ಶಿರಸಿ: ಕನ್ನಡ ನಾಡು ಉದಯವಾದಾಗ ಉದಯಿಸಿದ್ದು ಕೇವಲ ಭೌಗೋಳಿಕ ರೇಖೆಗಳು ಮಾತ್ರ. ಕೇವಲ ಮೂರು ಪ್ರತಿಶತ ಕನ್ನಡ ಮಾತನಾಡುವವರ ಜನಸಂಖ್ಯೆ 2011ರ ಜನಗಣತಿ ಪ್ರಕಾರ ಇರುವಾಗ ಕನ್ನಡ ಭಾಷೆಯ ಅನಂತವಾಗುವಿಕೆ ಅನವರತವಾದಾಗ ಮಾತ್ರ ಸಾಧ್ಯ ಎಂದು ಪ್ರಖ್ಯಾತ ರಂಗಕರ್ಮಿ ಡಾ. ಶ್ರೀಪಾದ ಭಟ್ ಹೇಳಿದರು.
ಶಿರಸಿ ಲಯನ್ಸ ಸಭಾಂಗಣದಲ್ಲಿ ಶಿರಸಿ ಲಯನ್ಸ ಕ್ಲಬ್, ಶಿರಸಿ ಲಿಯೋ ಕ್ಲಬ್, ಶಿರಸಿ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಲಯನ್ಸ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡದ ಶ್ರೇಷ್ಠತೆ ಹಾಗೂ ಯುವ ಪೀಳಿಗೆಯಲ್ಲಿ ಕನ್ನಡ ಜಾಗೃತಿ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು.
ಎರಡು ಸಾವಿರ ವರ್ಷದಷ್ಟು ಇತಿಹಾಸ ಹೊಂದಿರುವ ಶಾಸ್ತ್ರೀಯ ಭಾಷಾ ಸ್ಥಾನ ಪಡೆದಿರುವ ನಮ್ಮ ಕನ್ನಡದ ಅವನತಿಗೆ ಬಹುದೊಡ್ಡ ಕೊಡುಗೆಯನ್ನು ಇಂದಿನ ಶಿಕ್ಷಣ ಪದ್ದತಿ ನೀಡಿದೆ. ಪ್ರಸ್ತುತ ಭಾಷಾ ಕಲಿಕೆಯ ಮೆಕಾಲೆ ಮಾದರಿಯ ಆಯಾಮವೇ ನಮ್ಮ ಕಾವ್ಯಗಳ ಓದಿನ ಹರಹನ್ನು ಸಾಯಿಸಿದೆ. ಭಾಷೆ ಭಾವವನ್ನು, ಕಲ್ಪನೆಯನ್ನು ಸೃಜನಶೀಲತೆನ್ನು ಉದ್ದೀಪನಗೊಳಿಸುತ್ತದೆ. ಸಾವಿರ ಬಗೆಯಲ್ಲಿ ಕನ್ನಡಿಗನ ಕುರಿತಾದ ಓದು ಇಂದಿನ ಅಗತ್ಯತೆಯಾಗಿದೆ ಎಂದರು.
ಮುಂದುವರಿದು,7ನೇ ಶತಮಾನದ ಕಪ್ಪೆ ಅರಭಟ್ಟನ ಮೊದಲ ಕನ್ನಡ ಸಾಹಿತ್ಯ ಕೃತಿಯಿಂದ ಆರಂಭಿಸಿ 8ನೇ ಶತಮಾನದ ಕವಿರಾಜ ಮಾರ್ಗ, 9ನೇ ಶತಮಾನದ ಪಂಪ ಭಾರತ, ವಡ್ಡಾರಾದನೆ, ಪಂಚತಂತ್ರ, ವಚನ ಸಾಹಿತ್ಯ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ದಾಸ ಪರಂಪರೆ, ಕುಮಾರವ್ಯಾಸ ಭಾರತದಿಂದ ತೊಡಗಿ ಬೆಂದ್ರೆ, ಪು.ತಿ.ನ. ಕುವೆಂಪು ಹಾಗೂ ಸು.ರಂ. ಎಕ್ಕುಂಡಿಯವರ ಕಾವ್ಯದ ಉದಾರಹಣೆಯೊಂದಿಗೆ ಕನ್ನಡ- ಕನ್ನಡಿಗನ ಸಂಸ್ಕಾರ ಸಂಸ್ಕøತಿಯ ಮಹತ್ವ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜೆ.ಎಫ್ ಲಯನ್ ತ್ರಿವಿಕ್ರಮ ಪಟವರ್ಧನ ವಹಿಸಿದ್ದು ಅವರು ಎಲ್ಲರನ್ನೂ ಸ್ವಾಗತಿಸಿದರು. ವೇದಿಕೆಯಲ್ಲಿ ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಎನ್. ವಿ.ಜಿ.ಭಟ್, ಲಯನ್ಸ ಶಾಲಾ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ, ಲಯನ್ಸ ಕ್ಲಬ್ ಕೋಶಾಧ್ಯಕ್ಷ ಲಯನ್ ಅನಿತಾ ಹೆಗಡೆ ಉಪಸ್ಥಿತರಿದ್ದರು.
ಲಯನ್ ಶ್ರಿಕಾಂತ ಹೆಗಡೆ ಅತಿಥಿಗಳನ್ನು ಪರಿಚಯಿಸಿದರು. ಲಯನ್ಸ ಕ್ಲಬ್ ಕಾರ್ಯದರ್ಶಿ ಲಯನ್ ವಿನಯ ಹೆಗಡೆ ಬಸವನಕಟ್ಟೆ ವಂದನಾರ್ಪಣೆ ಗೈದರು. ಲಯನ್ಸ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸಿಕೊಟ್ಟರು. ಎಂ. ಜೆ.ಎಫ್ ಲಯನ್ ಪ್ರಭಾಕರ ಹೆಗಡೆ ಧ್ವಜವಂದನೆಗೈದರು. ತಾಯಿ ಭುವನೇಶ್ವರಿ ಮೂರ್ತಿಗೆ ಆರತಿ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಭಾ ಕಾರ್ಯಕ್ರಮದ ನಂತರ ಪಂಡಿತ್ ಆರ್. ವಿ. ಹೆಗಡೆ ಹಳ್ಳದಕೈ ಇವರಿಂದ ಸಿತಾರ ವಾದನ ಕಾರ್ಯಕ್ರಮ ನಡೆಯಿತು. ಅನಂತ ಹೆಗಡೆ ವಾಜಗಾರ ತಬಲಾ ಸಹಕಾರ ನೀಡಿದರು. ಲಯನ್ ಅನಿತಾ ಹೆಗಡೆ ಸಂಗೀತ ಕಾರ್ಯಕ್ರಮದ ಲಯನ್ ಜ್ಯೋತಿ ಹೆಗಡೆ ಸಭಾ ಕಾರ್ಯಕ್ರಮದ ನಿರೂಪಣೆ ಮಾಡಿದರು. ಅತ್ಯಂತ ಅರ್ಥಪೂರ್ಣವು, ವಿದ್ವತ್ ಪೂರ್ಣ ವಾಗಿ ನಡೆದ ಕಾರ್ಯಕ್ರಮಗಳು ನೆರೆದ ಲಯನ್ಸ್ ಬಳಗದ ಆಸಕ್ತ ಪ್ರೇಕ್ಷಕರ ಮನಸೆಳೆಯಿತು.