ಶಿರಸಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿ, ವಿದ್ಯಾರ್ಥಿನಿಯನ್ನು ರಕ್ಷಿಸಿದ ಪೊಲೀಸರು ಕಾರ್ಯಕ್ಕೆ ಎಸ್ಪಿ ಸುಮನ್ ಪೆನ್ನೇಕರ್ ಸೇರಿ ಸಾರ್ವಜನಿಕರಿಂದ ಅಪಾರ ಶ್ಲಾಘನೆ ದೊರೆತಿದೆ.
ಘಟನೆಯ ಹಿನ್ನೆಲೆ:
ನ.15ರಂದು ಶಿರಸಿಯ ರಾಯಪ್ಪ ಹುಲೇಕಲ್ ಕಾಲೇಜ್ ಕ್ರಾಸ ಹತ್ತಿರ,ಶಿರಸಿ – ಬನವಾಸಿ ರಸ್ತೆಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ತನ್ನ ಮಗಳನ್ನು ಯಾರೋ ಆರೋಪಿತರು ಒಂದು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿರುತ್ತಾರೆಂದು ನೀಡಿದ ದೂರನ್ನು ಸವಾಲಾಗಿ ಸ್ವೀಕರಿಸಿದ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರ ತಂಡ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಾಳಂಗಿ ಸಮೀಪದ ದ್ಯಾಮನಕೊಪ್ಪ ನಿವಾಸಿ ಹೊನ್ನಪ್ಪ ಪುಟ್ಟಪ್ಪ ಈತನು ಯುವತಿಯನ್ನು ಅಪಹರಣ ಮಾಡಿ ಬೆಂಗಳೂರಿನಲ್ಲಿ ಅಕ್ರಮ ಬಂಧನದಲ್ಲಿಟ್ಟಿದ್ದನು. ನಂತರ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಬೆಂಗಳೂರಿನಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡು, ಅಪಹರಣಕ್ಕೀಡಾದ ಯುವತಿಯನ್ನು ರಕ್ಷಿಸಿದ್ದು, ಇತರೆ ಆರೋಪಿಗಳಾದ ಕಾಳಂಗಿಯ ಬಸವರಾಜ್ ಮತ್ತು ಹುಲ್ಲಪ್ಪ ತಲೆಮಾರೆಸಿಕೊಂಡಿದ್ದಾರೆ.
ತನಿಖೆಯಲ್ಲಿ ವಿದ್ಯಾರ್ಥಿನಿಯನ್ನು ಮೊದಲನೇ ಆರೋಪಿ ಹೊನ್ನಪ್ಪನು ಮದುವೆಯಾಗುವ ದುರುದ್ದೇಶದಿಂದ ಬಲವಂತವಾಗಿ ಕಿಡ್ನಾಪ್ ಮಾಡಿರುವುದು ದೃಢಪಟ್ಟಿದೆ.
ಪೋಲೀಸ್ ವರಿಷ್ಠಾಧಿಕಾರಿ ಡಾ|ಸುಮನ್ ಡಿ. ಪೆನ್ನೇಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಬದ್ರಿನಾಥ ನಿರ್ದೇಶನದಂತೆ, ಪೊಲೀಸ್ ಉಪಾಧೀಕ್ಷಕ ರವಿ ಡಿ ನಾಯ್ಕ ಶಿರಸಿ ಉಪವಿಭಾಗ ಹಾಗೂ ಪೊಲೀಸ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಪಿಎಸ್ಐ ಈರಯ್ಯ ಡಿ.ಎನ್.ಮತ್ತು ಸಿಬ್ಬಂದಿಗಳಾದ ಮಹಾದೇವ ನಾಯ್ಕ, ಪ್ರದೀಪ ರೇವಣಕರ, ಬಸವರಾಜ ಮ್ಯಾಗೇರಿ, ಸಂಗಪ್ಪ ಹರಿಜನ, ಗಣಪತಿ ನಾಯ್ಕ, ಸುನೀಲ ಹಡಲಗಿ, ಜಿಮ್ಮು ಸಿಂಧೆ, ಮಹಿಳಾ ಸಿಬ್ಬಂದಿಯವರ ವಿಶೇಷ ತಂಡ ಈ ಪ್ರಕರಣವನ್ನು ಅತ್ಯಂತ ಶೀಘ್ರವಾಗಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಕರಣ ಭೇದಿಸಿದ ಪೋಲೀಸ್ ಇಲಾಖೆಯ ಈ ಕಾರ್ಯವೈಖರಿಗೆ ಜನತೆ ಕೃತಜ್ಞತೆ ಅರ್ಪಿಸಿದೆ.