ಕಾರವಾರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶದಂತೆ ಕ್ರೈಸ್ತ ಸಮುದಾಯದ ಮಿಷನರಿಗಳ ಗಣತಿ ಮತ್ತು ಮತಾಂತರ ನಿಷೇಧ ಕಾಯಿದೆಯನ್ನು ಕೈ ಬಿಡಬೇಕೆಂದು ಕಾರವಾರ ಕ್ರಿಶ್ಚಿಯನ್ ಫೋರಂ ಒತ್ತಾಯಿಸಿದೆ.
ಈ ಕಾಯ್ದೆಗಳನ್ನು ಅನುಷ್ಠಾನಕ್ಕೆ ತಂದರೆ ಮುಂದಿನ ದಿನದಲ್ಲಿ ಬೃಹತ್ ಹೋರಾಟಕ್ಕೆ ಅವಕಾಶ ಮಾಡಿಕೊಡದಂತೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿದ ಅವರು ಕ್ರೈಸ್ತ ಮಿಶಿನರಿಗಳ ಗಣತಿ ಮಾಡಲು ಆದೇಶಿಸಿರುವುದು ಅನಾವಶ್ಯಕ ಕ್ರಮ. ಇದರಿಂದ ರಾಜ್ಯಕ್ಕೆ ಎಳ್ಳಷ್ಟು ಪ್ರಯೋಜನವಿಲ್ಲ. ಮತಾಂತರ ಮಿಥ್ಯೆ ಹಾಗೂ ಕೋಮು ವಿರೋಧಿ ವಾತಾವರಣವು ತೀವ್ರವಾಗಿರುವ ಸಮಯದಲ್ಲಿ ಇಂತಹ ಗಣತಿಯನ್ನು ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಈ ಗಣತಿಯನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಚರ್ಚುಗಳು, ಯಾಜಕರು (ಪಾದ್ರಿಗಳು, ಪಾಸ್ಟರ್ಗಳು) ಮತ್ತು ಕ್ರೈಸ್ತ ಸನ್ಯಾಸಿನಿಯರನ್ನು ಕೋಮುವಾದಿ ಶಕ್ತಿಗಳು ಅನಗತ್ಯವಾಗಿ ಟಾರ್ಗೆಟ್ ಮಾಡುವುದನ್ನೂ ಸಹ ತಳ್ಳಿ ಹಾಕುವಂತಿಲ್ಲ. ಈ ರೀತಿಯ ಹಲವು ಘಟನೆಗಳು ಉತ್ತರ ಭಾರತ ಹಾಗೂ ಕರ್ನಾಟಕದಲ್ಲಿಯೂ ಸಹ ಈಗಾಗಲೇ ನಡೆದಿರುವುದು ಆದಾಗಲೇ ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ
ಕ್ರೈಸ್ತ ಸಮುದಾಯವು ನಡೆಸುತ್ತಿರುವ ಶಾಲಾ – ಕಾಲೇಜುಗಳು ಮತ್ತು ಆಸ್ಪತ್ರೆಗಳ ಲೆಕ್ಕ ತೆಗೆದುಕೊಂಡರೆ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ನಮ್ಮ ಸಮುದಾಯವು ನೀಡುತ್ತಿರುವ ಅಪರಿಮಿತ ಸೇವೆಯ ಅಂದಾಜು ದೊರೆಯುತ್ತದೆ. ನಾವು ಎಂದಿಗೂ ಸಹ ಬಲವಂತದ, ಆಮಿಷಗಳನ್ನು ಒಡ್ಡಿ ಮಾಡುವ ಮತಾಂತರವನ್ನು ವಿರೋಧಿಸುತ್ತೇವೆ. ಕ್ರೈಸ್ತ ಸಮುದಾಯವು ಸದಾ ದೇಶ ಪ್ರೇಮಿಯಾಗಿದೆ. ಮಾತ್ರವಲ್ಲದೇ ಈ ನೆಲದ ಕಾನೂನುಗಳನ್ನು ಚಾಚೂ ತಪ್ಪದೇ ಪಾಲಿಸುತ್ತದೆ. ಅದಲ್ಲದೇ ಈ ದೇಶದಲ್ಲಿನ ಬಡವರ ಮತ್ತು ಹಿಂದುಳಿದವರ ಸೇವೆಗೆ ಸದಾ ಸಿದ್ಧವಿದೆ. ಈ ನಿಟ್ಟಿನಲ್ಲಿ ನಮಗೆ ಸರ್ಕಾರದಿಂದ ಬೆಂಬಲ ಹಾಗೂ ಪ್ರೋತ್ಸಾಹದ ಅಗತ್ಯತೆ ಇದೆ ಎಂದೂ ಈ ವೇಳೆ ಅವರು ಕೇಳಿಕೊಂಡಿದ್ದಾರೆ.