ಶಿರಸಿ: ತಾಲೂಕಿನ ಭೈರುಂಬೆ ಸಮೀಪದ ಹುಳಗೋಳದ ರಾಜೇಶ್ವರಿ ಹೆಗಡೆ ಅವರ ಹೈನುಗಾರಿಕೆ ಕ್ಷೇತ್ರವನ್ನು ಆಸಕ್ತರು, ವಿವಿಧ ಸ್ವಸಹಾಯ ಸಂಘದ ಸದಸ್ಯರು ಗುರುವಾರ ವೀಕ್ಷಿಸಿ ತರಬೇತಿ ಪಡೆದುಕೊಂಡರು.
ಕಳೆದ ಹಲವು ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆ ಮಾಡುತ್ತಲೇ ಯಶಸ್ವಿಯೂ ಆದ ರಾಜೇಶ್ವರಿ ಹೆಗಡೆ ಅವರು ಧರ್ಮಸ್ಥಳ ಸಂಘಗಳ ಯಲ್ಲಾಪುರ ತಾಲೂಕಿನ ಒಕ್ಕೂಟಗಳ ಸದಸ್ಯರು ಕೃಷಿ, ಹೈನುಗಾರಿಕೆ ಮಾಹಿತಿ ಪಡೆದುಕೊಂಡರು. ನಿತ್ಯ ಜಾನುವಾರುಗಳ ನಿರ್ವಹಣೆ, ಆಕಳ ತಳಿಗಳ ಆಯ್ಕೆ, ಕರುಗಳ ನಿರ್ವಹಣೆ, ರೋಗ ನಿರ್ವಹಣೆಯಲ್ಲಿ ಮುಂಜಾಗ್ರತಾ ಕ್ರಮಗಳು, ಹಳ್ಳಿ ಔಷಧಗಳ ಕುರಿತೂ ಮಾಹಿತಿ ಪಡೆದುಕೊಂಡರು. ರಾಜೇಶ್ವರಿ ಹೆಗಡೆ ಅವರು ಹಲವು ತಳಿಗಳ ಆಕಳು ಸಾಕಿಕೊಂಡು ಶಿರಸಿ ನಗರಕ್ಕೂ ಹೈನು ನಿರಂತರವಾಗಿ ಪೂರೈಸುತ್ತಿದ್ದಾರೆ. ಈಗಾಗಲೇ ಅನೇಕ ಆಸಕ್ತ ತಂಡಗಳಿಗೆ ತರಬೇತಿ ಕೂಡ ನೀಡುತ್ತಿದ್ದಾರೆ ಎಂಬುದು ವಿಶೇಷ.
ಈ ವೇಳೆ ಸಂಘದ ತರಬೇತಿ ಮೇಲ್ವಿಚಾರಕ ಸತೀಶ, ಮಂಜು ಬರಕಂಟ, ಸುಜಾತಾ ಹೆಗಡೆ, ರೇಣುಕಾ ಇತರರು ಇದ್ದರು.