುವುದರಿಂದ ಜನ ಸಾಮಾನ್ಯರು ದಿನ ನಿತ್ಯ ಬಳಸುವ ಎಲ್ಲಾ ವಸ್ತುಗಳು ಕೈಗೆ ನಿಲುಕಲಾರದಷ್ಡು ದುಬಾರಿಯಾಗಿದ್ದು, ಪೆಟ್ರೋಲ್, ಡಿಸೇಲ್, ಗ್ಯಾಸ್, ನಿರುದ್ಯೋಗ, ರೈತರ ಮೇಲೆ ಹಲ್ಲೆ, ರಾಷ್ಟ್ರಮಟ್ಟದಲ್ಲಿ ಸುಮಾರು ಏಳುನೂರು ರ್ಯತರು ಹೋರಾಟದಲ್ಲಿ ಮಡಿದಿರುವುದು ಮುಂತಾದ ಸಮಸ್ಯೆಗಳ ಅರಿವಾಗಿ ಯುವಕರೂ ಸೇರಿದಂತೆ ಇಡೀ ಸಮುದಾಯ ಬಿಜೆಪಿ ವಿರುದ್ಧವಾಗಿರುವುದರಿಂದ ಅತ್ಯಂತ ಸರಳ ಸಜ್ಜನಿಕೆಗೆ ಹೆಸರಾದ ಭೀಮಣ್ಣ ನಾಯ್ಕರವರು, ಅಭಿವೃದ್ಧಿ ಪರವಾದ ಅಜೆಂಡಾ ಇಟ್ಟುಕೊಂಡು ಜನರ ಸಂಕಷ್ಟ, ನೋವು ನಿವಾರಿಸಲು ನನಗೊಮ್ಮೆ ಅವಕಾಶಕೊಡಿ ಎಂದು ಮತದಾರರ ಮುಂದೆ ಇಟ್ಟಿರುವ ಮನವಿಗೆ ಪಕ್ಷಾತೀತವಾಗಿ ಮತದಾರರು ಭೀಮಣ್ಣನವರನ್ನು ಬೆಂಬಲಿಸುತ್ತಿರುವುದು ನನ್ನ ಪ್ರವಾಸದ ಅವಧಿಯಲ್ಲಿ ಕಂಡು ಬಂದಿದೆ ಎಂದು ಡಾ.ಕುಬೇರಪ್ಪ ತಿಳಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಮುಖಂಡರು ಹಾಗೂ ಉತ್ತರಕನ್ನಡದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ ದೇಶಪಾಂಡೆಯವರ ನೇತೃತ್ವದಲ್ಲಿ ನಡೆದ ಮುಂಡಗೋಡ ಹಾಗೂ ಯಲ್ಲಾಪುರ ಸಭೆಗಳಲ್ಲಿ ಡಾ.ಕುಬೇರಪ್ಪ ಪಾಲ್ಗೊಂಡಿದ್ದರು. ಸಭೆಯಲ್ಲಿ ಪ್ರಶಾಂತ ದೇಶಪಾಂಡೆ, ಎಚ್.ಎಂ ನಾಯ್ಕ, ಕೃಷ್ಣ ಹಿರೇಹಳ್ಳಿ, ಧರ್ಮರಾಜ್ ನಾಡಿಗೇರ, ಗಾಂವಕರ್, ಸುಜಾತ ಗಾಂವಕರ ಮುಂತಾದ ನೂರಾರು ಕಾಂಗ್ರೆಸ್ ಮುಖಂಡರು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಡಾ.ಕುಬೇರಪ್ಪ ತಿಳಿಸಿದ್ದಾರೆ.