ಸಿದ್ದಾಪುರ: ವಿಧಾನಪರಿಷತ್ಗೆ ನಾನು ಆಯ್ಕೆಯಾದರೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಹಾಗೂ ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ವಿಧಾನಪರಿಷತ್ನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಣಪತಿ ಉಳ್ವೇಕರ್ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಬಾಲಭವನದಲ್ಲಿ ಪ್ರಚಾರದ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಬಾರಿ ಜಿಲ್ಲೆಯಲ್ಲಿ ಒಬ್ಬರೇ ಶಾಸಕರಿದ್ದಾಗ ನಾನು ಒಂದು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೆ ಈ ಬಾರಿ ಜಿಲ್ಲೆಯಲ್ಲಿ 5 ಶಾಸಕರಿದ್ದಾರೆ, ಸಂಸದರು ನಮ್ಮ ಪಕ್ಷದವರಾಗಿದ್ದಾರೆ. ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದೆ ಆದ್ದರಿಂದ ಈ ಬಾರಿ 2100ಕ್ಕೂ ಹೆಚ್ಚು ಮತದಿಂದ ನಾನು ಆಯ್ಕೆಯಾಗುತ್ತೇನೆ ಎಂದು ಹೇಳಿದರು.
ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಮಾತನಾಡಿ,ಗಣಪತಿ ಉಳ್ವೇಕರ ಒಬ್ಬ ಸಮರ್ಥ ಅಭ್ಯರ್ಥಿಯಾಗಿದ್ದು ಜಿಲ್ಲೆಯ ಧ್ವನಿಯಾಗಲಿದ್ದಾರೆ. ಎರಡು ಬಾರಿ ಕಾರವಾರ ನಗರಸಭೆಯ ಅಧ್ಯಕ್ಷರಾಗಿ,ಐದು ಬಾರಿ ಸದಸ್ಯರಾಗಿ ಅನುಭವವನ್ನುಗಳಿಸಿದ್ದಾರೆ ಅಲ್ಲದೆ ಜಿಲ್ಲೆಯಲ್ಲಿರುವ 2911 ಮತಗಳಲ್ಲಿ ಹೆಚ್ಚಿನ ಮತಗಳು ನಮ್ಮ ಪಕ್ಷದವರದ್ದಾಗಿದೆ ಸಿದ್ದಾಪುರದಲ್ಲಿ 234 ಮತಗಳಿದ್ದು 117 ಗ್ರಾಪಂ ಸದಸ್ಯರು,14 ಪಪಂ ಸದಸ್ಯರು ನಮ್ಮ ಪಕ್ಷದವರಾಗಿದ್ದಾರೆ ಹೀಗಾಗಿ ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಕಳೆದ 12 ವರ್ಷದಿಮದ ವಿಧಾನಪರಿಷತ್ನಲ್ಲಿದ್ದ ಎಸ್.ವಿ.ಘೋಟ್ನೇಕರ ಈ ಬಾರಿ ಸೋಲುವ ಭೀತಿಯಿಂದ ವಿಧಾನಪರಿಷತ್ಗೆ ಧಮ್ ಇಲ್ಲ ಎಂಬ ಹೇಳಿಕೆಯನ್ನು ನೀಡಿ ಹಿಂದೆ ಸರಿದಿದ್ದಾರೆ ಆದರೆ ಒಂದು ಆಡಳಿತದ ಸಭೆಯನ್ನು ಅವಹೇಳನ ಮಾಡುವ ಇವರು ಈಡಿ ಜಿಲ್ಲೆಯ ಯಾವುದಾದರೂ ತಾಲೂಕಿನ ಒಂದು ಗ್ರಾಮಪಂಚಾಯತ್ಗಾದರೂ ಭೇಟಿ ನೀಡಿದ್ದಾರೆಯೇ? ಸ್ಥಳೀಯ ಸಂಸ್ಥೆಯ ಸದಸ್ಯರ ಜೊತೆಗೆ ಚರ್ಚಿಸಿದ್ದಾರಯೇ ಇಲ್ಲ ಈಗ ಚುನಾವಣೆಯ ಸಂದರ್ಭದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಚಂದ್ರು ಎಸಳೆ, ನಾಗರಾಜ ನಾಯ್ಕ ಬೇಡ್ಕಣಿ, ಗುರುಪ್ರಸಾದ ಹೆಗಡೆ,ಎಸ್.ಕೆ.ಮೇಸ್ತ,ಕೃಷ್ಣಮೂರ್ತಿ ಕಡಕೇರಿ,ಚಂದ್ರಕಲಾ ನಾಯ್ಕ,ಕುಮಾರ ಮಾರ್ಕಂಡೇಯ,ಪ್ರಸನ್ನ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಗಣಪತಿ ಉಳ್ವೇಕರ ಹಲಗೇರಿ ಹಾಗೂ ಬಿಳಗಿಯಲ್ಲಿ ಸಭೆ ನಡೆಸಿ ಮತದಾರರನ್ನು ಭೇಟಿಯಾದರು.