ಕುಮಟಾ: ಕೇಂದ್ರದ ಸ್ವಚ್ಛ ಸರ್ವೇಕ್ಷಣೆಯಲ್ಲಿ ಕುಮಟಾ ಪಟ್ಟಣಕ್ಕೆ ಸ್ವಚ್ಛ ನಗರ ಪ್ರಶಸ್ತಿ ದೊರಕಿದ್ದು, ಪುರಸಭಾ ಮುಖ್ಯಾಧಿಕಾರಿ ಸುರೇಶ ಎಮ್.ಕೆ. ನೇತೃತ್ವದಲ್ಲಿ ಪುರಸಭಾ ಜನಪ್ರತಿನಿಧಿಗಳು ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣಾ 2021ರ ಆರನೇ ಆವೃತ್ತಿಯಲ್ಲಿ ರಾಜ್ಯದ 310 ನಗರ, ಪಟ್ಟಣಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಈ ಪೈಕಿ ಕುಮಟಾ ಸೇರಿದಂತೆ ರಾಜ್ಯದ ಒಟ್ಟು 8 ನಗರಗಳಿಗೆ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ದೇಶದಾದ್ಯಂತ 4,320 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, 5 ಕೋಟಿಗೂ ಅಧಿಕ ಜನರು ಫೀಡ್ಬ್ಯಾಕ್ ನೀಡಿದ್ದರು. ಈ ಪೈಕಿ ಸ್ಟಾರ್ ರೇಟಿಂಗ್ ಪಡೆದ ನಗರಗಳಿಗೆ ಸ್ವಚ್ಛ ನಗರ ಪ್ರಶಸ್ತಿಗೆ ಸಚಿವಾಲಯ ಆಯ್ಕೆ ಮಾಡಿದೆ.
ಬೆಂಗಳೂರು ಮಹಾನಗರ ಪಾಲಿಕೆಗೆ ಕಸಮುಕ್ತ ನಗರ ಪ್ರಶಸ್ತಿ ದೊರೆತಿದ್ದು, ಹುಬ್ಬಳ್ಳಿ-ಧಾರವಾಡ, ಮೈಸೂರು, ಮುಧೋಳ, ಹೊಸದುರ್ಗ, ಕೃಷ್ಣರಾಜನಗರ, ಪಿರಿಯಾಪಟ್ಟಣಗಳನ್ನೂ ಸ್ವಚ್ಛ ನಗರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಪುರಸಭೆಯ ಅಧ್ಯಕ್ಷೆ ಮೋಹಿನಿ ಗೌಡ, ಸದಸ್ಯರಾದ ಶೈಲಾ ಗೌಡ, ಪಲ್ಲವಿ ಮಡಿವಾಳ, ಸಂತೋಷ ನಾಯ್ಕ, ಮಹೇಶ ನಾಯ್ಕ ವನ್ನಳ್ಳಿ, ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಠ್ಠಲ ತಡಸಲೂರ್, ಕಿರಿಯ ಕಾರ್ಯಕ್ರಮಾಧಿಕಾರಿ ಗೋವಿಂದ ಆಚಾರಿ ಇದರು.