ಶಿರಸಿ: ಜಿಲ್ಲೆಯಲ್ಲಿ ಭತ್ತದ ಬೆಳೆ ಹಾಗೂ ಅಡಿಕೆ ಬೆಳೆ ಕಟಾವಿಗೆ ಬಂದಿದ್ದು, ಅಕಾಲಿಕ ಮಳೆಯಿಂದ ಸಾಕಷ್ಟು ಹಾನಿಯಾಗಿದೆ, ರೈತನ ಬದುಕೆ ಕಷ್ಟದಲ್ಲಿರುವಾಗ ಅಕಾಲಿಕ ಮಳೆ ಕೊಡಲಿ ಏಟು ನೀಡಿದಂತಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ರೈತರ ಖಾತೆಗೆ ಸೂಕ್ತ ಪರಿಹಾರ ಜಮಾ ಮಾಡಬೇಕೆಂದು ಜಿಲ್ಲಾ ಪಂಚಾಯತಿ ಸದಸ್ಯ ಜಿ. ಎನ್. ಹೆಗಡೆ ಮುರೇಗಾರ ಆಗ್ರಹಿಸಿದ್ದಾರೆ.
ಇನ್ನು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ತಾಂತ್ರಿಕ ತೊಂದರೆಯಿoದಾಗಿ ರೈತರು ಕಂದಾಯ ಇಲಾಖೆ ಕಛೇರಿಗೆ ಅಲೆದಾಡುವಂತಾಗಿದ್ದು, ಕೂಡಲೇ ಸದ್ರಿ ಸಾಪ್ಟವೇರ್ ಸಮಸ್ಯೆ ಪರಿಹರಿಸಿ ರೈತರಿಗೆ ಆರು ತಿಂಗಳಿoದ ತೊಂದರೆ ಆಗಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕಂದಾಯ ಸಚಿವ ಆರ್. ಅಶೋಕ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಶಾಶ್ವತ ಬೆಳೆ ವಿವರ ದಾಖಲೆ ಮಾಡುವುದರಿಂದ ಕೆಲ ಜಿಲ್ಲೆಗಳಿಗೆ ವಿನಾಯತಿ ನೀಡಿದ್ದು, ಉತ್ತರ ಕನ್ನಡದಲ್ಲೂ ಸಹ ಅಡಿಕೆ ಬೆಳೆ ಶಾಶ್ವತ ಬೆಳೆಯಾಗಿದೆ. ಈ ಬೆಳೆಗೂ ವಿನಾಯತಿ ನೀಡಿ ಸಂಬoಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಆದೇಶಿಸುವ ಮೂಲಕ ಎಲ್ಲ ರೈತರ ತೊಂದರೆ ನಿವಾರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.