ಅಂಕೋಲಾ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಕಾರ್ಯಾಲಯದಲ್ಲಿ ಕೆನರಾ ಬ್ಯಾಂಕ್’ನ 116 ನೇ ಸಂಸ್ಥಾಪನಾ ದಿನಾಚರಣೆಯನ್ನು ಶುಕ್ರವಾರ ಪದ್ಮಶ್ರೀ ತುಳಸೀ ಗೌಡ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ರೀಜನಲ್ ಮ್ಯಾನೇಜರ ರಾಮಾ ನಾಯಕ ಮಾತನಾಡಿ, 1906 ರಲ್ಲಿ ದಿ.ಅಮ್ಮೆಂಬಳ ಸುಬ್ಬರಾವ ಪೈ ಪ್ರಾರಂಭಿಸಿದ ಕೆನರಾ ಬ್ಯಾಂಕ್ 115 ವರ್ಷಗಳನ್ನು ಪೂರೈಸಿದೆ. ದೇಶದ ಹಲವೆಡೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿ ಸಾರ್ವಜನಿಕ ವಲಯದ ಅತೀ ದೊಡ್ಡ 2ನೇ ಬ್ಯಾಂಕ್ ಎಂದರು. ಸಿಂಡಿಕೇಟ್ ಬ್ಯಾಂಕ್ ಜೊತೆ 2020 ರಲ್ಲಿ ವಿಲೀನವಾಗಿ ಇನ್ನಷ್ಟು ಸಶಕ್ತವಾಗಿದೆ. ಇದೀಗ ಬ್ಯಾಂಕಿಗೆ ಬರಲಾಗದ ವಯಸ್ಸಾದವರು, ಅಶಕ್ತರಿಗೆ ವಿಡಿಯೋ ಕಾಲ್ ಮೂಲಕವೂ ಪಿಂಚಣಿದಾರರ ಜೀವನ ಪ್ರಮಾಣ ಪತ್ರವನ್ನು ದೃಢೀಕರಿಸಲಾಗುತ್ತಿದೆ. ಅಲ್ಲದೆ ಕಡಿಮೆ ಬಡ್ಡಿ ದರದಲ್ಲಿ ಬಂಗಾರ ಸಾಲ ನೀಡಲಾಗುತ್ತಿದೆ. ಸರಕಾರದ ಆರ್ಥಿಕ ಸಹಾಯದ ಹಲವು ಯೋಜನೆಗಳನ್ನೂ ಕಾರ್ಯರೂಪಗೊಳಿಸಲಾಗುತ್ತಿದೆ ಎಂದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪಿ.ವೈ.ಸಾವಂತ ಮಾತನಾಡಿ ಕೆನರಾ ಬ್ಯಾಂಕು ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ತನ್ನ ಗ್ರಾಹಕರಿಗೆ ಅಗತ್ಯ ಹಾಗೂ ತ್ವರಿತ ಸೇವೆಯನ್ನು ನೀಡುವದರ ಮೂಲಕ ಸಾರ್ವಜನಿಕರ ಅಚ್ಚುಮೆಚ್ಚಿನ ಬ್ಯಾಂಕ್ ಆಗಿದೆ ಎಂದರು.
ಲೀಡ್ ಬ್ಯಾಂಕಿನ ಮ್ಯಾನೇಜರ ರುದ್ರೇಶ ಬ್ಯಾಂಕಿನ ಧ್ಯೇಯೋದ್ಧೇಶ ಮತ್ತು ಯೋಜನೆಗಳನ್ನು ಹೇಳಿದರು ಅಲ್ಲದೆ ಪದ್ಮಶ್ರೀ ತುಳಸೀ ಗೌಡರು ಗಿಡಗಳನ್ನು ಬೆಳೆಸುವದರ ಮೂಲಕ ಜನರಿಗೆ ನೈಸರ್ಗಿಕವಾಗಿ ಆಕ್ಸಿಜನ ಪೂರೈಕೆಯಾಗುವಂತಹ ಮಹಾನ್ ಕಾರ್ಯ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ತುಳಸೀ ಗೌಡರನ್ನು ಕೆನರಾ ಬ್ಯಾಂಕಿನ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕೆನರಾ ಬ್ಯಾಂಕ್ ಅಂಕೋಲಾ ಶಾಖೆಯ ಸೀನಿಯರ ಮ್ಯಾನೇಜರ ವೆಂಕಟೇಶ ಮಜ್ಜಿಗುಡ್ಡ ಉಪಸ್ಥಿತರಿದ್ದರು. ಸುಭಾಶ ಕಾರೇಬೈಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಠಲದಾಸ ಕಾಮತ ವಂದಿಸಿದರು.