ಕಾರವಾರ: ಕಳೆದ ಅನೇಕ ವರ್ಷಗಳಿಂದ ಮಾಡುತ್ತ ಬಂದ ಮನವಿ ಪ್ರತಿಭಟನೆಗೆ ಜಯ ಸಿಕ್ಕಿದ್ದು, ಇಲ್ಲಿನ ಕಾರವಾರ-ಕೋಡಿಭಾಗ ರಸ್ತೆಗೆ ಹಾಗೂ ಇಲ್ಲಿನ ಹೂವಿನ ಚೌಕಿಗೆ ವೀರ ಹೋರಾಟಗಾರ ಹೆಂಜಾ ನಾಯ್ಕ ಹೆಸರು ನಾಮಕರಣಕ್ಕೆ ಜಿಲ್ಲಾಡಳಿತ, ನಗರಸಭೆ ಹಾಗೂ ಶಾಸಕರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ ಎಂದು ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರವಾರ-ಕೋಡಿಭಾಗ ರಸ್ತೆಗೆ ಹಾಗೂ ಹೂವಿನ ಚೌಕಿಗೆ ವೀರ ಹೆಂಜಾ ನಾಯ್ಕರ ಹೆಸರು ನಾಮಕರಣ ಮಾಡಬೇಕು ಎಂದು ಕಳೆದ ಅನೇಕ ವರ್ಷಗಳಿಂದ ಮನವಿ ಹಾಗೂ ಪ್ರತಿಭಟನೆ ನಡೆಸಲಾಗಿತ್ತು. ಇದೀಗ ಅವರ ಹೆಸರು ನಾಮಕರಣ ಮಾಡುವುದಕ್ಕೆ ಸಂಬಂಧಿಸಿದಂತೆ ನಗರಸಭೆ ನೀಲನಕ್ಷೆಯನ್ನು ಸಿದ್ಧಪಡಿಸಿದೆ. ಹೈಮಾಸ್ಟ್ ತೆರವು ಮಾಡಬೇಕು ಅಥವಾ ಬೇಡವೋ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಹೈಮಾಸ್ಟ್ ತೆರವು ಮಾಡಿದರೆ ಬೆಳಕಿನ ವ್ಯವಸ್ಥೆಗೆ ಅಡ್ಡಿಯಾಗಲಿದೆ. ಹಾಗಾಗಿ ಹೈಮಾಸ್ಟ್ ತೆರವು ಮಾಡದಂತೆ ನಗರಸಭೆಗೆ ನಾವೇ ಸಲಹೆ ನೀಡಿದ್ದೇವೆ ಎಂದು ಅವರು ತಿಳಿಸಿದರು.
ಹೆಂಜಾ ನಾಯ್ಕ ಅವರ ಹೆಸರು ವೃತ್ತಕ್ಕೆ ಇಡುವುದಕ್ಕೆ ಸಂಬಂಧಿಸಿದಂತೆ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಮನವಿ ನೀಡಲು ತೆರಳಿದ್ದ ಸಂದರ್ಭದಲ್ಲಿ ಅವರು ಉತ್ತಮ ರೀತಿಯಲ್ಲಿ ಸ್ಪಂದಿಸಿದರು. ಹಿಂದೆ ತಾಲೂಕು ಪಂಚಾಯಿತಿ ಸದಸ್ಯೆಯಾಗಿದ್ದ ಸಂದರ್ಭದಲ್ಲಿ ಅವರ ಬಗ್ಗೆ ಪುಸ್ತಕವೊಂದರಲ್ಲಿ ಓದಿದ್ದೇ ಎನ್ನುವುದನ್ನು ಅವರು ಸ್ಮರಿಸಿಕೊಂಡು, ಆದಷ್ಟು ಬೇಗನೇ ಹೂವಿನ ಚೌಕ್ಗೆ ಹೆಸರು ನಾಮಕರಣ ಮಾಡಲು ಕ್ರಮ ವಹಿಸುತ್ತೇನೆ ಎಂದು ಹೇಳಿಕೊಂಡು ಅದರಂತೆ ನಡೆದುಕೊಂಡಿದ್ದಾರೆ ಎಂದರು.
ಬರುವ ಡಿಸೆಂಬರ್ನಲ್ಲಿ ವೃತ್ತಕ್ಕೆ ಹೆಂಜಾ ನಾಯ್ಕ ಹೆಸರು ನಾಮಕರಣ ಮಾಡಲಾಗುವುದು ಎಂದು ನಗರಸಭೆಯ ಆಯುಕ್ತರು ತಿಳಿಸಿದ್ದಾರೆ. ಅಲ್ಲಿಯವರೆಗೆ ನಾವು ತಾಳ್ಮೆಯಿಂದ ಇರುತ್ತೇವೆ. ಮತ್ತೆ ವಿಳಂಬವಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ತಿಳಿಸಿದರು.
ನಗರಸಭೆ ಸದಸ್ಯ ನಂದಾ ನಾಯ್ಕ ಮಾತನಾಡಿ, ಬಾಡ ಮಹಾದೇವ ದೇವಸ್ಥಾನದ ಜಾತ್ರೆಗೆ ಹೆಂಜಾ ನಾಯ್ಕ ಅವರು ಕುದುರೆಯ ಮೇಲೆ ಬರುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ. ಅವರ ಕಾಲದಲ್ಲಿ ನಡೆಯುತ್ತಿದ್ದ ಜಾತ್ರೆ ಇಂದಿಗೂ ಅದೇ ಸಂಭ್ರಮದಲ್ಲಿ ನಡೆದುಕೊಂಡು ಬರುತ್ತಿದೆ ಎಂದರು. ಟಿಪ್ಪುವಿನ ಬೆದರಿಕೆಗೆ ಸೊಪ್ಪು ಹಾಕದ ಹೆಂಜಾ ನಾಯ್ಕ ತನ್ನ ಪ್ರಜೆಗಳೇ ತನಗೆ ಮುಖ್ಯ. ಮಕ್ಕಳ ಬಗ್ಗೆ ನಾನು ಚಿಂತಿಸಲಾರೆ ಎಂದು ಟಿಪ್ಪುವಿಗೆ ಸವಾಲು ಹಾಕಿದ್ದರು ಎಂದು ನಾಯ್ಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜು ನಾಯ್ಕ, ಮನೋಜ ಬಾಂದೇಕರ್, ನಿತ್ಯಾನಂದ ನಾಯ್ಕ, ಶ್ರೀಪಾದ ನಾಯ್ಕ, ಚಂದ್ರಕಾಂತ ನಾಯ್ಕ, ಮಹೇಶ ನಾಯ್ಕ, ಶಂಕರ ಗುನಗಿ ಹಾಗೂ ಶಬ್ಬೀರ್ ಶೇಖ್ ಇದ್ದರು.