ಶಿರಸಿ: ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ನ ಅಂಗಸಂಸ್ಥೆ ಶ್ರೀ ಯಕ್ಷಗಾನ ಕಲಾಮೇಳ ಶಿರಸಿ ಇವರಿಂದ “ಮಾಳವಿಕಾ ಪರಿಣಯ” ಎಂಬ ಯಕ್ಷಗಾನ ಪ್ರದರ್ಶನ ಡಿ.5 ರಂದು ಶಿರಸಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೇಳದ ವ್ಯವಸ್ಥಾಪಕ ಕೇಶವ ಹೆಗಡೆ ಮಂಗಳೂರು ತಿಳಿಸಿದರು.
ಶಿರಸಿ ಮಧುವನ ಹೋಟೆಲ್ ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಮಹಾಕವಿ ಕಾಳಿದಾಸ ಬರೆದಿರುವಂತ ನಾಟ್ಯಶಾಸ್ತ್ರ ಆಧಾರಿತ “ಮಾಳವಿಕಾಗ್ನಿಮಿತ್ರಮ್” ಎಂಬ ಸಂಸ್ಕೃತ ನಾಟಕದ ಸಂವಿಧಾನ ಮತ್ತು ಕಥಾ ವಸ್ತುಗಳೆಲ್ಲವೂ ಯಕ್ಷಗಾನದ ಪದ್ಧತಿ, ನಿಯಮಗಳಿಗೆ ಹೊಂದಾಣಿಕೆಯಿರುವುದರಿಂದ ಅದನ್ನು ‘ಮಾಳವಿಕ ಪರಿಣಯ’ ಹೆಸರಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ದ ಪಡಿಲಾಗಿದೆ ಎಂದು ತಿಳಿಸಿದರು.
ಡಿಸೆಂಬರ್ 5 ರಂದು ನಗರದ ಲಯನ್ಸ್ ಸ್ಕೂಲ್ ಸಭಾಂಗಣದಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸ್ವರ್ಣವಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜೀ ಅವರು ಪ್ರಸಂಗ ಪುಸ್ತಕ ಬಿಡುಗಡೆ ಗೊಳಿಸಲಿದ್ದಾರೆ. ಇದೆ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಎಂ.ಕೆ.ರಮೇಶ ಆಚಾರ್ಯ ತೀರ್ಥಹಳ್ಳಿ ಇವರನ್ನು ಸನ್ಮಾನಿಸಲಾಗುವುದು ಎಂದರು. ಯಕ್ಷಗಾನ ಪ್ರದರ್ಶನಕ್ಕೆ ಉಚಿತ ಪ್ರವೇಶ ಇದ್ದು ಸಕಲ ಕಲಾ ಆಸಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಮನವಿ ಮಾಡಿದರು. ಈ ವೇಳೆ ಪತ್ರಕರ್ತ ಅಶೋಕ ಹಾಸ್ಯಗಾರ ಇದ್ದರು.